ಪ್ರೀತಿ, ಪ್ರೇಮಕ್ಕೆ ವಿದ್ಯಾರ್ಥಿಜೀವನ ಹಾಳು ಮಾಡಿಕೊಳ್ಳಬೇಡಿ: ನಾಗಲಕ್ಷ್ಮೀ ಚೌಧರಿ

| Published : Aug 05 2025, 11:45 PM IST

ಪ್ರೀತಿ, ಪ್ರೇಮಕ್ಕೆ ವಿದ್ಯಾರ್ಥಿಜೀವನ ಹಾಳು ಮಾಡಿಕೊಳ್ಳಬೇಡಿ: ನಾಗಲಕ್ಷ್ಮೀ ಚೌಧರಿ
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ಇನ್ಸಾಗ್ರಾಂ, ವಾಟ್ಸ್‌ಆ್ಯಪ್ ಇವುಗಳಲ್ಲಿ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಬಾರದು.

ಹಾವೇರಿ: ಪ್ರೀತಿ, ಪ್ರೇಮದ ಜಾಲದಲ್ಲಿ ಸಿಲುಕಿಕೊಂಡು ವಿದ್ಯಾರ್ಥಿ ಜೀವನವನ್ನು ಹಾಳು ಮಾಡಿಕೊಳ್ಳಬೇಡಿ. ಗುರಿ ಮುಟ್ಟುವ ತನಕ ಶ್ರಮ ಪಡಬೇಕು. ಶ್ರದ್ಧೆ, ಶಿಸ್ತು, ಶಿಕ್ಷಣದಿಂದ ಮೇಲೆ ಬರಲು ಸಾಧ್ಯ. ಶೋಷಣೆ, ದೌರ್ಜನ್ಯದ ವಿರುದ್ಧ ನಿರ್ಭೀತಿಯಿಂದ ಧ್ವನಿ ಎತ್ತಬೇಕು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ತಿಳಿಸಿದರು.

ನಗರದ ಜಿಎಚ್ ಕಾಲೇಜು ಸಭಾಂಗಣದಲ್ಲಿ ಮಂಗಳವಾರ ನಗರದ ಕಾಲೇಜು ವಿದ್ಯಾರ್ಥಿನಿಯರೊಂದಿಗೆ ಆಯೋಜಿಸಿದ್ದ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ಇನ್ಸಾಗ್ರಾಂ, ವಾಟ್ಸ್‌ಆ್ಯಪ್ ಇವುಗಳಲ್ಲಿ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಬಾರದು. ಅದರಲ್ಲಿಯೂ ಅಪರಿಚಿತ ವ್ಯಕ್ತಿಗಳೊಂದಿಗೆ ಫ್ರೆಂಡ್ ರಿಕ್ವೆಸ್ಟ್ ಕಳಿಸುವುದು ಮತ್ತು ಸ್ವೀಕರಿಸುವುದನ್ನು ಮಾಡಲೇಬಾರದು. ಮೊಬೈಲ್ ಬಳಕೆ ನಮ್ಮ ಒಳ್ಳೆಯದಕ್ಕೆ ಮಾತ್ರ ಬಳಸಿಕೊಳ್ಳಬೇಕು. ವಿದ್ಯಾರ್ಥಿ ಜೀವನದಲ್ಲಿ ಓದಿನತ್ತ ಮಾತ್ರ ಗಮನ ಕೊಡಬೇಕು ಎಂದರು.

