ಸಾರಾಂಶ
ರಿಯಾಜಅಹ್ಮದ ಎಂ. ದೊಡ್ಡಮನಿ
ಡಂಬಳ: ಉತ್ತರ ಕರ್ನಾಟಕದ ಸಹ್ಯಾದ್ರಿ ಕಪ್ಪತ್ತಗುಡ್ಡವನ್ನು ಇನ್ನಷ್ಟು ಹಸಿರುಗೊಳಿಸಲು ಅರಣ್ಯ ಇಲಾಖೆ ಸಿದ್ಧತೆ ನಡೆಸಿದೆ.ಕಪ್ಪತಗುಡ್ಡದ ಜತೆಗೆ, ಪಕ್ಕದ ರೈತರ ಜಮೀನುಗಳಲ್ಲಿ ಸಸಿಗಳನ್ನು ಬೆಳೆಸಲು ಬೇಕಾಗುವ 1.50 ಲಕ್ಷಕ್ಕೂ ಅಧಿಕ ಸಸಿಗಳನ್ನು ಬಾಗೇವಾಡಿ ನರ್ಸರಿಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಬೆಳೆಸಲಾಗಿದೆ.
ಸದ್ಯ ಸಿದ್ಧವಾಗಿರುವ 1.50 ಲಕ್ಷ ಸಸಿಗಳಲ್ಲಿ 1 ಲಕ್ಷದ 20 ಸಾವಿರ ಸಸಿಗಳನ್ನು ಕಪ್ಪತ್ತಗುಡ್ಡ ಭಾಗದಲ್ಲಿಯೇ ನೆಡುವುದು. ಇನ್ನುಳಿದ 30 ಸಾವಿರ ಸಸಿಗಳನ್ನು ರೈತರಿಗೆ ವಿತರಿಸುವ ಮೂಲಕ ರೈತರ ಜಮೀನುಗಳಲ್ಲಿಯೂ ಹಸಿರೀಕರಣ ಮಾಡುವುದು ಅರಣ್ಯ ಇಲಾಖೆಯ ಉದ್ದೇಶ. ಕಪ್ಪತ್ತಗುಡ್ಡ ವಲಯ ಅರಣ್ಯ ಅಧಿಕಾರಿ ಮಂಜುನಾಥ ಮೇಗಲಮನಿ ಮತ್ತು ಹಲವಾರು ಅಧಿಕಾರಿಗಳು, ಸಿಬ್ಬಂದಿ ನಿರಂತರ ಶ್ರಮದಿಂದ ಇಂಥದೊಂದು ಕಾರ್ಯಕ್ಕೆ ಸನ್ನದ್ಧರಾಗಿದ್ದಾರೆ.ವಿಶೇಷ ಕಾಳಜಿ:ಅರಣ್ಯ ಇಲಾಖೆಯಿಂದ ಸಿದ್ಧವಾಗಿರುವ ಈ ಸಸಿಗಳನ್ನು ಬೆಳೆಸುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ಹಲವಾರು ತಿಂಗಳುಗಳ ಶ್ರಮವಿದೆ. ಮೊದಲು ಗೊಬ್ಬರ, ಮರಳು ಮತ್ತು ಕೆಂಪು ಮಣ್ಣನ್ನು ಬಹಳ ಎಚ್ಚರಿಕೆಯಿಂದ ಸಂಯೋಜನೆ ಮಾಡಿ ಫಲವತ್ತಾದ ಮಣ್ಣನ್ನು ತಯಾರಿಸಿ. ನಂತರ ಬೀಜಗಳನ್ನು ಸಾಮಾನ್ಯವಾಗಿ ಜನವರಿ ಮತ್ತು ಮಾರ್ಚ್ ನಡುವೆ ಚೀಲಗಳಲ್ಲಿ ಹಾಕಿ, ಅವುಗಳು ಮೊಳಕೆಯೊಡೆದು ಅಲ್ಪ ಬೆಳೆದ ನಂತರ ಜೂನ್ ತಿಂಗಳಲ್ಲಿ ಅವುಗಳನ್ನು ದೊಡ್ಡ ಚೀಲಗಳಲ್ಲಿ ಸ್ಥಳಾಂತರಿಸಲಾಗುತ್ತದೆ. ಹೀಗೆ ನಿರಂತರವಾಗಿ ಒಂದು ವರ್ಷ ಶ್ರಮಪಟ್ಟ ನಂತರ ಸಸಿಗಳು ನಾಟಿ ಮಾಡಲು ಸಿದ್ಧವಾಗುತ್ತವೆ.
