ಕನ್ನಡಪ್ರಭ ವಾರ್ತೆ ಬೆಂಗಳೂರು
ಆಸ್ತಿ ಹಂಚಿಕೆ ವಿವಾದದ ಹಿನ್ನೆಲೆಯಲ್ಲಿ ತನ್ನ ತಂದೆ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿ ಹತ್ಯೆಗೈದಿದ್ದ ರಿಯಲ್ ಎಸ್ಟೇಟ್ ಏಜೆಂಟ್ವೊಬ್ಬನನ್ನು ಇಂದಿರಾನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.ದೂಪನಹಳ್ಳಿ ನಿವಾಸಿ ಮುನಿಕೃಷ್ಣಪ್ಪ (70) ಹತ್ಯೆಗೀಡಾದ ದುರ್ದೈವಿ. ಈ ಕೊಲೆ ಸಂಬಂಧ ಮೃತರ ಹಿರಿಯ ಪುತ್ರ ಮೋಹನ್ನನ್ನು ಪೊಲೀಸರು ಬಂಧಿಸಿದ್ದಾರೆ.
ಆಸ್ತಿ ಪಾಲು ವಿಚಾರವಾಗಿ ತಂದೆ ಜತೆ ಆರೋಪಿಗೆ ಸೋಮವಾರ ರಾತ್ರಿ ಜಗಳವಾಗಿದೆ. ಆಗ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ಹಂತದಲ್ಲಿ ಕೆರಳಿದ ಮೋಹನ್, ತನ್ನ ತಂದೆಗೆ ದೊಣ್ಣೆಯಿಂದ ಹೊಡೆದಿದ್ದಾನೆ. ತೀವ್ರವಾಗಿ ಹಲ್ಲೆಯಿಂದ ಕುಸಿದು ಬಿದ್ದ ಅವರನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ಕುಟುಂಬ ಸದಸ್ಯರು ಕರೆದೊಯ್ದಿದ್ದಾರೆ. ಅಷ್ಟರಲ್ಲಿ ಮುನಿಕೃಷ್ಣ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಬಿಎಂಟಿಸಿಯಲ್ಲಿ ನೌಕರಿಯಲ್ಲಿದ್ದ ಮುನಿಕೃಷ್ಣಪ್ಪ ಅವರು, ಸರ್ಕಾರಿ ಸೇವೆಯಿಂದ ನಿವೃತ್ತರಾಗಿ ದೊಪ್ಪನಹಳ್ಳಿಯಲ್ಲಿ ನೆಲೆಸಿದ್ದರು. ತಮ್ಮ ಸ್ವಂತ ಸಂಪಾದನೆಯಿಂದ ದೂಪನಹಳ್ಳಿಯಲ್ಲಿ ಅವರು ಆಸ್ತಿ-ಪಾಸ್ತಿ ಮಾಡಿದ್ದರು. ಆದರೆ ಆಸ್ತಿ ಪಾಲು ವಿಚಾರವಾಗಿ ಮೃತನ ಮೂವರು ಮಕ್ಕಳ ಮಧ್ಯೆ ಗಲಾಟೆ ಶುರುವಾಗಿತ್ತು. ತಮ್ಮ ಕಿರಿಯ ಪುತ್ರನ ಜತೆ ಮುನಿಕೃಷ್ಣಪ್ಪ ಹಾಗೂ ಅವರ ಪತ್ನಿ ನೆಲೆಸಿದ್ದರು. ಆದರೆ ಆಸ್ತಿ ವಿಷಯಕ್ಕೆ ಆಗಾಗ್ಗೆ ತಮ್ಮ ಮನೆಗೆ ಬಂದು ಹೆತ್ತವರ ಜತೆ ಮೋಹನ್ ಜಗಳವಾಡುತ್ತಿದ್ದ. ಕೆಲ ಆಸ್ತಿಯನ್ನು ತಮ್ಮ ಮೊಮ್ಮಕ್ಕಳ ಹೆಸರಿಗೆ ಮುನಿಕೃಷ್ಣಪ್ಪ ವಿಲ್ ಮಾಡಿದ್ದರು ಎನ್ನಲಾಗಿದೆ.
ಇದರಿಂದ ಮೋಹನ್ ಮತ್ತಷ್ಟು ಕೆರಳಿದ್ದ. ಇದೇ ಆಸ್ತಿ ವಿಚಾರವಾಗಿ ತಂದೆ-ಮಗನ ಮಧ್ಯೆ ಸೋಮವಾರ ರಾತ್ರಿ ಉಂಟಾದ ಜಗಳವು ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.