ಮಹಿಳೆಯರು ಶಿಕ್ಷಣವೆಂಬ ಆಯುಧವನ್ನು ಪಡೆದು, ಸುಶಿಕ್ಷಿತರಾದರೆ ಮಾತ್ರ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ. ಮಹಿಳೆಯರು ಶೋಷಣೆಯಿಂದ ಹೊರ ಬಂದು ಉತ್ತಮ ಬದುಕು ಕಟ್ಟಿಕೊಳ್ಳಬೇಕು ಸೋಲು, ಅವಮಾನ, ಸವಾಲು ಏನೇ ಬಂದರೂ ಧೈರ್ಯವಾಗಿ ಎದುರಿಸಬೇಕು. ತಾಯಿ ಶಕ್ತಿ ಮುಂದೆ ಬೇರೆ ಯಾವ ಶಕ್ತಿಯೂ ಇಲ್ಲ. ತ್ಯಾಗ- ಪ್ರೀತಿಯ ಸಂಕೇತ ತಾಯಿ. ಆದರೂ ಸಮಾಜದಲ್ಲಿ ನಿರಂತರ ದೌರ್ಜನ್ಯ, ಶೋಷಣೆ, ದಬ್ಬಾಳಿಕೆಗೆ ಒಳಗಾಗುತ್ತಿದ್ದೇವೆ. ಮಹಿಳೆಯರಲ್ಲಿ ಶಿಕ್ಷಣವೇ ಇಲ್ಲದ ಕಾಲದಲ್ಲಿ ಅಂದಿನ ಪಂಡಿತರು ಇಂದ್ರಿಯಗಳನ್ನು ನಿಗ್ರಹಿಸುವ ಶಕ್ತಿ ಹೆಣ್ಣಿಗೆ ಇಲ್ಲ. ಅವಳು ಅಪವಿತ್ರ. ಕೇವಲ ಮಕ್ಕಳನ್ನು ಹೆರುವ ಯಂತ್ರ ಎಂದು ಭಾವಿಸಿ ಮಹಿಳಾ ಸಮಾಜವನ್ನು ಅಧೋಗತಿಗೆ ತಳ್ಳಿದ್ದರು. ಮಹಿಳಾ ಶಿಕ್ಷಣಕ್ಕಾಗಿ ಅನೇಕ ವರ್ಷಗಳಿಂದ ಹೋರಾಟವಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಪಂ ಸಿಇಒ ರುಚಿ ಬಿಂದಲ್, ಎಸ್ಪಿ ಯಶೋದಾ ವಂಟಗೋಡಿ, ಡಿಡಿಪಿಯು ಅಶೋಕ ಶಾಸ್ತ್ರಿ, ಕಾಲೇಜಿನ ಪ್ರಾಚಾರ್ಯ ಎಂ.ಎಂ. ಹೊಳ್ಳಿಯವರ, ತಹಸೀಲ್ದಾರ್ ಶರಣಮ್ಮ ಕಾರಿ, ವಾರ್ತಾಧಿಕಾರಿ ಭಾರತಿ ಎಚ್., ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ರೇವತಿ ಹೊಸಮಠ ಇತರರು ಇದ್ದರು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಶೈಲಾ ಕುರಹಟ್ಟಿ ಸ್ವಾಗತಿಸಿದರು. ಸುಮಂಗಲ ನಿರೂಪಿಸಿ ವಂದಿಸಿದರು. ತುರ್ತು ಕ್ರಮಕ್ಕೆ ಸೂಚನೆ..ಗ್ರಾಮೀಣ ಭಾಗದ ವಿದ್ಯಾರ್ಥಿಗಳು ತಮ್ಮ ಸಮಸ್ಯೆಯನ್ನು ಹೇಳಿಕೊಳ್ಳಬಹುದು ಎಂದಾಗ, ಹಾವೇರಿಯಲ್ಲಿ ಬಿಎಡ್ ವ್ಯಾಸಂಗ ಮಾಡುತ್ತಿರುವ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಬೆಳವಾಟಿ ಗ್ರಾಮದ ವಿದ್ಯಾರ್ಥಿನಿ ತಮ್ಮ ಗ್ರಾಮಕ್ಕೆ ಸಾರಿಗೆ ಸೌಲಭ್ಯವಿಲ್ಲವೆಂದು ಅಧ್ಯಕ್ಷರಿಗೆ ಸಮಸ್ಯೆ ಹೇಳಿಕೊಂಡರು. ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ರಾಯಚೂರು ಜಿಲ್ಲೆ ಕೆಎಸ್‌ಆರ್‌ಟಿಸಿ ಡಿಸಿಗೆ ಕರೆ ಮಾಡಿ, ಬೆಳವಾಟಿ ಗ್ರಾಮಕ್ಕೆ ಶಾಲಾ, ಕಾಲೇಜು ಮಕ್ಕಳಿಗೆ ಬಸ್ ವ್ಯವಸ್ಥೆ ಮಾಡುವಂತೆ ನಿರ್ದೇಶನ ನೀಡಿದರು.

ಪೊಲೀಸ್ ಠಾಣೆ ತವರು ಮನೆ ಇದ್ದಂತೆಪೊಲೀಸ್ ಠಾಣೆ ನಮಗೆ(ಹೆಣ್ಣುಮಕ್ಕಳಿಗೆ) ತವರು ಮನೆ ಇದ್ದ ಹಾಗೆ. ಏನೇ ಅನ್ಯಾಯ ನಡೆದರೂ ಪೊಲೀಸರು ತಮಗೆ ರಕ್ಷಣೆ ನೀಡುತ್ತಾರೆ ಹಾಗೂ ನ್ಯಾಯ ಒದಗಿಸುತ್ತಾರೆ. ಅದಕ್ಕೆ ಉದಾಹರಣೆ ಎಂದರೆ ಮಾಜಿ ಎಂಪಿ ಓರ್ವರಿಗೆ ಜೀವಾವಧಿ ಶಿಕ್ಷೆ ಆಗುವವರಿಗೆ ತನಿಖೆ ನಡೆಸಿ ದಾಖಲೆ ಒದಗಿಸಿಸುವ ಕೆಲಸ ಮಾಡಿದವರು ನಮ್ಮ ಕರ್ನಾಟಕ ಪೊಲೀಸ್ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.