ಸಾರಾಂಶ
ಶಿವಾನಂದ ಗೊಂಬಿ
ಹುಬ್ಬಳ್ಳಿ: ಮಹಾನಗರದ ಸರಹದ್ದಿನ ಅಂಚಿನ (ಕುಸುಗಲ್ ರಸ್ತೆ) ಹುಬ್ಬಳ್ಳಿ- ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಇದೀಗ ಹೊಸದೊಂದು ಅನಧಿಕೃತ ಬೃಹತ್ ಕಸದ ಗುಡ್ಡೆ (ಡಂಪಿಂಗ್ ಯಾರ್ಡ್) ನಿರ್ಮಾಣವಾಗಿದೆ!ನಿತ್ಯ ಇಲ್ಲಿ ಕಟ್ಟಡಗಳ ತ್ಯಾಜ್ಯದ ಜೊತೆಗೆ ಪಾಲಿಕೆಯ ಕಸದ ವಾಹನಗಳು ಸಹ ಕಸ ಸುರುವಿ ಹೋಗುತ್ತಿದ್ದರಿಂದ ದಿನೇ ದಿನೆ ಈ ಡಂಪಿಂಗ್ ಯಾರ್ಡ್ ಬೆಳೆಯುತ್ತಿದೆ. ಅದರಲ್ಲಿ ಬೆಂಕಿ ಉರಿಯುತ್ತ ಸದಾ ಅಪಾರ ಪ್ರಮಾಣದ ಹೊಗೆ ಉಗುಳುತ್ತಿರುತ್ತದೆ.
ಪಾಲಿಕೆ ಸಿಬ್ಬಂದಿಯೇ ಅನಧಿಕೃತವಾಗಿ ಕಸ ತಂದು ಸುರಿದು ಡಂಪಿಂಗ್ ಯಾರ್ಡ್ ಮಾಡಿದ್ದಾರೆ ಎಂಬ ಆರೋಪ ಸಾರ್ವಜನಿಕರದ್ದಾದರೆ, ಖಾಸಗಿ ವ್ಯಕ್ತಿಗಳು ಕಟ್ಟಡ ನಿರ್ಮಾಣದ ತ್ಯಾಜ್ಯವನ್ನು ತಂದು ಹಾಕುತ್ತಿದ್ದಾರೆ ಎನ್ನುವುದು ಪಾಲಿಕೆಯ ವಾದ.ಆದರೆ, ಕಟ್ಟಡದ ತ್ಯಾಜ್ಯದಲ್ಲಿ ಬರೀ ಕಲ್ಲು, ಮಣ್ಣು, ಇಟ್ಟಿಗೆ ಮಾತ್ರ ಇರುತ್ತದೆ. ಹೀಗಾಗಿ, ಅದಕ್ಕೆ ಬೆಂಕಿ ತಗಲುವುದಿಲ್ಲ. ಇಲ್ಲಿರುವುದು ಕೊಳೆತ ಹಣ್ಣು, ಬಟ್ಟೆ ಬರೆ, ಪ್ಲಾಸ್ಟಿಕ್ ಬಾಟಲಿ ಹೀಗೆ ಪಾಲಿಕೆ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಕಸದ ರಾಶಿ ಇರುತ್ತದೆ. ಆದಕಾರಣ ಈ ಕಸವನ್ನು ಪಾಲಿಕೆ ಸಿಬ್ಬಂದಿ ಕೂಡ ಡಂಪ್ ಮಾಡಿ ಹೋಗುತ್ತಿದೆ. ಅದಕ್ಕೆ ಬೆಂಕಿ ಕೂಡ ತಗುಲುತ್ತದೆ ಎಂದು ಸಾರ್ವಜನಿಕರು ಆರೋಪಿಸುತ್ತಾರೆ. ಹಾಗಾಗಿ ಅಧಿಕೃತ ಡಂಪಿಂಗ್ ಯಾರ್ಡ್ನಲ್ಲಿ ಯಾವ ರೀತಿ ಬೆಂಕಿ ಹೊತ್ತಿರುತ್ತದೆಯೋ ಅದೇ ರೀತಿ ಇಲ್ಲೂ ಬೆಂಕಿ ಸದಾಕಾಲ ಇದ್ದೇ ಇರುತ್ತದೆ. ಇದರಿಂದ ಸುತ್ತಮುತ್ತಲಿನ ಪ್ರದೇಶಗಳು ಗಬ್ಬೆದ್ದು ನಾರುವಂತಾಗಿದೆ. ಅನಾರೋಗ್ಯಕರ ವಾತಾವರಣ ಸೃಷ್ಟಿಯಾಗಿ ಪರಿಸರವೆಲ್ಲ ಹಾಳಾಗುತ್ತಿದೆ.
