ಕನ್ನಡಪ್ರಭ ವಾರ್ತೆ ತರೀಕೆರೆ

ಸಾಮಾಜಿಕ ಹೋರಾಟಗಾರ, ಪ್ರಗತಿಪರ ಕೃಷಿಕರಾದ ದಿ.ಆರ್.ದೇವಾನಂದ ಅವರು ಯಾವಾಗಲೂ ಸಕಾರಾತ್ಮಕವಾಗಿ ಸಮಾಜದ ಹಿತಚಿಂತನೆ ಮಾಡುತ್ತಿದ್ದರು ಎಂದು ಶಿವಮೊಗ್ಗ ಮ್ಯಾಮ್‌ಕೋಸ್ ಉಪಾಧ್ಯಕ್ಷ ಮಹೇಶ್ ಹುಲ್ಕಳ್ಳಿ ಹೇಳಿದರು.

ಪಟ್ಟಣದ ಶ್ರೀ ರೇವಣ್ಣಸಿದ್ದೇಶ್ವರ ಮಾಂಗಲ್ಯ ಮಂದಿರದಲ್ಲಿ ಭಾನುವಾರ ದಿ.ಆರ್. ದೇವಾನಂದ ಅವರ ವೈಕುಂಠ ಸಮಾರಾಧನೆ ಸಂದರ್ಭದಲ್ಲಿ ಏರ್ಪಾಡಾಗಿದ್ದ ದಿ.ಆರ್.ದೇವಾನಂದ ಅವರ ಪುಣ್ಯಸ್ಮರಣೆ, ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಆರ್.ದೇವಾನಂದ ಅವರ ಜತೆ ಕಳೆದ ಮೂವತ್ತು ವರ್ಷಗಳಿಂದ ಒಡನಾಟ ಹೊಂದಿದ್ದೇವೆ, ಆರ್.ದೇವಾನಂದ ಅವರು ಆಡುಮುಟ್ಟದ ಸೊಪ್ಪಿಲ್ಲದಂತೆ ಎಲ್ಲ ಕ್ಷೇತ್ರಗಳಲ್ಲೂ ಅಧ್ಯಯನ ಮಾಡಿದವರು, ಅಡಕೆ ಕೃಷಿ ಬಗ್ಗೆ ಅವರು ಅಳವಾದ ಅಧ್ಯಯನ ಮಾಡಿದ್ದರು, ಆರ್. ದೇವಾನಂದ, ನಾವು ಮತ್ತು ಮುಖಂಡರಾದ ಭೀಮರಾವ್ ಮೂರು ಜನರು ಒಟ್ಟಿಗೆ ಮ್ಯಾಮ್‌ಕೋಸ್ ಸಂಸ್ಥೆಗೆ ಪದಾರ್ಪಣೆ ಮಾಡಿದವರು, ಮ್ಯಾಮ್‌ಕೋಸ್ ಸಂಸ್ಥೆಗೆ ಆರ್.ದೇವಾನಂದ ಅವರ ಕೊಡುಗೆ ಅಪಾರವಾಗಿದೆ, ದೇವಾನಂದ ಅವರ ಅಗಲುವಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಹೇಳಿದರು.

ಮಾಜಿ ಶಾಸಕ ಎಸ್.ಎಂ. ನಾಗರಾಜ್ ಮಾತನಾಡಿ, ಬಿಜೆಪಿಯನ್ನು ಸದೃಢವಾಗಿ ಕಟ್ಟಿ ಬೆಳೆಸುವಲ್ಲಿ ಆರ್. ದೇವಾನಂದ ಅವರು ಬಹಳವಾಗಿ ಹೋರಾಟ ಮಾಡಿದ್ದಾರೆ, ಸಹಕಾರ ಕ್ಷೇತ್ರದಲ್ಲಿ ಅವರು ಆಪಾರವಾದ ಕೊಡುಗೆಯನ್ನು ನೀಡಿದ್ದಾರೆ, ಅವರ ಕುಟುಂಬಕ್ಕೆ ಅವರ ಅಗಲುವಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ಕೊಡಲಿ ಎಂದು ಹೇಳಿದರು.


