ಸಾರಾಂಶ
ಚಾಮರಾಜನಗರ:
ಕನ್ನಡ ಸಿನಿರಂಗದ ದೊಡ್ಮನೆ ಖ್ಯಾತಿಯ ಅಣ್ಣಾವ್ರ ಕುಟುಂಬದ ಹಿರಿ ಕೊಂಡಿಯೊಂದು ಶುಕ್ರವಾರ ಕಳಚಿದ್ದು, ವರನಟ ದಿ. ರಾಜ್ ಕುಮಾರ್ ಮನೆಯಲ್ಲಿ ನೀರವ ಮೌನ ಆವರಿಸಿದೆ. ರಾಜ್ ಪರಿವಾರದ ಮಕ್ಕಳನ್ನು ಎತ್ತಿ ಆಡಿಸಿ ಬೆಳೆಸಿದ ನಾಗಮ್ಮ ವಯೋಸಹಜ ನಿಧನರಾಗಿದ್ದಾರೆ.ತಮಿಳುನಾಡಿನ ತಾಳವಾಡಿ ತಾಲೂಕಿನ ಗಾಜನೂರಿನಲ್ಲಿ ವಾಸವಿದ್ದ ನಾಗಮ್ಮ (93) ಶುಕ್ರವಾರ ಬೆಳಗ್ಗೆ 11ರ ಸುಮಾರಿಗೆ ನಿಧನರಾಗಿದ್ದಾರೆ. ನಾಗಮ್ಮ ಅಣ್ಣಾವ್ರ ಅಚ್ಚುಮೆಚ್ಚಿನ ಸಹೋದರಿಯಾಗಿದ್ದರು. ಜೊತೆಗೆ, ಇಡೀ ರಾಜ್ ಪರಿವಾರಕ್ಕೆ ಅಕ್ಕರೆಯ ನಾಗತ್ತೆಯಾಗಿದ್ದರು.ಅಣ್ಣಾವ್ರು ಮದ್ರಾಸ್ನಲ್ಲಿದ್ದಾಗ ಮಕ್ಕಳ ಲಾಲನೆ- ಪಾಲನೆ ಮಾಡಿದ್ದ ನಾಗಮ್ಮ ಎಲ್ಲರನ್ನೂ ಎತ್ತಿ ಆಡಿಸಿ ಬೆಳೆಸಿದ್ದರು. ಗಾಜನೂರಿಗೆ ಬಂದು ನೆಲೆ ನಿಂತಾಗಲೂ ತಂಗಿ ಹಾಗೂ ಕುಟುಂಬದ ಜೊತೆ ವಿರಾಮದ ಕಾಲವನ್ನು ಕಳೆಯಬೇಕೆಂದು ಅಣ್ಣಾವ್ರು ಗಾಜನೂರಿನಲ್ಲಿ ಮನೆಯನ್ನೂ ಕಟ್ಟಿಸಿದ್ದರು. ಅಷ್ಟರಲ್ಲಿ, ವೀರಪ್ಪನ್ನಿಂದ ಅಪಹರಣಕ್ಕೊಳಗಾದ ಬಳಿಕ ಅನಿವಾರ್ಯವಾಗಿ ಗಾಜನೂರಿನಲ್ಲಿ ನೆಲೆ ನಿಲ್ಲುವ ಆಸೆ ಕೈ ಬಿಟ್ಟಿದ್ದರು ಡಾ.ರಾಜ್ ಕುಮಾರ್. ನಟ ಪುನೀತ್ ರಾಜ್ ಕುಮಾರ್ ಕಂಡರೇ ನಾಗಮ್ಮಗೆ ಎಲ್ಲಿಲ್ಲದ ಅಕ್ಕರೆ. ತಾನು ಎತ್ತಿ ಆಡಿಸಿದ ಅಪ್ಪುವನ್ನು ಕಂಡಾಗ ಮನತುಂಬಿ ಮುತ್ತು ಕೊಟ್ಟು ಹಾರೈಸುತ್ತಿದ್ದರು. ನಾಗಮ್ಮಗೆ ಐವರು ಪುತ್ರರು, ಮೂವರು ಪುತ್ರಿಯರು ಒಟ್ಟು 8 ಜನ ಮಕ್ಕಳಿದ್ದು ಹಿರಿ ಮಗ ಗೋಪಾಲ್ ಜೊತೆ ಗಾಜನೂರಿನಲ್ಲಿ ವಾಸವಿದ್ದರು.ಅಣ್ಣಾವ್ರ ಕುಟುಂಬಕ್ಕಷ್ಟೇ ಅಲ್ಲದೇ ಇಡೀ ಚಿತ್ರರಂಗಕ್ಕೆ ಬರಸಿಡಿಲಿನಂತೆ ಅಪ್ಪಳಿಸಿದ ಅಪ್ಪು ನಿಧನದ ಸುದ್ದಿಯನ್ನು ಕುಟುಂಬಸ್ಥರು ಗೌಪ್ಯವಾಗಿ ಇಟ್ಟಿದ್ದರು. ಮನೆಗೇ ಯಾರೇ ಬಂದರೂ ಅಪ್ಪು ವಿಚಾರ ಮಾತಾನಾಡಬೇಡಿ ಎಂದು ತಾಕೀತು ಮಾಡುತ್ತಿದ್ದರು. ಕಳೆದ ಮಾರ್ಚ್ ನಲ್ಲಿ ಅಪ್ಪು ಹುಟ್ಟುಹಬ್ಬಕ್ಕೆ ಶುಭ ಕೋರಿ, ಬಹಳ ದಿನವಾಯ್ತು ನೋಡಿ ಬಾ ಮಗನೇ ಎಂದು ಕರೆದಿದ್ದ ವೀಡಿಯೋ ಸಾಕಷ್ಟು ವೈರಲ್ಲಾಗಿತ್ತು.
1ಸಿಎಚ್ಎನ್19- ತಮಿಳುನಾಡಿನ ಗಾಜನೂರಿನ ಮನೆಯಲ್ಲಿ ನಾಗಮ್ಮ ಅವರ ಮೃತದೇಹ.1ಸಿಎಚ್ಎನ್20- ನಾಗಮ್ಮ