ಹುಬ್ಬಳ್ಳಿ- ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ ಆಗಿರುವುದರಿಂದ ಸಾವಿರಾರು ವಾಹನಗಳು ಇದೇ ಮಾರ್ಗವಾಗಿ ಹುಬ್ಬಳ್ಳಿ ಪ್ರವೇಶಿಸುತ್ತವೆ. ಪ್ರಯಾಣಿಕರು ಊರು ಆರಂಭದಲ್ಲೇ ಮೂಗು ಮುಚ್ಚಿಕೊಂಡು ಬರಬೇಕಾದ ಪರಿಸ್ಥಿತಿ ಇದೆ.ಜನಪ್ರತಿನಿಧಿಗಳಿಗೆ ಕಾಣದು
ಶಾಸಕ ಮಹೇಶ ಟೆಂಗಿನಕಾಯಿ ಅವರು ಪ್ರತಿನಿಧಿಸುವ ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದ ವ್ಯಾಪ್ತಿಯಲ್ಲಿ ಈ ಅನಧಿಕೃತ ಯಾರ್ಡ್ಸಿದೆ. ನವಲಗುಂದ ಕ್ಷೇತ್ರದ ಶಾಸಕ ಎನ್.ಎಚ್. ಕೋನರಡ್ಡಿ ಪ್ರತಿನಿತ್ಯ ಇದೇ ಮಾರ್ಗದ ಮೂಲಕವೇ ಸಂಚರಿಸುತ್ತಾರೆ. ಇಬ್ಬರು ಶಾಸಕರು ಕಂಡರೂ ಕಾಣದಂತೆ ಸುಮ್ಮನೆ ಇರುವುದು ಸಾರ್ವಜನಿಕರಲ್ಲೇ ಆಕ್ರೋಶವನ್ನುಂಟು ಮಾಡಿದೆ.ಸಾರ್ವಜನಿಕರು ಕಸ ಎಸೆದರೆ ದಂಡ ಹಾಕುವ ಪಾಲಿಕೆ ಆಡಳಿತ ಮಂಡಳಿ ಇಲ್ಲೇ ಅನಧಿಕೃತವಾಗಿ ಅವರ ಸಿಬ್ಬಂದಿಯೇ ಸುರಿದು ಕಸದ ರಾಶಿಯನ್ನೇ ಮಾಡಿದರೂ ಪಾಲಿಕೆ ಮೇಯರ್, ಆಯುಕ್ತರು, ಪರಿಸರ ವಿಭಾಗದ ಅಧಿಕಾರಿಗಳ್ಯಾರೂ ಈ ಬಗ್ಗೆ ಕ್ರಮ ಕೈಗೊಳ್ಳುತ್ತಿಲ್ಲ.
ದೂರದ ಡಂಪಿಂಗ್ ಯಾರ್ಡ್ಗೆ ಕಸ ಒಯ್ಯುವುದು ಏಕೆ ಅಂತ ಕೆಲವೊಂದಿಷ್ಟು ಪಾಲಿಕೆ ಸಿಬ್ಬಂದಿ ಕಸ ಹಾಕಿ ಹೋದರೆ, ಮತ್ತೆ ಖಾಸಗಿ ವ್ಯಕ್ತಿಗಳು ಕಟ್ಟಡದ ತ್ಯಾಜ್ಯವನ್ನೇಲ್ಲ ಹಾಕಿ ಹೋಗುತ್ತಾರೆ. ಈ ಬಗ್ಗೆ ಹಲವು ಬಾರಿ ಪಾಲಿಕೆ ಅಧಿಕಾರಿ ವರ್ಗಕ್ಕೆ ಹೇಳಿದರೂ ಪ್ರಯೋಜನವಾಗಿಲ್ಲ. ಇದರ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ ಎಂಬುದು ಸಾರ್ವಜನಿಕರ ಎಚ್ಚರಿಕೆ.ಸಂಶಯಇಲ್ಲಿ ಸಂಗ್ರಹವಾಗುವ ಕಸ ನೋಡಿದರೆ ಬರೀ ಕಟ್ಟಡದ ತ್ಯಾಜ್ಯ ಅಷ್ಟೇ ಅಂತ ಅನಿಸುವುದಿಲ್ಲ. ಪಾಲಿಕೆ ಸಿಬ್ಬಂದಿಯೂ ಕಸವನ್ನು ಸುರುವಿ ಹೋಗುತ್ತಾರೆ ಎಂಬ ಸಂಶಯ ಬರುತ್ತದೆ. ಜತೆಗೆ ಇಲ್ಲಿನ ಕಸದ ರಾಶಿಗೆ ಬೆಂಕಿ ಸದಾಕಾಲ ಇದ್ದೇ ಇರುತ್ತದೆ. ಇದು ಕಟ್ಟಡ ತ್ಯಾಜ್ಯಕ್ಕೆ ಬೆಂಕಿ ತಗುವುದಿಲ್ಲ. ಈ ಬಗ್ಗೆ ಪಾಲಿಕೆ ಕ್ರಮಕೈಗೊಳ್ಳಬೇಕು.
- ಈರಣ್ಣ ಬಡಿಗೇರ, ನಿವಾಸಿಕ್ರಮ
ಹುಬ್ಬಳ್ಳಿ- ವಿಜಯಪುರ (ಸೊಲ್ಲಾಪುರ) ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಕಸದ ರಾಶಿ ಬೆಳೆದಿರುವುದು ನಿಜ. ಹಾಗಂತ ಇದನ್ನು ಪಾಲಿಕೆ ಸಿಬ್ಬಂದಿ ಹಾಕಿಲ್ಲ. ಕಟ್ಟಡ ನಿರ್ಮಾಣದ ತ್ಯಾಜ್ಯವನ್ನು ಖಾಸಗಿ ವ್ಯಕ್ತಿಗಳು ಹಾಕಿ ಹೋಗುತ್ತಿದ್ದಾರೆ. ಸಿಬ್ಬಂದಿ ಹಾಕಿದ್ದರೆ ಅದರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಅದನ್ನು ಶೀಘ್ರದಲ್ಲೇ ಸ್ವಚ್ಛಗೊಳಿಸಲಾಗುವುದು.- ಮಲ್ಲಿಕಾರ್ಜುನ, ಪರಿಸರ ಅಭಿಯಂತರು, ಪಾಲಿಕೆ