ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಬೆಳಗಾವಿ ನಗರದ ಪತ್ರಕರ್ತರ ಆರೋಗ್ಯದ ಹಿತದೃಷ್ಟಿಯಿಂದ ಮಹಾನಗರ ಪಾಲಿಕೆಯಿಂದ ಆರೋಗ್ಯ ವಿಮೆ ಯೋಜನೆ ಜಾರಿಗೊಳಿಸಲಾಗಿದೆ ಎಂದು ಮೇಯರ್ ಮಂಗೇಶ ಪವಾರ ಹೇಳಿದರು. ಮಹಾನಗರ ಪಾಲಿಕೆಯ ಮೇಯರ್ ಕಚೇರಿಯಲ್ಲಿ ಶನಿವಾರ ಮಹಾನಗರ ಪಾಲಿಕೆ ವತಿಯಿಂದ ಪತ್ರಕರ್ತರಿಗೆ ಆರೋಗ್ಯ ವಿಮೆ ಯೋಜನೆ ಕಾರ್ಡಗಳನ್ನು ಸಾಂಕೇತಿಕವಾಗಿ ವಿತರಿಸಿ ಅವರು ಮಾತನಾಡಿದರು. ಇತ್ತೀಚಿನ ದಿನಮಾನಗಳಲ್ಲಿ ಪ್ಲಾಸ್ಟಿಕ್ ಬಳಕೆ ಮಾಡುವುದನ್ನು ಕಡಿಮೆ ಮಾಡಬೇಕು. ಸುಂದರ ಬೆಳಗಾವಿ ಮಾಡಲು ಪತ್ರಕರ್ತರು ಸಹಕರಿಸಬೇಕು ಎಂದರು.ಉಪಮೇಯರ್ ವಾಣಿ ಜೋಶಿ ಮಾತನಾಡಿ, ಪತ್ರಕರ್ತರ ಕುಟುಂಬದ ಹಿತದೃಷ್ಟಿಯಿಂದ ₹3 ಲಕ್ಷದಿಂದ ₹5 ಲಕ್ಷಕ್ಕೆ ಪತ್ರಕರ್ತರ ಆರೋಗ್ಯ ವಿಮೆ ಮಾಡಲಾಗಿದೆ. ಎಲ್ಲರೂ ಆರೋಗ್ಯದ ಕಡೆ ಗಮನ ಹರಿಸಬೇಕು ಎಂದರು. ಮಹಾನಗರ ಪಾಲಿಕೆ ಆಯುಕ್ತರಾದ ಶುಭ ಬಿ. ಮಾತನಾಡಿ, ಹಲವಾರು ವರ್ಷಗಳಿಂದ ಪತ್ರಕರ್ತರಿಗೆ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಆರೋಗ್ಯದ ಕಾರ್ಡ್ ವಿತರಿಸಲಾಗುತ್ತಿದೆ. ಮೊದಲು ₹3 ಲಕ್ಷ ಆರೋಗ್ಯ ವಿಮೆಯನ್ನು ಪತ್ರಕರ್ತರ ಬೇಡಿಕೆ ಹಿನ್ನೆಲೆಯಲ್ಲಿ ₹5 ಲಕ್ಷಕ್ಕೆ ಹೆಚ್ಚಳ ಮಾಡಲಾಗಿದೆ. ಇದಕ್ಕೆ ಎಲ್ಲ ಸದಸ್ಯರು ಸಹಕಾರ ನೀಡಿದ್ದಾರೆ ಎಂದರು. ಮನುಷ್ಯನಿಗೆ ಏನಾದರೂ ಏರುಪೇರು ಆಗುವುದು ಸಹಜ. ಆರೋಗ್ಯದಲ್ಲಿ ಏನಾದರೂ ಏರುಪೇರಾದರೆ ಆರೋಗ್ಯ ವಿಮೆಯಿಂದ ಲಾಭಪಡೆಯಿರಿ ಎಂದರು.