ಮ್ಯಾಮ್‌ಕೋಸ್ ನಿರ್ದೇಶಕ ಟಿ.ಎಲ್. ರಮೇಶ್ ಮಾತನಾಡಿ, ಆರ್.ದೇವಾನಂದ ಅವರು ಹಿರಿಯ ಚೇತನರು, ಅವರು ನನಗೆ ತಂದೆಯ ಸ್ಥಾನದಲ್ಲಿದ್ದು ನಮ್ಮನ್ನು ತಿದ್ದಿ ತೀಡಿ ಬೆಳೆಸಿದವರು, ಭದ್ರಾ ಮೇಲ್ದಂಡೆ ಇತ್ಯಾದಿ ತಾಲೂಕಿನ ಅನೇಕ ಜ್ವಲಂತ ಸಮಸ್ಯೆಗಳ ಬಗ್ಗೆ ಹೋರಾಟ ಮಾಡಿದರು. ಅಡಕೆ ಕೃಷಿ ಬಗ್ಗೆ ದೊಡ್ಡ ಹೋರಾಟ ಮಾಡಿದರು, ಅವರ ಕೊನೆ ಉಸಿರಿರುವ ತನಕ ಅವರು ಅಧ್ಯಯನಶೀಲರಾಗಿದ್ದರು ಎಂದು ಹೇಳಿದರು.

ಪುರಸಭೆ ಸದಸ್ಯ, ಬಿಜೆಪಿ ಮುಖಂಡ ಟಿ.ಎಂ.ಬೋಜರಾಜ್ ಮಾತನಾಡಿ, ಆರ್.ದೇವಾನಂದ ಅವರು ಹೆಚ್ಚು ಜ್ಞಾನಾರ್ಜನೆ ಸಂಪಾದಿಸಿದ್ದರು, ನಮ್ಮೆಲ್ಲರ ಹಿರಿಯರು, ಅವರು ನಮಗೆ ಸೈದ್ದಾಂತಿಕ ವಾಗಿ ಹಿರಿಯ ಮಿತ್ರರಾಗಿದ್ದರು, ಸದಾ ಪ್ರೇರಣೆ ನೀಡುತ್ತಿದ್ದರು, ಎಲ್ಲ ರಾಜಕೀಯ ಪಕ್ಷಗಳು ಆರ್.ದೇವಾನಂದ ಅವರನ್ನು ಇಷ್ಟಪಡುತ್ತಿದ್ದರು, ಆರ್.ದೇವಾನಂದ ಅವರು ರೈತರ ಹಿತಾಸಕ್ತಿಗೆ ಹೋರಾಡುತ್ತಿದ್ದರು, ಶುದ್ದ ರಾಜಕೀಯ ಚಿಕಿತ್ಸಕರಾಗಿದ್ದರು ಎಂದು ಹೇಳಿದರು.

ಪುರಸಭಾ ಮಾಜಿ ಅಧ್ಯಕ್ಷ ಟಿ.ಎಸ್. ಪ್ರಕಾಶ್ ವರ್ಮ ಮಾತನಾಡಿ, ಆರ್.ದೇವಾನಂದ ಅವರು ಸರಳ ಜೀವಿಗಳು, ಪ್ರಗತಿಪರ ಸಾವಯವ ಕೃಷಿಕರಾಗಿದ್ದರು, ಅಡಕೆ ಬಗ್ಗೆ ಸಾಕಷ್ಟು ಹೋರಾಟ ಮಾಡಿದ್ದರು, ರೈತರ ಹಿತಾಸಕ್ತಿಗೆ ಹೋರಾಟ ಮಾಡಿದರು ಎಂದರು.

ಕಸಾಪ ಅಧ್ಯಕ್ಷ ರವಿ ದಳವಾಯಿ, ಶಿವಮೊಗ್ಗ ಬಿ.ಜೆ.ಪಿ.ಮುಖಂಡರು ಹರಿಕೃಷ್ಣ, ಮುಖಂಡರಾದ ಮಾಕನಹಳ್ಳಿ ಭೈರಲಿಂಗಪ್ಪ, ಭೀಮರಾವ್, ಬಾಣೂರು ಚೆನ್ನಪ್ಪ ಮತ್ತಿತರರು ಮಾತನಾಡಿದರು.

ಬೆಂಗಳೂರು ಶಿಕ್ಷಣ ಇಲಾಖೆ ನಿವೃತ್ತ ನಿರ್ದೇಶಕ ಆರ್.ನರೇಂದ್ರ, ಆರ್.ಪ್ರಕಾಶ್, ವಕೀಲರಾದ ಶರತ್ ಚಂದ್ರ, ಡಾ.ತೇಜಸ್ವಿ ಟಿ.ಪಿ., ಟಿ.ಡಿ.ಸಂತೋಷ್, ಟಿ.ಡಿ.ಭರತ್ ಕುಟುಂಬದ ಸದಸ್ಯರು ಭಾಗವಹಿಸಿದ್ದರು.