ರೈತರಿಗೆ ವಿತರಿಸುವ ಸಸಿಗಳು:ಆರ್ಎಸ್ಪಿ ಅಡಿ ರೈತರ ವಿತರಣೆಗಾಗಿ ಸಿದ್ಧವಾಗಿರುವ 30 ಸಾವಿರ ಸಸಿಗಳಲ್ಲಿ ಪ್ರಮುಖವಾಗಿ ಅತ್ಯಂತ ಬೆಲೆಬಾಳುವ, ರೈತರಿಗೆ ಮುಂದೆ ವರದಾನವಾಗುವ ಸಾಗವಾನಿ, ಮಹಾಗನಿ, ಸೀತಾಫಲ, ಕರಿಬೇವು, ನುಗ್ಗೆ, ಲಿಂಬೆ, ಬಿದಿರು, ನೇರಳೆ, ನೆಲ್ಲಿ, ಮಾವು ಸಿದ್ಧವಾಗಿವೆ. 6x9 ಎತ್ತರದ ಒಂದು ಸಸಿಗೆ ₹ 3, 8x12 ಎತ್ತರದ ಒಂದು ಸಸಿಗೆ ₹ 6 ಅರಣ್ಯ ಇಲಾಖೆಗೆ ಭರಿಸುವುದರ ಮೂಲಕ ಸಸಿಗಳನ್ನು ರೈತರು ಪಡೆದುಕೊಳ್ಳಬಹುದಾಗಿದ್ದು, ರೈತರಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ನೀಡಲಾಗುತ್ತಿದೆ.
ಕಪ್ಪತ್ತಗುಡ್ಡ ಅಷ್ಟೇ ಅಲ್ಲ ಜಿಲ್ಲೆಯ ಸರ್ಕಾರಿ ಶಾಲೆ, ಕಾಲೇಜುಗಳು, ಸರ್ಕಾರಿ ಜಾಗೆಗಳಲ್ಲಿ ಅರಳಿ, ಆಲ, ಹತ್ತಿ, ಇಲಾಚಿ, ನೇರಳೆ, ಹೊಂಗೆ, ತಪಸ್ಸಿ, ಬಿಳಿಮತ್ತಿ, ಕಮರ, ಸೋನಾಡಾ, ಬೇವು, ಸೀತಾಫಲ, ಶಿವನಿ, ಭಾಗ್ಯ ಸೇರಿದಂತೆ ವಿವಿಧ ತಳಿಯ ಸಸಿಗಳು, ತಬೆಬುಯಾ, ಅರ್ಜೆಂಟೀಯಾ, ಭಾರತೀಯ ಕಹಳೆ ಮರ, ಚಂಪಕ್ ಸೇರಿದಂತೆ ವಿಶೇಷ ಹೂವಿನ ಸಸಿಗಳು ಕೂಡಾ ನೆಡಲಾಗುತ್ತಿದೆ.ವರ್ಷದಿಂದ ವರ್ಷಕ್ಕೆ ತಾಪಮಾನ ಪ್ರಮಾಣ ಹೆಚ್ಚಾಗುತ್ತಿದೆ. ಮಳೆ ಪ್ರಮಾಣ ಕಡಿಮೆಯಾಗುತ್ತಿದೆ. ಇದರ ತಡೆಗೆ ಪ್ರತಿಯೊಬ್ಬರು ಗಮನ ವಹಿಸಿ ಗಿಡಗಳನ್ನು ಹೇರಳವಾಗಿ ಬೆಳೆಸಬೇಕು. ಇದರಿಂದ ಸಹಜವಾಗಿಯೇ ಆಮ್ಲಜನಕದ ಪ್ರಮಾಣವೂ ಹೆಚ್ಚಾಗುತ್ತದೆ. ವಾಯುಮಾಲಿನ್ಯ ಕಡಿಮೆಯಾಗಿ, ಮಳೆ ಪ್ರಮಾಣ ಹೆಚ್ಚಾಗಿ, ಬರಗಾಲದಂತಹ ಸ್ಥಿತಿ ನಿರ್ಮಾಣವಾಗುವುದಿಲ್ಲ. ಈ ಬಗ್ಗೆ ಪ್ರತಿಯೊಬ್ಬರೂ ಗಮನ ಹರಿಸಬೇಕು. ಸಸಿಗಳನ್ನು ಪಡೆದುಕೊಳ್ಳಲು ಇಚ್ಛಿಸುವವರು ಅರಣ್ಯ ಇಲಾಖೆಯ ಶಂಕರ ಕೋನಪ್ಪನವರ 9886583017, ಕೃಷ್ಣಾ ಪಮ್ಮಾರ 7483136732 ಇವರನ್ನು ಸಂಪರ್ಕಿಸಬಹುದಾಗಿದೆ.
ನಮ್ಮ ಬಾಗೇವಾಡಿ ನರ್ಸರಿಯಲ್ಲಿ 1.50 ಲಕ್ಷ ಸಸಿಗಳನ್ನು ಬೆಳೆಸಲಾಗಿದೆ. ಅವುಗಳಲ್ಲಿ 1.20 ಲಕ್ಷ ಸಸಿಗಳನ್ನು ಕಪ್ಪತ್ತಗುಡ್ಡದಲ್ಲಿ ನೆಡಲಾಗುವುದು. ಉಳಿದ 30 ಸಾವಿರ ಸಸಿಗಳನ್ನು ರೈತರಿಗೆ ನೀಡಲಿದ್ದೇವೆ. ರೈತರು ತಮ್ಮ ಜಮೀನುಗಳು, ತೋಟಗಳಲ್ಲಿ ನೆಡಲು ಮುಂದಾಗಬೇಕು ಎಂದು ಕಪ್ಪತ್ತಗುಡ್ಡ ವಲಯ ಅರಣ್ಯಾಧಿಕಾರಿ -ಮಂಜುನಾಥ ಮೇಗಲಮನಿ ಹೇಳಿದರು.