ಸಾರಾಂಶ
ಗದಗ:ಶಿಕ್ಷಣವೊಂದೇ ಮನುಷ್ಯನನ್ನು ಅತ್ಯುನ್ನತ ಸ್ಥಾನಕ್ಕೆ ತಂದು ನಿಲ್ಲಿಸಬಲ್ಲದು. ಜೀವನದಲ್ಲಿ ಸಾಧನೆಗೆ ಶಿಕ್ಷಣ ರಾಜಮಾರ್ಗ, ಶಿಕ್ಷಣದ ದಾರಿದೀಪದಿಂದಾಗಿ ಬದುಕು ಸುಂದರವಾಗಿ ರೂಪುಗೊಳ್ಳಬಲ್ಲದು. ಆದ್ದರಿಂದ ಪಾಲಕರು ಮಕ್ಕಳ ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕೆಂದು ವಿಪ ಮುಖ್ಯ ಸಚೇತಕ ಸಲೀಂ ಅಹ್ಮದ್ ಹೇಳಿದರು.
ನಗರದ ಕನಕ ಭವನದಲ್ಲಿ ರಾಜ್ಯ ಸರ್ಕಾರಿ ಮುಸ್ಲಿಂ ನೌಕರರ ಕ್ಷೇಮಾಭಿವೃದ್ಧಿ ಸಂಘ ಜಿಲ್ಲಾ ಘಟಕದಿಂದ 2024-25ನೇ ಸಾಲಿನ ಎಸ್ಸೆಸ್ಸೆಲ್ಸಿ, ಪಿಯುಸಿ ಹೆಚ್ಚು ಅಂಕಗಳನ್ನು ಪಡೆದ ಮುಸ್ಲಿಂ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ನಾಗರಿಕ ಹಾಗೂ ನಿವೃತ್ತ ನೌಕರರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ಕಾಲವಿಂದು ಬದಲಾಗಿದೆ. ಶೇ.95 ಸಾಲದು, ಸ್ಪರ್ಧಾತ್ಮಕ ಇಂದಿನ ದಿನಗಳಲ್ಲಿ ಎಷ್ಟೇ ಪ್ರತಿಭೆ ಇದ್ದರೂ ಸಾಕಾಗದು ಅದರೊಟ್ಟಿಗೆ ಚಾಣಾಕ್ಷತನ, ವಿಶೇಷ ಪರಿಣಿತಿ ಮುಖ್ಯ. ಈ ಎಲ್ಲ ಅಂಶಗಳನ್ನು ಹೊಂದಿರುವ ಅಭ್ಯರ್ಥಿಗೆ ಹೆಚ್ಚಿನ ಬೇಡಿಕೆ ಸಿಗುವದು. ಅಂತಹ ಅವಕಾಶಗಳು ಎಲ್ಲ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸಿಗುವಂತಾಗಲಿ, ಅವರ ಬದುಕು ಬಂಗಾರವಾಗಲಿ ಎಂದರು.ಅಲ್ಪಸಂಖ್ಯಾತರ ಅತ್ಯಧಿಕ ಮತಗಳಿಂದಾಗಿ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರದ ಚುಕ್ಕಾಣಿ ಹಿಡಿಯಲು ಸಾಧ್ಯವಾಗಿದೆ. ಕಾಂಗ್ರೆಸ್ ಪಕ್ಷ ನುಡಿದಂತೆ ನಡೆದ ಆಡಳಿತ ಪಕ್ಷವಾಗಿದೆ. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ನೀಡಿ ರಾಜ್ಯವನ್ನು ಶಾಂತಿಯ ತೋಟವನ್ನಾಗಿಸಿದ ಸರ್ಕಾರ ಆಗಿದೆ ಎಂದರು.