ಪುತ್ತೂರು: ಗಾಣಿಗ ಸಮಾಜದ ಅಪ್ರತಿಮ ಹೋರಾಟಗಾರ ಬ್ಯಾರಿಸ್ಟರ್ ಅತ್ತಾವರ ಯಲ್ಲಪ್ಪ ಅವರಿಗೆ ಸೂಕ್ತ ಸ್ಥಾನಮಾನ ಸಿಗದೇ ಇರುವುದು ಬೇಸರದ ವಿಚಾರವಾಗಿದ್ದು, ಮುಂದೆ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣಕ್ಕೆ ಅವರ ಹೆಸರಿಡುವ ಜತೆಗೆ ಜಿಲ್ಲೆಯಲ್ಲಿ ಅತ್ತಾವರ ಯಲ್ಲಪ್ಪ ಪ್ರತಿಮೆ ಸ್ಥಾಪನೆಗೆ ಪ್ರಯತ್ನ ಮಾಡಲಾಗುವುದು ಎಂದು ರಾಜ್ಯ ಗಾಣಿಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಅನಂತ್ ಮೈಸೂರು ಹೇಳಿದರು.ಶನಿವಾರ ಪುತ್ತೂರಿಗೆ ಆಗಮಿಸಿದ್ದ ಅನಂತ್ ಮೈಸೂರು ಅವರು ಪುತ್ತೂರಿನ ಶ್ರೀ ಲಕ್ಷ್ಮೀದೇವಿ ಬೆಟ್ಟಕ್ಕೆ ಆಗಮಿಸಿ ಪೂಜೆಯಲ್ಲಿ ಪಾಲ್ಗೊಂಡು ಬಳಿಕ ಪುತ್ತೂರು ಗಾಣಿಗ ಯಾನೆ ಸಪಲಿಗರ ಸೇವಾ ಸಂಘ ಪುತ್ತೂರು ಮತ್ತು ಮಾತೃ ಮಂಡಳಿ ವತಿಯಿಂದ ಗೌರವಾರ್ಪಣೆ ಸ್ವೀಕರಿಸಿ ಮಾತನಾಡಿದರು.ಅಧ್ಯಕ್ಷತೆ ವಹಿಸಿದ್ದ ಪುತ್ತೂರು ಗಾಣಿಗ ಯಾನೆ ಸಪಲಿಗರ ಸೇವಾ ಸಂಘದ ಅಧ್ಯಕ್ಷ ಲಕ್ಣ್ಮೀಪ್ರಸಾದ್ ಬೆಟ್ಟ ಮಾತನಾಡಿ, ಪುತ್ತೂರಿನಲ್ಲಿ ಗಾಣಿಗ ಸಮಾಜದ ಶಾಲೆಯೊಂದನ್ನು ತೆರೆಯುವ ನಿಟ್ಟಿನಲ್ಲಿ ಜಾಗ ಒದಗಿಸುವಂತೆ ಪುತ್ತೂರು ಶಾಸಕರಿಗೆ ಮನವಿ ಮಾಡಲಾಗಿದ್ದು, ಇದಕ್ಕಾಗಿ ನಿಗಮ ಸಹಕಾರ ನೀಡಬೇಕು ಎಂದು ವಿನಂತಿಸಿದರು.ಉಪ್ಪಿನಂಗಡಿ ಗಾಣಿಗ ಸಂಘದ ಅಧ್ಯಕ್ಷ ಹರಿರಾಮಚಂದ್ರ ಅವರು ಗಾಣಿಗ ಸಮಾಜದ ಮಕ್ಕಳ ಶೈಕ್ಷಣಿಕ ಅನುಕೂಲದ ದೃಷ್ಟಿಯಿಂದ ವಾರ್ಷಿಕ ಆದಾಯದ ಮಿತಿಯನ್ನು . 2.50 ಲಕ್ಷ ರು.ಗಳಿಗೆ ಏರಿಸುವಂತೆ ಮನವಿ ಮಾಡಿದರು. ಮಾತೃ ಮಂಡಳಿಯ ಅಧ್ಯಕ್ಷೆ ರಮಣಿ ಡಿ.ಗಾಣಿಗ, ವಾಣಿಯನ್ ಗಾಣಿಗ, ಸಮಾಜ ಸಂಘದ ಉಪಾಧ್ಯಕ್ಷೆ ಸುಷ್ಮಾ ದಾಮೋದರ್, ಸಾಮಾಜಿಕ ಕಾರ್ಯಕರ್ತ ಮೋಹಿತ್ ಬೆಂಗಳೂರು, ಲಕ್ಷ್ಮೀ ಅನಂತ್ ಉಪಸ್ಥಿತರಿದ್ದರು. ಶ್ರೀ ಲಕ್ಷ್ಮೀದೇವಿ ಬೆಟ್ಟದ ಜನಾರ್ದನ ಬೆಟ್ಟ ಅವರು ವೀರ ಹೋರಾಟಗಾರ ಬ್ಯಾರಿಸ್ಟರ್ ಅತ್ತಾವರ ಯಲ್ಲಪ್ಪ ಅವರ ಕುರಿತು ಮಾತನಾಡಿದರು. ಪುತ್ತೂರು ವಾಣಿಯನ್ ಗಾಣಿಗ ಸಮಾಜ ಸಂಘದ ಮಾಜಿ ಅಧ್ಯಕ್ಷ ದಾಮೋದರ್ ಪಾಟಾಳಿ ಸ್ವಾಗತಿಸಿದರು. ನಿತಿನ್ ನೆಕ್ಕಿಲಾಡಿ ವಂದಿಸಿದರು. ಕಾರ್ಯದರ್ಶಿ ಜಯಂತ ಉರ್ಲಾಂಡಿ ಕಾರ್ಯಕ್ರಮ ನಿರ್ವಹಿಸಿದರು.