ಸಕಾಲದಲ್ಲಿ ರೈತರಿಗೆ ಬಿತ್ತನೆ ಬೀಜ ವಿತರಿಸಿ

| Published : Jun 01 2025, 03:43 AM IST

ಸಾರಾಂಶ

ಮುಂಗಾರು ವಾಡಿಕೆಗೂ ಮೊದಲೇ ಆರಂಭವಾಗಿದ್ದು, ಉತ್ತಮ ಮಳೆಯಾಗಿದೆ. ಬಿತ್ತನೆಗೆ ರೈತರು ಭೂಮಿ ಹದಗೊಳಿಸುತ್ತಿದ್ದಾರೆ

ಹುಬ್ಬಳ್ಳಿ: ರಿಯಾಯಿತಿ ಬಿತ್ತನೆ ಬೀಜ, ಕೃಷಿ ಯಂತ್ರೋಪಕರಣಗಳು ಸೇರಿದಂತೆ ಕೃಷಿಭಾಗ್ಯ ಯೋಜನೆ, ಸಾವಯವ ಕೃಷಿ ಹಾಗೂ ಇತರೆ ಯೋಜನೆಗಳ ಲಾಭವನ್ನು ರೈತರು ಪಡೆಯಬೇಕು. ಅಲ್ಲದೆ ಅಧಿಕಾರಿಗಳು ರೈತರಿಗೆ ಬೀಜ, ಗೊಬ್ಬರ ಕೊರತೆಯಾಗದಂತೆ ಕ್ರಮಕೈಗೊಳ್ಳಬೇಕು ಎಂದು ಶಾಸಕ ಪ್ರಸಾದ ಅಬ್ಬಯ್ಯ ಅಧಿಕಾರಿಗಳಿಗೆ ಸೂಚಿಸಿದರು.

ಇಲ್ಲಿನ ಬಂಕಾಪುರ ಚೌಕ್ ಬಳಿ ಇರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಕೃಷಿ ಇಲಾಖೆಯಿಂದ ಕೊಡಮಾಡುವ ಬಿತ್ತನೆ ಬೀಜಗಳನ್ನು ಶನಿವಾರ ರೈತರಿಗೆ ವಿತರಿಸಿ ಮಾತನಾಡಿದರು.

ಮುಂಗಾರು ವಾಡಿಕೆಗೂ ಮೊದಲೇ ಆರಂಭವಾಗಿದ್ದು, ಉತ್ತಮ ಮಳೆಯಾಗಿದೆ. ಬಿತ್ತನೆಗೆ ರೈತರು ಭೂಮಿ ಹದಗೊಳಿಸುತ್ತಿದ್ದಾರೆ. ಕೃಷಿ ಇಲಾಖೆ ಹೆಸರು, ಉದ್ದು, ಶೇಂಗಾ, ಸೋಯಾಬಿನ್ ಬೆಳೆಗಳ ಬಿತ್ತನೆ ಬೀಜ ವಿತರಣೆಗೆ ಸಬ್ಸಿಡಿ ನೀಡುತ್ತಿದೆ. ಅರ್ಹ ರೈತರು ಸದುಪಯೋಗ ಪಡೆಯಬೇಕು ಎಂದರು.

ಸಹಾಯಕ ಕೃಷಿ ನಿರ್ದೇಶಕಿ ಮಂಜುಳಾ ತೆಂಬದ, ರೈತ ಸಂಘದ ಪ್ರಮುಖರಾದ ಚನ್ನಬಸಪ್ಪ ಅಸುಂಡಿ, ಫಕೀರಗೌಡ ಪಾಟೀಲ, ಅಡಿವಪ್ಪ ನಂದಿಹಳ್ಳಿ, ಫಕೀರಗೌಡ ಕಲ್ಲನ್ನವರ, ಗುರುಸಿದ್ದಪ್ಪ ಕಟಗಿ, ಮೋಹನ್ ಅಸುಂಡಿ, ಕುಮಾರಗೌಡ ಪಾಟೀಲ್, ಈಶ್ವರಪ್ಪ ಬದ್ರಾಪುರ ಸೇರಿದಂತೆ ಅನೇಕರಿದ್ದರು.