ಬಯೋಮೆಟ್ರಿಕ್‌ ತೊಂದರೆ ಇರುವ ಕಾರ್ಡ್‌ಗಳಿಗೆ ಪಡಿತರ ವಿತರಣೆ

| N/A | Published : May 15 2025, 02:06 AM IST / Updated: May 15 2025, 01:14 PM IST

ಸಾರಾಂಶ

ಆಹಾರ ಇಲಾಖೆಯ ಶಿರಸ್ತೆದಾರ ಚನ್ನಬಸಪ್ಪ ಅವರಿಗೆ ಸೂಚಿಸಿದರು. ನ್ಯಾಯಬೆಲೆ ಅಂಗಡಿಯಲ್ಲಿ ಬಯೋಮೆಟ್ರಿಕ್ ಬರಲಾರದಂತಹ ಪ್ರಕರಣಗಳಿಗೆ ಪರ್ಯಾಯ ಮಾರ್ಗ ಕಂಡುಕೊಳ್ಳಬೇಕು. ಪಡಿತರ ಕಾರ್ಡ್‌ ಹೊಂದಿದವರಿಗೆ ವಿತರಿಸಬೇಕು.

ಕುಷ್ಟಗಿ:  ಬಯೋಮೆಟ್ರಿಕ್ ತೊಂದರೆ ಇರುವಂತಹ ಪಡಿತರ ಕಾರ್ಡ್‌ದಾರರಿಗೆ ಪರ್ಯಾಯ ಮಾರ್ಗ ಕಂಡುಕೊಂಡು ಪಡಿತರ ವಿತರಿಸಬೇಕೆಂದು ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಶ್ರೀನಿವಾಸ ರೆಡ್ಡಿ ಹೇಳಿದರು.

ಪಟ್ಟಣದ ತಾಲೂಕು ಪಂಚಾಯಿತಿಯಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಪ್ರಗತಿ ಪರೀಶಿಲನಾ ಸಭೆಯಲ್ಲಿ ಭಾಗವಹಿಸಿದ ಅವರು ಆಹಾರ ಇಲಾಖೆಯ ಶಿರಸ್ತೆದಾರ ಚನ್ನಬಸಪ್ಪ ಅವರಿಗೆ ಸೂಚಿಸಿದರು. ನ್ಯಾಯಬೆಲೆ ಅಂಗಡಿಯಲ್ಲಿ ಬಯೋಮೆಟ್ರಿಕ್ ಬರಲಾರದಂತಹ ಪ್ರಕರಣಗಳಿಗೆ ಪರ್ಯಾಯ ಮಾರ್ಗ ಕಂಡುಕೊಳ್ಳಬೇಕು. ಪಡಿತರ ಕಾರ್ಡ್‌ ಹೊಂದಿದವರಿಗೆ ವಿತರಿಸಬೇಕು ಎಂದರು.

ಆಹಾರ ಶಿರಸ್ತೆದಾರ ಚನ್ನಬಸಪ್ಪ ಮಾತನಾಡಿ, ಈಗಾಗಲೆ ಈ ತಾಂತ್ರಿಕ ಸಮಸ್ಯೆಯನ್ನು ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದ್ದು ಬಗೆಹರಿಸುವ ಭರವಸೆ ನೀಡಿದ್ದಾರೆ. ಬಯೋಮೆಟ್ರಿಕ್ ಬರಲಾರದ ಕಾರ್ಡ್‌ಗಳಿಗೆ ವಿತರಿಸುವಂತೆ ನ್ಯಾಯಬೆಲೆ ಅಂಗಡಿಯವರಿಗೆ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದರು.

ಸಿಡಿಪಿಒ ಯಲ್ಲಮ್ಮ ಹಂಡಿ ಮಾತನಾಡಿ, ಗೃಹಲಕ್ಷ್ಮೀ ಯೋಜನೆಯಡಿಯಲ್ಲಿ ಒಟ್ಟು 18 ಕಂತುಗಳು ಜಮೆಯಾಗಿದ್ದು ಐದುನೂರಕ್ಕೂ ಅಧಿಕ ಕುಟುಂಬಗಳು ಜಿಎಸ್ಟಿ ಅಡಿಯಲ್ಲಿ ಬರುತ್ತಿವೆ. ಅಂತಹ ಕುಟುಂಬಗಳಿಗೆ ಇನ್ನೂ ಹಣ ಜಮೆಯಾಗಿಲ್ಲ. ಇದು ರಾಜ್ಯಮಟ್ಟದಲ್ಲಿನ ತಾಂತ್ರಿಕ ಸಮಸ್ಯೆಯಾಗಿದೆ ಎಂದರು.

