ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ: ಭಾರತದಲ್ಲಿ ಹುಟ್ಟಿ ಇಡೀ ವಿಶ್ವದಲ್ಲಿ ಹರಡಿರುವ ತಥಾಗತ ಗೌತಮ ಬುದ್ಧರ ಬೌದ್ಧ ಧರ್ಮವನ್ನು ಉಳಿಸಿ ಬೆಳೆಸಲು ಧರ್ಮದ ಉಪಾಸಕರ ಮೇಲೆ ಬಹುದೊಡ್ಡ ಜವಾಬ್ದಾರಿ ಇದೆ ಎಂದು ಚಿಂತಕ ಜೆ.ಎಸ್.ಪಾಟೀಲ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.ನಗರದ ಸಾರಿಪುತ್ರ ಬುದ್ಧ ವಿಹಾರದಲ್ಲಿ ತಥಾಗತ ಗೌತಮ ಬುದ್ಧರ 2568ನೇ ಜನ್ಮ ಜಯಂತಿ ಪ್ರಯುಕ್ತ ಆಯೋಜಿಸಿದ್ದ ಸಮಾರಂಭದಲ್ಲಿ ಉಪನ್ಯಾಸಕರಾಗಿ ಮಾತನಾಡಿದರು. ಜಗತ್ತಿಗೆ ಶಾಂತಿ ಸಂದೇಶ ಸಾರಿದ ಮಹಾನ್ ಚೇತನ ಗೌತಮ್ ಬುದ್ಧರನ್ನು ನಮಗೆಲ್ಲ ಪರಿಚಯಿಸಿದವರು. ಭೋದಿಸತ್ವ ಬಾಬಾಸಾಹೇಬ ಅಂಬೇಡ್ಕರವರು. ಅವರು ತೋರಿದ ಬುದ್ಧರ ಮಾರ್ಗ ನಮಗೆಲ್ಲ ಇಂದು ವಿಮೋಚನೆಗೆ ಬಹುದೊಡ್ಡ ಸಾಧನವಾಗಿದೆ. ಭಾರತ ಜಗತ್ತಿಗೆ ಬೆಳಕಾಗಿ ವಿಶ್ವಕ್ಕೆ ಗುರುವಾಗಿ ಕಂಡಿದ್ದು ಬುದ್ಧರ ಜ್ಞಾನ ಕಾರಣ. ಜಗತ್ತಿನ ಪ್ರಥಮ ವಿಜ್ಞಾನಿ ಕಾರಣ ಹಾಗೂ ಪರಿಣಾಮದ ತತ್ವವನ್ನು ತಿಳಿಸಿದ ಮೊದಲ ವಿಜ್ಞಾನಿ ಗೌತಮರು ಎಂದು ಹೇಳಿದರು.ಈ ವೇಳೆ ಯೋಗ ಗುರುಗಳಾದ ಮಡಿವಾಳಪ್ಪ ದೊಡ್ಡಮನಿ ಅವರನ್ನು ಸನ್ಮಾನಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಬೌದ್ಧ ವಿಹಾರ ನಿರ್ಮಾಣ ಸಮಿತಿ ಅಧ್ಯಕ್ಷ ರಾಜಶೇಖರ ಯಡಹಳ್ಳಿ ವಹಿಸಿದ್ದರು. ಅತಿಥಿಗಳಾಗಿ ಭಾರತೀಯ ಬೌದ್ಧ ಮಹಾಸಭೆಯ ಬಸವರಾಜ ಚಲವಾದಿ, ಅನ್ನಪೂರ್ಣ ಬೆಳ್ಳೇನ್ನವರ, ಎಂ.ಪಿ.ದೊಡ್ಡಮನಿ ಸೇರಿ ಹಲವು ಮುಖಂಡರು, ಉಪಾಸಕರು ಸಮಾರಂಭದಲ್ಲಿ ಭಾಗವಹಿಸಿದ್ದರು. ವೆಂಕಟೇಶ್ ವಗ್ಗೆನವರ ನಿರೂಪಿಸಿ ವಂದಿಸಿದರು.