ಕನ್ನಡಪ್ರಭ ವಾರ್ತೆ ಸುತ್ತೂರು
ಮೊಬೈಲ್ ಮತ್ತು ಸಾಮಾಜಿಕ ಮಾಧ್ಯಮಗಳ ದಾಸರಾಗಬೇಡಿ ಎಂದು ಹಿರಿಯ ಪತ್ರಕರ್ತ ಕೆ.ಎನ್. ಚನ್ನೇಗೌಡ ಹೇಳಿದರು.ಸುತ್ತೂರು ಶ್ರೀ ಕ್ಷೇತ್ರದಲ್ಲಿ ಜಗದ್ಗುರು ಶ್ರೀವೀರಸಿಂಹಾಸನ ಮಹಾಸಂಸ್ಥಾನ ಮಠ, ಶ್ರೀ ಶಿವರಾತ್ರೀಶ್ವರ ಧಾರ್ಮಿಕ ದತ್ತಿ ಹಾಗೂ ಜೆಎಸ್ಎಸ್ ಮಹಾವಿದ್ಯಾಪೀಠಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ತಾಂತ್ರಿಕ ವಿದ್ಯಾರ್ಥಿಗಳ ಶಿಬಿರದ ಸಮಾರೋಪದಲ್ಲಿ ಅವರು ಮಾತನಾಡಿದರು.
ಯುವಕರಲ್ಲಿ ಸ್ವನಿಯಂತ್ರಣ ಶಕ್ತಿ ಕಡಿಮೆಯಾಗುತ್ತಿದೆ. ಒತ್ತಡ ನಿರ್ವಹಿಸುವಲ್ಲಿ ಸೋಲುತ್ತಿದ್ದಾರೆ. ಪ್ರತಿಯೊಂದು ವಿಷಯಕ್ಕೂ ತೀಕ್ಷ್ಣ ಪ್ರತಿಕ್ರಿಯೆ ನೀಡುವುದು ಅಭ್ಯಾಸವಾಗಿದೆ. ಮಾದಕದ್ರವ್ಯ ಸೇವನೆ, ಧೂಮಪಾನ, ಆನ್ ಲೈನ್ ಬೆಟ್ಟಿಂಗ್ ಇವೇ ಮೊದಲಾದ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ರಾಷ್ಟ್ರಕ್ಕೆ ಉತ್ತಮ ಕೊಡುಗೆ ನೀಡಬಲ್ಲ ವಿದ್ಯಾರ್ಥಿಗಳು ಉತ್ತಮ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಬೇಕು. ಸಮಾಜಮುಖಿ ಚಟುವಟಿಕೆಗಳಲ್ಲಿ ಉತ್ಸಾಹದಿಂದ ತೊಡಗಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಶ್ರೀ ಸುತ್ತೂರು ಮಠವು ನಡೆಸುತ್ತಿರುವ ಇಂತಹ ವ್ಯಕ್ತಿತ್ವ ವಿಕಸನ ಶಿಬಿರಗಳು ಬಹಳ ಸಹಕಾರಿಯಾಗಲಿವೆ ಎಂದರು.ಮಹಾರಾಜ ವಿದ್ಯಾಸಂಸ್ಥೆ ಟ್ರಸ್ಟ್ ಅಧ್ಯಕ್ಷ ಎಸ್. ಮುರುಳಿ ಅವರು ವ್ಯಕ್ತಿಗೆ ಹಣಕ್ಕಿಂತ ಗುಣಮುಖ್ಯ. ವ್ಯಕ್ತಿತ್ವ ನಿರ್ಮಾಣದ ಗುಣಗಳು ಆಳವಾಗಿರಬೇಕು. ಆಸೆ, ಆಮೀಷಗಳಿಗೆ ಒಳಗಾಗಬಾರದು. ಹೊಸ ಆಲೋಚನೆಗಳನ್ನು ಮಾಡುತ್ತ, ಅನ್ವೇಷಣಾತ್ಮಕ ಮಾರ್ಗದಲ್ಲಿ ಮುನ್ನಡೆಯಬೇಕು. ಇಂತಹ ಶಿಬಿರಗಳಿಂದ ಸಾಮರ್ಥ್ಯವು ವೃದ್ಧಿಯಾಗುತ್ತದೆ ಎಂದರು.
ಇಸ್ರೋದ ವಿಜ್ಞಾನಿ ಎಂ.ವಿ.ರೂಪ ಮಾತನಾಡಿ, ಮಹಿಳೆಯರು ಬಾಹ್ಯಾಕಾಶ ಸಂಶೋಧನಾ ಕ್ಷೇತ್ರಗಳಲ್ಲಿ ವಿಜ್ಞಾನಿಗಳಾಗಿ ಕಾರ್ಯನಿರ್ವಹಿಸಲು ಪ್ರಯತ್ನಿಸಬೇಕು. ಉತ್ತಮ ನಾಯಕರಾದವರು ಯಶಸ್ಸನ್ನು ಅವರ ತಂಡದ ಸದಸ್ಯರಿಗೆ ಅರ್ಪಿಸಿ, ಸೋಲಿನ ಹೊಣೆಯನ್ನು ತಾವೇ ಹೊರುತ್ತಾರೆ. ದೀರ್ಘ ಕಾಲದ ಏಕಾಗ್ರತೆಯು ವೈಜ್ಞಾನಿಕ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಲು ಬಹಳ ಮುಖ್ಯವಾಗಿದೆ. ಧ್ಯಾನದಿಂದ ಇದನ್ನು ಸಂಪಾದಿಸಬಹುದು ಎಂದು ನುಡಿದರು.