ಸಾನಿಧ್ಯ ವಹಿಸಿದ್ದ ಸೂಡಿ ಜುಕ್ತಿ ಹಿರೇಮಠದ ಡಾ. ಕೊಟ್ಟೂರ ಬಸವೇಶ್ವರ ಶಿವಾಚಾರ್ಯರು ಮಾತನಾಡಿ, ವಿದ್ಯೆ ನಿರಂತರ ಸಾಧನೆಯಿಂದ ಸಾಕಾರಗೊಳ್ಳಬಲ್ಲದು. ಸಾಧನೆಗೆ ಅಸಾಧ್ಯವಾದದ್ದು ಯಾವುದೂ ಇಲ್ಲ ಆದರೆ ಸಾಧಿಸಬೇಕೆಂಬ ಉತ್ಕಟ ಛಲ ಬೇಕು ಎಂದರು.ಮಕ್ಕಳಿಗೆ ಆಸ್ತಿ ಸಂಪತ್ತು ಮಾಡಬೇಡಿ, ಬದಲಾಗಿ ಅವರನ್ನೇ ಆಸ್ತಿಯನ್ನಾಗಿ ಮಾಡಿ. ಮಕ್ಕಳಿಗೆ ಉತ್ತಮ ಹಾಗೂ ಉನ್ನತ ಶಿಕ್ಷಣ ನೀಡಿ ಆಗ ಅವರು ನಿಮ್ಮ ಕುಟುಂಬಕ್ಕೆ ಅಷ್ಟೇ ಅಲ್ಲ ಸಮಾಜ ದೇಶಕ್ಕೆ ಬಹು ದೊಡ್ಡ ಆಸ್ತಿಯಾಗಬಲ್ಲರು. ಇಂದಿಲ್ಲಿ ಪ್ರತಿಭಾ ಪುರಸ್ಕಾರ ಪಡೆದುಕೊಂಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಈ ಸನ್ಮಾನ ಸಾಧನೆಗೆ ಮುನ್ನುಡಿ ಅಷ್ಟೇ ಎಂದರು.ಅಡವೀಂದ್ರ ಸ್ವಾಮಿಮಠದ ಧರ್ಮದರ್ಶಿ ಮಹೇಶ್ವರ ಸ್ವಾಮಿಗಳು, ಬಳಗಾನೂರಿನ ಮೌಲಾನಾ ಇನಾಯತ್ವುಲ್ಲಾ ಫೀರಜಾದೆ ಹಾಗೂ ಗದಗ ಗ್ರೇಸ್ ಇಸಿಐ ಚರ್ಚ್ ಸಭಾ ಪಾಲಕರಾದ ರೆವರೆಂಡ್ ವಸಂತರಾಜ ಮಾತನಾಡಿದರು.ಅಧ್ಯಕ್ಷತೆಯನ್ನು ಸಂಘದ ಜಿಲ್ಲಾಧ್ಯಕ್ಷ ಡಾ.ಸಿ.ಎಂ.ರಫೀ ವಹಿಸಿದ್ದರು.ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್ಸಾಬ ಬಬರ್ಚಿ, ಕೆಪಿಸಿಸಿ ಜನರಲ್ ಸೆಕ್ರೆಟರಿ ಎಸ್.ಡಿ. ಮಕಾಂದಾರ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಗೌಡ ಪಾಟೀಲ, ಹುಮಾಯೂನ್ ಮಾಗಡಿ, ನೂರಅಹ್ಮದ್ ಕರ್ಜಗಿ, ಎಂ.ಎಂ. ಕಾಗದಗಾರ, ಮಾಜಿ ಸಂಸದ ಐ.ಜಿ. ಸನದಿ, ಮೊಹ್ಮದ್ಸಲೀಂ ಹಂಚಿನಮನಿ, ಡಾ. ಇಸ್ಮಾಯಿಲ್ ಪಾಷಾ, ಅಬ್ದುಲ್ಖಾದರ ಮೆಣಸಗಿ, ಫರಹತ ಜಲಗೇರಿ, ನಿಯಾಜಅಹ್ಮದ್ ಹಂಚಿನಮನಿ, ಡಿಡಿಪಿಐ ಆರ್.ಎಸ್.ಬುರಡಿ ಉಪಸ್ಥಿತರಿದ್ದರು. ಡಿಎಸ್ಪಿ ಮುರ್ತುಜಾ ಖಾದ್ರಿ ಉಪನ್ಯಾಸ ನೀಡಿದರು. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ನಿವೃತ್ತ ಮುಸ್ಲಿಂ ನೌಕರರಿಗೆ ಸನ್ಮಾನ, ಸಾಧಕರಿಗೆ ಸನ್ಮಾನ ಜರುಗಿತು.ಫರಹತ ಜಲಗೇರಿ ನಿರೂಪಿಸಿದರು. ಮೋದಿನಸಾಬ ಬುಕಿಟಗಾರ ವಂದಿಸಿದರು.