ಜೆಸ್ಕಾಂ ಅಧಿಕಾರಿ ಮಹಬೂಬ್‌ ಮಾತನಾಡಿ, ತಾಲೂಕಿನಲ್ಲಿ ಒಟ್ಟು 55,958 ಫಲಾನುಭವಿಗಳ ಪೈಕಿ 50,971 ಫಲಾನುಭವಿಗಳಿಗೆ ಗೃಹಜ್ಯೋತಿ ಸೌಲಭ್ಯ ತಲುಪಿದೆ. ಉಳಿದ 4987ರಲ್ಲಿ ಸರ್ಕಾರಿ ಕಟ್ಟಡ, ದೇವಸ್ಥಾನ, ಬಿದ್ದಮನೆಗಳು ಸೇರಿದಂತೆ ಅನೇಕ ಕಾರಣದಿಂದ ಸೌಲಭ್ಯ ದೊರಕಿಲ್ಲ. ಒಟ್ಟು ತಾಲೂಕಿನಲ್ಲಿ ವಿದ್ಯುತ್ ಬಿಲ್ ₹ 2.47 ಕೋಟಿ ಬಾಕಿ ಇದ್ದು ಇದರಲ್ಲಿ ಗೃಹಜ್ಯೋತಿ ಫಲಾನುಭವಿಗಳ ಹಳೆಯ ಬಾಕಿ ₹ 30ಲಕ್ಷಕ್ಕೂ ಅಧಿಕ ಇದೆ ಎಂದರು.

ಶಕ್ತಿ ಯೋಜನೆ ಕುರಿತು ಮಾಹಿತಿ ನೀಡಿದ ಡಿಪೋ ಮ್ಯಾನೇಜರ್‌ ಸುಂದರಗೌಡ ಪಾಟೀಲ, ಬಸ್‌ನಲ್ಲಿ ನಿರ್ವಾಹಕರ ತಪ್ಪುಗಳು ಕಂಡುಬಂದಲ್ಲಿ ಅಂತಹ ಬಸ್‌ಗಳ ಸಂಖ್ಯೆಯೊಂದಿಗೆ ದೂರು ಕೊಟ್ಟರೆ ಕ್ರಮಕೈಗೊಳ್ಳಲು ಸುಲಭವಾಗಲಿದೆ ಎಂದರು. ನಂತರ ಯುವನಿಧಿ ಅಧಿಕಾರಿಗಳು ಮಾಹಿತಿ ನೀಡಿದರು.

ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕಾಧ್ಯಕ್ಷ ಫಾರೂಖ ಡಾಲಾಯತ ಮಾತನಾಡಿ, ಯೋಜನೆಗಳಿಗೆ ಸಂಬಂಧಿಸಿದ ಅಧಿಕಾರಿಗಳು ಜಾಗೃತಿ ಮೂಡಿಸುವ ಮೂಲಕ ಯೋಜನೆಗಳನ್ನು ಎಲ್ಲರು ಪಡೆದುಕೊಳ್ಳುವಂತೆ ನೋಡಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಹೋಬಳಿ ಮಟ್ಟದಲ್ಲಿ ಸಭೆ ಆಯೋಜಿಸಲಾಗುವುದು ಎಂದರು.

ಸಾರಿಗೆ ಬಸ್ಸಿನಲ್ಲಿ ಪ್ರಯಾಣಿಸುವ ಮಹಿಳೆಯರಿಗೆ ನಿರ್ವಾಹಕರು ಕೆಟ್ಟ ಪದ ಬಳಸಿ ನಿಂದಿಸುವ ಪ್ರಕರಣ ಹೆಚ್ಚುತ್ತಿದ್ದು ಕೂಡಲೆ ಸಭೆ ನಡೆಸಿ ನಿರ್ವಾಹಕರಿಗೆ ತಿಳಿ ಹೇಳುವಂತೆ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯೆ ಶೋಭಾ ಪುರ್ತಗೇರಿ ಡಿಪೋ ಮ್ಯಾನೇಜರ್‌ ಸುಂದರಗೌಡ ಅವರಿಗೆ ಸೂಚಿಸಿದರು.

ಈ ವೇಳೆ ಗ್ಯಾರಂಟಿ ಸಮಿತಿ ಜಿಲ್ಲಾ ಪದಾಧಿಕಾರಿಗಳಾದ ಅಮರೇಶ ಗಾಂಜಿ, ಶಾರದಾ ಕಟ್ಟಿಮನಿ, ಮೈನುದ್ದಿನ್ ಖಾಜಿ, ತಾಪಂ ಇಒ ಪಂಪಾಪತಿ ಹಿರೇಮಠ ಸೇರಿದಂತೆ ಸಮಿತಿಯ ಸದಸ್ಯರು ಇದ್ದರು.