ಜೆಎಸ್ಎಸ್ ವಿಜ್ಞಾನ ಮತ್ತು ತಾಂತ್ರಿಕ ವಿಶ್ವವಿದ್ಯಾನಿಲಯದ ಕುಲಪತಿ ಎ.ಎನ್. ಸಂತೋಷ್ಕುಮಾರ್ ಅವರು ಒಳ್ಳೆಯ ವರ್ತನೆ, ಬದುಕುವ ಕಲೆ, ಮನಸ್ಥೈರ್ಯ ಹಾಗೂ ಸಮಾಜವು ಸ್ವೀಕರಿಸುವಂತಹ ಗುಣಗಳನ್ನು ಬೆಳೆಸಿಕೊಳ್ಳಬೇಕು. ಎಷ್ಟೇ ವಿದ್ಯಾವಂತರಾದರೂ ಸಮಯ, ಸಂದರ್ಭ, ಸ್ಥಳ ಹಾಗೂ ವ್ಯಕ್ತಿಗಳೊಂದಿಗೆ ಹೇಗೆ ವರ್ತಿಸಬೇಕು ಎಂಬುದನ್ನು ಕಲಿಯಬೇಕು. ಸ್ವತಂತ್ರವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದರು.
ಇನ್ಫೋಸಿಸ್ ಗ್ಲೋಬಲ್ ಎಜುಕೇಷನ್ ಸೆಂಟರ್ ವ್ಯವಸ್ಥಾಪಕ ಕೆ.ಎಸ್. ಸುಂದರ್ ಮಾತನಾಡಿ, ಭಾರತೀಯ ಮೌಲ್ಯಗಳಿಗೆ ಕಾಲ ಮಿತಿ ಇಲ್ಲ. ಹುಟ್ಟಿನಿಂದ ಸಾಯುವ ತನಕ ಅವುಗಳನ್ನು ಅಳವಡಿಸಿಕೊಂಡು ಬದುಕಬೇಕು. ಅಹಿಂಸೆಯೆ ಪರಮೋಧರ್ಮ ಎಂಬ ನುಡಿಯಂತೆ ಬದುಕಿನಲ್ಲಿ ಯಾರಿಗೂ ತೊಂದರೆ ಕೊಡದೆ ಸಕಲ ಜೀವಿಗಳಲ್ಲಿ ಕರುಣೆ, ದಯೆ ತೋರಿಸಬೇಕು. ತಂತ್ರಜ್ಞಾನದ ಜೊತೆಗೆ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಹೋಗಬೇಕು ಎಂದರು.ಶಿಕ್ಷಣ ತಜ್ಞ ಸೀಮಾ ದುಬೆ ಅವರು, ಆರೋಗ್ಯಕರ ಜೀವನಶೈಲಿಯಲ್ಲಿ ಮಾನಸಿಕ, ದೈಹಿಕ ಹಾಗೂ ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಬೇಕು. ಮನಸ್ಸು ಹಾಗೂ ದೇಹಗಳ ನಡುವೆ ಸಮನ್ವಯವಿರಬೇಕು. ಯುವಕರಲ್ಲಿ ಕಾರ್ಯದ ಒತ್ತಡ, ಉದ್ಯೋಗದ ಅನಿಶ್ಚಿತತೆ, ಸಂಶಯ ಪ್ರವೃತ್ತಿಗಳಿದ್ದು, ಇವುಗಳಿಂದ ಹೊರಬರಬೇಕು. ಯಶಸ್ಸಿನಲ್ಲಿ ಪ್ರೇರಣೆಗಿಂತ ಶಿಸ್ತು ಪ್ರಮುಖ ಪಾತ್ರ ವಹಿಸುತ್ತದೆ ಎಂದರು.
ಮೈಸೂರಿನ ಮಹಾರಾಜ ವಿದ್ಯಾಸಂಸ್ಥೆಯ ಟ್ರಸ್ಟಿ ಅನುಮಪ ಜೆ. ಮುರುಳಿ ಕಾರ್ಯಕ್ರಮ ಇದ್ದರು. ಜೆ.ರಾಹುಲ್, ತೇಜಸ್ವಿನಿ, ಕೆ.ಎನ್.ಮಾದೇಶ್, ವೈಷ್ಣವಿ ನಾಯಕ್ ಅನಿಸಿಕೆಯನ್ನು ಹಂಚಿಕೊಂಡರು.ಸಿ.ರೇವಣ್ಣ ಶಿಬಿರದ ವರದಿ ಮಂಡಿಸಿದರು. ಪೃಥ್ವಿ ಪ್ರಾರ್ಥಿಸಿದರು. ಡಾ.ಎಸ್.ಎನ್.ದೀಪಾ ಸ್ವಾಗತಿಸಿದರು. ಎಸ್.ಡಿ. ಯಶವಂತ್ ವಂದಿಸಿದರು. ಬಿ.ಎಸ್.ಹರೀಶ್ ನಿರೂಪಿಸಿದರು.