ಕನ್ನಡಪ್ರಭ ವಾರ್ತೆ ವಿಜಯಪುರ
ಸಮಾಜದಲ್ಲಿರುವ ಅಂಕು-ಡೊಂಕುಗಳನ್ನು ತಿದ್ದುವಲ್ಲಿ ನಾಟಕಗಳು ಪ್ರಮುಖ ಪಾತ್ರವಹಿಸುವ ಮೂಲಕ ಸಮಾಜದ ಕಣ್ಣು ತೆರೆಸುವಂತ ಕೆಲಸ ಮಾಡುತ್ತವೆ. ಸಮಾಜ ಸುಧಾರಣೆಗೆ ಪ್ರತಿಯೊಬ್ಬರೂ ಕೈ ಜೋಡಿಸಬೇಕಾದ ಅನಿವಾರ್ಯತೆವಿದೆ ಎಂದು ಎಐಸಿಸಿ ಮಾಜಿ ಸದಸ್ಯೆ ಹಾಗೂ ಕಾಂಗ್ರೆಸ್ ಯುವ ನಾಯಕಿ ಶ್ರೀದೇವಿ ಉತ್ಲಾಸರ ಹೇಳಿದರು.ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ರಂಗಾಯಣ ಶಿವಮೊಗ್ಗ ಸಂಯುಕ್ತಾಶ್ರಯದಲ್ಲಿ ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಹಮ್ಮಿಕೊಂಡ ಸ್ವಾತಂತ್ರ್ಯದ ಓಟ ನಾಟಕ ಪ್ರದರ್ಶನ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಾಟಕಗಳ ಪ್ರದರ್ಶನ ನೀಡುವಲ್ಲಿ ಉತ್ತರ ಕರ್ನಾಟಕ ಮುಂಚೂಣಿಯಲ್ಲಿದೆ. ಕಲಾವಿದರಿಗೆ ಪ್ರೇಕ್ಷಕರೇ ಜೀವಾಳವಾಗಿದ್ದು, ಪ್ರೇಕ್ಷಕರು ಹೆಚ್ಚೆಚ್ಚು ನಾಟಕ ನೋಡಲು ಬರುವುದರಿಂದ ನಾಟಕ ಕಂಪನಿ ಹಾಗೂ ಕಲಾವಿದರು ಅತೀ ಉತ್ಸಾಹದಿಂದ ನಾಟಕ ಪ್ರದರ್ಶನ ಮಾಡುವರು. ಹೀಗಾಗಿ ಇಂತಹ ಅಪರೂಪದ ನಾಟಕವನ್ನು ನೋಡುವ ಅವಕಾಶ ಯಾರೂ ಕಳೆದುಕೊಳ್ಳಬಾರದು ಎಂದು ಮನವಿ ಮಾಡಿದರು.ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಮಹೇಶ ಪೋತದಾರ ನಾಟಕ ಪ್ರದರ್ಶನದ ನಂತರ ಮಾತನಾಡಿ, ಕಲಾವಿದರು ಅಕ್ಷರಶಃ ಆಡಿ ತೋರಿಸುವ ಮೂಲಕ ಪ್ರತಿ ಪಾತ್ರಕ್ಕೂ ಜೀವ ತುಂಬಿದ್ದಾರೆ. ಭಾರತ ಮತ್ತು ಪಾಕಿಸ್ತಾನ ಭಾಗವಾದಾಗ ವಲಸೆ ಹೋಗುವ ದೃಶ್ಯ, ವಾಘಾ ಗಡಿ, ಗಾಂಧಿ ಹತ್ಯೆ, ರೈಲು ನಿಲ್ದಾಣ, ಕಣ್ಣಿಗೆ ಕಟ್ಟುವಂತೆ ಅಮೋಘವಾಗಿ ನಟಿಸಿದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಉದ್ಘಾಟಿಸಿ ಮಾತನಾಡಿ, ಸ್ವಾತಂತ್ರ್ಯದ ಸಮಯದಲ್ಲಿ ಎಲ್ಲ ಧರ್ಮೀಯರಿಗೂ ತೊಂದರೆ ಹಾಗೂ ಸೌಹಾರ್ದತೆಯ ಬದುಕನ್ನು ಶಿವಮೊಗ್ಗ ರಂಗಾಯಣದ ರಂಗಭೂಮಿ ಕಲಾವಿದರು ವಿಜಯಪುರಕ್ಕೆ ಆಗಮಿಸಿ ಪ್ರದರ್ಶನ ನೀಡುತ್ತಿರುವ ಕಾರ್ಯ ಅತ್ಯಂತ ಶ್ಲಾಘನೀಯ ಎಂದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಂತೋಷ ಭೋವಿ, ಕಸಾಪ ಗೌರವ ಕೋಶಾಧ್ಯಕ್ಷ ಅಭಿಷೇಕ ಚಕ್ರವರ್ತಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸದಸ್ಯೆ ದಾಕ್ಷಾಯಣಿ ಹುಡೇದ, ಲಲಿತ ಕಲಾ ಅಕಾಡೆಮಿಯ ಸದಸ್ಯೆ ರಾಜಶ್ರೀ ಮೋಪಗಾರ, ಶಶಿಕಲಾ ಇಜೇರಿ, ಭಾಗೀರತಿ ಸಿಂಧೆ, ಮಹಾಂತೇಶ ಗಜೇಂದ್ರಗಡ ಇದ್ದರು.ಗಣ್ಯರು ಡೋಲು ಬಾರಿಸುವ ಮೂಲಕ ನಾಟಕಕ್ಕೆ ಚಾಲನೆ ನೀಡಿದರು. ಕಸಾಪ ಕಾರ್ಯದರ್ಶಿ ಮಾಧವ ಗುಡಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಿಲ್ಪಾ ಭಸ್ಮ ನಿರೂಪಿಸಿದರು. ಶಶಿಕಲಾ ನಾಯೊಡಿ ಗೀತಗಾಯನ ಮಾಡಿದರು. ಪರವೀನ ಶೇಖ ವಂದಿಸಿದರು.ಇಂದಿನ ಯುವಕರು ಕೇವಲ ಸಿನಿಮಾಗಳನ್ನು ಮಾತ್ರ ನೋಡದೇ ನಾಟಕಗಳನ್ನು ನೋಡುವ ಹವ್ಯಾಸ ಬೆಳೆಸಿಕೊಳ್ಳಬೇಕಾಗಿದೆ. ನಾಟಕಗಳಲ್ಲಿ ಸಾಮಾಜಿಕ ಕಾಳಜಿ ಹಾಗೂ ಸಾಮರಸ್ಯತೆ ಸಂದೇಶವಿರುವುದರಿಂದ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ನಮ್ಮನ್ನು ನಾವು ತೊಡಗಿಸಿಕೊಳ್ಳಬಹುದಾಗಿದೆ. ನಾಟಕ ನಮ್ಮ ಪಾರಂಪರಿಕ ಕಲೆಯಾಗಿದ್ದು, ನಾಟಕ ನೋಡುವ ಮೂಲಕ ಉಳಿಸಿ, ಬೆಳೆಸೋಣ.-ಶ್ರೀದೇವಿ ಉತ್ಲಾಸರ್,
ಎಐಸಿಸಿ ಮಾಜಿ ಸದಸ್ಯೆ ಹಾಗೂ ಕಾಂಗ್ರೆಸ್ ಯುವ ನಾಯಕಿ.