ಪಾಲಿಕೆ ಆಡಳಿತ ಪಕ್ಷದ ನಾಯಕ ಹನುಮಂತ ಕೊಂಗಾಲಿ ಮಾತನಾಡಿ, ಬೆಳಗಾವಿ ಮಹಾನಗರ ಪಾಲಿಕೆಯಿಂದ ಮೊದಲ ಬಾರಿಗೆ ಪತ್ರಕರ್ತರಿಗೆ ಆರೋಗ್ಯ ವಿಮೆ ಜಾರಿ ಮಾಡಲಾಗಿದೆ. ಒಂದು ಪತ್ರಕರ್ತರ ಕುಟುಂಬಕ್ಕೆ ₹5 ಲಕ್ಷ ಆರೋಗ್ಯ ವಿಮೆ ನೀಡಲಾಗಿದೆ. ಮೇಯರ್ ಹಾಗೂ ಉಪಮೇಯರ್ ಮಾರ್ಗದರ್ಶನದಲ್ಲಿ ಈ ಆರೋಗ್ಯ ವಿಮೆ ಜಾರಿ ಮಾಡಿದ್ದೇವೆ. ಇದರ ಲಾಭವನ್ನು ಎಲ್ಲ ಪತ್ರಕರ್ತರು ಪಡೆದುಕೊಳ್ಳಬೇಕು ಎಂದರು.ಬೆಳಗಾವಿ ಪತ್ರಕರ್ತರ ಸಂಘದ ಅಧ್ಯಕ್ಷ ವಿಲಾಸ ಜೋಶಿ ಮಾತನಾಡಿ, ಮೊದಲು ಪಾಲಿಕೆಯಿಂದ ಪತ್ರಕರ್ತರಿಗೆ ₹3 ಲಕ್ಷ ಆರೋಗ್ಯ ವಿಮೆ ಇತ್ತು. ಇದನ್ನು ₹5 ಲಕ್ಷ ಮಾಡಬೇಕು ಎಂದು ಮನವಿ ಮಾಡಿದಾಗ ಅದನ್ನು ಹೆಚ್ಚು ಮಾಡಿಕೊಟ್ಟ ಮೇಯರ್, ಉಪಮೇಯರ್, ಸ್ಥಳೀಯ ಶಾಸಕರು ಸಹಕಾರ ನೀಡಿದ್ದಾರೆ ಎಲ್ಲ ಪತ್ರಕರ್ತರ ಪರವಾಗಿ ಧನ್ಯವಾದಗಳನ್ನು ತಿಳಿಸಿದರು.
ಎಲೆಕ್ಟ್ರಾನಿಕ್ ಮಿಡಿಯಾ ಅಸೋಸಿಯೇಷನ್ ಸಂಘದ ಅಧ್ಯಕ್ಷ ಮಂಜುನಾಥ ಪಾಟೀಲ್ ಮಾತನಾಡಿ, ಬೆಳಗಾವಿ ಪತ್ರಕರ್ತರಿಗೆ ಪಾಲಿಕೆಯಿಂದ ಆರೋಗ್ಯ ವಿಮೆ ಕಾರ್ಡ್ ವಿತರಿಸಿದ್ದು ಸಂತಸದ ಸಂಗತಿ. ಕೆಲವೊಂದ ಪತ್ರಕರ್ತರ ಹೆಸರು ಬಿಟ್ಟು ಹೋಗಿವೆ. ಅವುಗಳನ್ನು ಸೇರಿಸಿ ಎಂದರು. ಪತ್ರಕರ್ತರಾದ ರಾಜು ಗವಳಿ, ಶ್ರೀಶೈಲ ಮಠದ, ರವಿ ಉಪ್ಪಾರ, ಮುನ್ನಾ ಭಾಗವಾನ, ಮಲ್ಲಿಕಾರ್ಜುನ ಮುಗಳಿ, ಸಂಜಯ ಸೂರ್ಯವಂಶಿ ಮೊದಲಾದವರು ಉಪಸ್ಥಿತರಿದ್ದರು.