ಸಾರಾಂಶ
ಬಾಂಡ್ರಾವಿ ಗ್ರಾಮದಲ್ಲಿ ಶನಿವಾರ ₹78 ಲಕ್ಷ ವೆಚ್ಚದ ಆರೋಗ್ಯ ಉಪಕೇಂದ್ರ ಕಟ್ಟಡಕ್ಕೆ ಶಂಕು ಸ್ಥಾಪನೆ
ಮೊಳಕಾಲ್ಮುರು: ಆರೋಗ್ಯ ಮತ್ತು ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಿ, ತಾಲೂಕಿನ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳಿಸಿ ವಿದ್ಯಾವಂತರನ್ನಾಗಿಸಬೇಕು ಎಂದು ಶಾಸಕ ಎನ್.ವೈ.ಗೋಪಾಲಕೃಷ್ಣ ಹೇಳಿದರು.
ತಾಲೂಕಿನ ಬಾಂಡ್ರಾವಿ ಗ್ರಾಮದಲ್ಲಿ ಶನಿವಾರ ₹78 ಲಕ್ಷ ವೆಚ್ಚದ ಆರೋಗ್ಯ ಉಪಕೇಂದ್ರ ಕಟ್ಟಡಕ್ಕೆ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿ, ಹಿಂದುಳಿದ ಗಡಿ ಭಾಗವಾಗಿರುವ ಈ ಭಾಗದಲ್ಲಿ ಆರೋಗ್ಯ ಉಪಕೇಂದ್ರ ಬೇಕೆನ್ನುವುದು ಬಹುದಿನದ ಬೇಡಿಕೆಯಾಗಿತ್ತು. ಗಣಿ ಬಾಧಿತ ಪ್ರದೇಶದ ಪುನಶ್ಚೇತನ ಯೋಜನೆಯಲ್ಲಿ ನೂತನ ಕಟ್ಟಡ ನಿರ್ಮಾಣವಾಗುತ್ತಿದೆ. ಇದರಿಂದ ಆರೋಗ್ಯ ಇಲಾಖೆ ಸಿಬ್ಬಂದಿ ಇಲ್ಲೇ ವಾಸಮಾಡಲು ಅನುಕೂಲವಾಗುತ್ತದೆ. ತಾಲೂಕಿನ ಅಭಿವೃದ್ಧಿಯಲ್ಲಿ ಶಿಕ್ಷಣ ಮತ್ತು ಆರೋಗ್ಯಕ್ಕೆ ಮೊದಲ ಆದ್ಯತೆ ನೀಡಿ ಅನುದಾನ ಒದಗಿಸುತ್ತೇನೆ. ಮಕ್ಕಳನ್ನು ಶಿಕ್ಷಣವಂತರನ್ನಾಗಿಸಬೇಕು. ಕಡ್ಡಾಯವಾಗಿ ಶಾಲೆಗೆ ಕಳಿಸಿ ವಿದ್ಯಾವಂತರನ್ನಾಗಿಸಬೇಕು ಎಂದರು. ಎಇಇ ಹರ್ಶ್, ಪಟ್ಟಣ ಪಂಚಾಯತಿ ಸದಸ್ಯ ಕಾದರ್, ಟಿಎಚ್ಒ ಮದುಕುಮಾರ್, ಭರತ್ ಕುಮಾರ್ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶಿಲ್ಪಾ, ಬಾಂದ್ರವಪ್ಪ, ಕುಮಾರ ಸ್ವಾಮಿ, ಇಸ್ಮಾಯಿಲ್, ದೇವರಾಜ ಇದ್ದರು.