ಕನ್ನಡಪ್ರಭ ವಾರ್ತೆ ಮಂಡ್ಯ

ಜಿಲ್ಲಾ ಕುರುಬರ ಸಂಘಕ್ಕೆ ಚುನಾವಣೆ ನಡೆಸುವಂತೆ ಹೈಕೋರ್ಟ್ ಸೂಚಿಸಿರುವ ಹಿನ್ನೆಲೆಯಲ್ಲಿ ಸಂಘದ ೯೦೦೦ ಹೊಸ ಸದಸ್ಯರಿಂದ ನೋಂದಣಿಗಾಗಿ ಸಂಗ್ರಹಿಸಿರುವ ೪೫ ಲಕ್ಷ ರು.ಗಳನ್ನು ರಿಸರ್ವ್ ಫಂಡ್‌ನಲ್ಲಿ ಠೇವಣಿ ಇಡುವಂತೆ ಸಹಕಾರ ಸಂಘಗಳ ಉಪನಿಬಂಧಕರಿಗೆ ಸಂಘದ ಮಾಜಿ ನಿರ್ದೇಶಕ ಎ.ಕೃಷ್ಣ ಮನವಿ ಸಲ್ಲಿಸಿದ್ದಾರೆ.

ಹೊಸ ಸದಸ್ಯರಿಂದ ಸದಸ್ಯತ್ವ ನೋಂದಣಿಗೆ ಪ್ರತಿ ಸದಸ್ಯರಿಂದ ಅರ್ಜಿಯ ಜೊತೆ ೫೦೦ ರು. ಸ್ವೀಕರಿಸಿದ್ದಾರೆ. ಇದರ ಮೊತ್ತ ೪೫ ಲಕ್ಷ ರು.ಗಳಾಗಿದೆ. ಈ ಹಣವನ್ನು ರಿಸರ್ವ್ ಫಂಡ್‌ನಲ್ಲಿ ಇಡುವುದಕ್ಕೆ ಕ್ರಮ ವಹಿಸುವಂತೆ ಕೋರಿದ್ದಾರೆ.

ಸಂಘದ ಹಣಕಾಸು ವ್ಯವಹಾರವು ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ ಎರಡು ಎಸ್‌ಬಿ ಖಾತೆಗಳಲ್ಲಿ ನಡೆಯುತ್ತಿದೆ. ಈ ಖಾತೆಯ ಪಾಸ್‌ಬುಕ್, ಚೆಕ್‌ಬುಕ್‌ಗಳನ್ನು ಕೂಡಲೇ ಸಹಕಾರ ಸಂಘಗಳ ನಿಬಂಧಕರು ವಶಕ್ಕೆ ಪಡೆದು ಯಾವುದೇ ರೀತಿಯ ವ್ಯವಹಾರ ಮಾಡದಂತೆ ಸ್ಥಗಿತಗೊಳಿಸಲು ಆದೇಶಿಸುವಂತೆ ಮನವಿ ಮಾಡಿದ್ದಾರೆ.

ಈ ಎರಡು ಖಾತೆಗಳಲ್ಲದೆ ಇದೇ ಶಾಖೆಯ ಇತರೆ ಯಾವುದೇ ಖಾತೆಯಲ್ಲಿ ವ್ಯವಹಾರ ಮಾಡುತ್ತಿದ್ದರೂ ಆ ಖಾತೆಯನ್ನು ಸ್ಥಗಿತಗೊಳಿಸಬೇಕು. ಅಲ್ಲದೇ, ಬೇರೆ ಯಾವುದೇ ಬ್ಯಾಂಕ್‌ನಲ್ಲಿ ಯಾವುದೇ ರೀತಿಯ ಖಾತೆ ಹೊಂದಿದ್ದರೆ, ವ್ಯವಹಾರ ಮಾಡುತ್ತಿದ್ದರೆ ಆ ಖಾತೆಯನ್ನೂ ಸ್ಥಗಿತಗೊಳಿಸುವಂತೆ ಕೋರಿದ್ದಾರೆ.


ಸಂಘಕ್ಕೆ ನೋಟಿಸ್ ಜಾರಿ:

ಜಿಲ್ಲಾ ಕುರುಬರ ಸಂಘಕ್ಕೆ ಚುನಾವಣೆ ನಡೆಸುವಂತೆ ರಾಜ್ಯ ಉಚ್ಛ ನ್ಯಾಯಾಲಯ ಆದೇಶ ಹೊರಡಿಸಿರುವುದರಿಂದ ಸಂಘ-ಸಂಸ್ಥೆಗಳ ನೋಂದಣಾಧಿಕಾರಿಗಳು ಸಂಘಕ್ಕೆ ನೋಟಿಸ್ ಜಾರಿಗೊಳಿಸಿದ್ದಾರೆ. ನ್ಯಾಯಾಳಯದ ಆದೇಶಾನುಸಾರ ಸಂಘದ ಕಾರ್ಯಕಾರಿ ಸಮಿತಿಯ ಅಧಿಕಾರವಧಿ ವಾಸ್ತವವಾಗಿ ಮುಗಿದಿದೆಯೇ ಎಂಬುದರ ಬಗ್ಗೆ ಪರಿಶೀಲಿಸಲು ಹಿಂದಿನ ವರ್ಷದಲ್ಲಿ ಕಾರ್ಯಕಾರಿ ಸಮಿತಿಯು ಆಯ್ಕೆಯಾಗಿರುವ ಸಂಬಂಧ ಎಲ್ಲಾ ಮೂಲ ದಾಖಲೆಗಳನ್ನು ಮತ್ತು ಸಂಘದ ಬೈಲಾ ದೃಢೀಕೃತ ಪ್ರತಿಯನ್ನು ಏ.೩೦ರ ಬೆಳಗ್ಗೆ ೧೦ ಗಂಟೆಗೆ ಖುದ್ದು ಕಚೇರಿಗೆ ಹಾಜರಾಗಿ ತಪ್ಪದೇ ಸಲ್ಲಿಸುವಂತೆ ತಿಳಿಸಲಾಗಿದೆ. ತಪ್ಪಿದಲ್ಲಿ ಮುಂದಿನ ಕಾನೂನಿನ ಆಗು-ಹೋಗುಗಳಿಗೆ ನಿಮ್ಮನ್ನೇ ನೇರ ಹೊಣೆಗಾರರನ್ನಾಗಿ ಮಾಡುವುದಾಗಿ ಎಚ್ಚರಿಸಿದ್ದಾರೆ.