ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಬಡ ಜನರ ಶ್ರೇಯೋಭಿವೃದ್ಧಿಗಾಗಿ ರಾಜ್ಯ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದು, ಅರ್ಹ ಫಲಾನುಭವಿಗಳಿಗೆ ಸೌಲಭ್ಯಗಳು ದೊರಕಬೇಕು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆ.ಎಚ್.ಮುನಿಯಪ್ಪ ಅಧಿಕಾರಿಗಳಿಗೆ ಸೂಚಿಸಿದರು.ನಗರದ ಸುವರ್ಣ ವಿಧಾನಸೌಧದಲ್ಲಿ ಬುಧವಾರ ಜರುಗಿದ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಹಾಗೂ ಕಾನೂನು ಮಾಪನ ಶಾಸ್ತ್ರ ಇಲಾಖೆಯ ಬೆಳಗಾವಿ ವಿಭಾಗಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪಡಿತರ ಚೀಟಿ ಪರಿಷ್ಕರಣೆಗೆ ಹೊರಡಿಸಲಾಗಿರುವ ಮಾರ್ಗಸೂಚಿಗಳ ಪ್ರಕಾರ ಪಡಿತರ ಚೀಟಿಗಳ ಪರಿಷ್ಕರಣೆಗೆ ಕ್ರಮ ಕೈಗೊಳ್ಳಬೇಕು. ಆಹಾರ ಇಲಾಖಾ ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಅರಿತು ಕಾರ್ಯ ನಿರ್ವಹಿಸಬೇಕು. ಪಡಿತರ ಚೀಟಿ ಪರಿಷ್ಕರಣೆ ಸಂದರ್ಭದಲ್ಲಿ ಅರ್ಹ ಬಿಪಿಎಲ್ ಪಡಿತರ ಚೀಟಿದಾರರಿಗೆ ತೊಂದರೆ ಅಗದಂತೆ ನಿಗಾವಹಿಸುವುದರ ಜೊತೆಗೆ ಅನರ್ಹ ಬಿಪಿಎಲ್ ಕಾರ್ಡ್ಗಳನ್ನು ಪತ್ತೆ ಹಚ್ಚಲು ಇಲಾಖಾ ಅಧಿಕಾರಿಗಳು, ಸಿಬ್ಬಂದಿ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುವಂತೆ ತಿಳಿಸಿದರು.
ಬೆಳಗಾವಿ ಕಂದಾಯ ವಿಭಾಗದಲ್ಲಿ ಅಂದಾಜು 13 ಲಕ್ಷ ಫಲಾನುಭವಿಗಳು ಈ-ಕೆವೈಸಿ ನೀಡದೆ ಪಡಿತರ ಪಡೆದಿರುವುದಿಲ್ಲ. ಅಂತಹ ಫಲಾನುಭವಿಗಳನ್ನು ಗುರುತಿಸಿ ಅಂತಹವರ ವಿವರಗಳನ್ನು ಆಯಾ ನ್ಯಾಯಬೆಲೆ ಅಂಗಡಿಗಳಲ್ಲಿ ಪ್ರಚುರಪಡಿಸಿ ವರದಿ ನೀಡಬೇಕು. ಫೆ.20 ರೊಳಗಾಗಿ ಎಲ್ಲ ನ್ಯಾಯಬೆಲೆ ಅಂಗಡಿಗಳಲ್ಲಿ ಥರ್ಮಲ್ ಪ್ರಿಂಟರಗಳನ್ನು ಅಳವಡಿಸಲು ಕ್ರಮಕೈಗೊಳ್ಳುವಂತೆ ತಿಳಿಸಿದರು.ಆಹಾರ ಧಾನ್ಯಗಳನ್ನು ಸರಬರಾಜು ಮಾಡುವಂತಹ ಲಾರಿಗಳಿಗೆ ಜಿಪಿಎಸ್ ಅಳವಡಿಸುವುದು ಕಡ್ಡಾಯವಾಗಿದ್ದು, ಈ ಕುರಿತು ಅಧಿಕಾರಿಗಳು ಪರಿಶೀಲಿಸಬೇಕು. ಬೆಂಬಲ ಬೆಲೆ ಯೋಜನೆ ಅಡಿ ತೆರೆಯಲಾದ ಖರೀದಿ ಕೇಂದ್ರಗಳಲ್ಲಿ ನಿಯಮಾನುಸಾರ ಆಹಾರ ಧಾನ್ಯಗಳನ್ನು ಖರೀದಿಸಲಾಗುತ್ತಿರುವ ಕುರಿತು ಪರಿಶೀಲಿಸಬೇಕು. ಸರ್ಕಾರ ನಿಗದಿ ಪಡಿಸಿದ ದರದಂತೆ ಬೆಂಬಲ ಬೆಲೆಯಡಿ ಖರೀದಿಸಬೇಕು ಈ ಯೋಜನೆಯಡಿ ಯಾವುದೇ ಅವ್ಯವಹಾರಗಳು ನಡೆಯದಂತೆ ನಿಗಾವಹಿಸಲು ತಿಳಿಸಿದರು.ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧೀನದಲ್ಲಿ ಇರುವಂತಹ ಗೋದಾಮುಗಳನ್ನು ನಿಯಮಿತವಾಗಿ ಪರಿಶೀಲಿಸಿ ಅವಶ್ಯಕತೆಗಿಂತ ಹೆಚ್ಚಿನ ಆಹಾರ ಧಾನ್ಯ ಸಂಗ್ರಹವಾಗದಂತೆ ನಿಗಾವಹಿಸಬೇಕು. ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಶೀಘ್ರವೇ ಜಾಗೃತ ಸಮಿತಿಗಳನ್ನು ರಚಿಸಬೇಕು. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವರನ್ನು ಶಾಸಕರುಗಳ ಜೊತೆ ನಿರಂತರ ಸಮನ್ವಯ ಸಾಧಿಸಬೇಕು. ಇದರ ಜೊತೆಗೆ ತಮ್ಮ ಜಿಲ್ಲಾ ವ್ಯಾಪ್ತಿಯಲ್ಲಿನ ಎಲ್ಲ ಗ್ಯಾಸ್ ಏಜೆನ್ಸಿಗಳನ್ನು ನಿಯಮಿತವಾಗಿ ಪರಿಶೀಲಿಸಬೇಕು. ಸಕ್ಕರೆ ಕಾರ್ಖಾನೆಗಳಲ್ಲಿ ತೂಕದ ಸಾಧನಗಳಲ್ಲಿ ರೈತರಿಗೆ ಮೋಸ ಆಗದಂತೆ ಎಲ್ಲ ಸಕ್ಕರೆ ಕಾರ್ಖಾನೆಗಳಲ್ಲಿ ಮಾರ್ಗಸೂಚಿಗಳನ್ವಯ ತೂಕದ ಸಾಧನಗಳನ್ನು ಅಳವಡಿಸಿರುವುದರ ಕುರಿತು ಖಾತರಿ ಪಡಿಸಿಕೊಳ್ಳುವಂತರ ಸಚಿವರು ಸೂಚನೆ ನೀಡಿದರು.ಆಹಾರ ಇಲಾಖೆ ಆಯುಕ್ತರಾದ ವಾಸವಿ ರೆಡ್ಡಿ ಜೊಸ್ನಾ ಮಾತನಾಡಿ, ಅನ್ನಭಾಗ್ಯ ಯೋಜನೆಯಡಿ ಬೆಳಗಾವಿ ವಿಭಾಗಕ್ಕೆ ಸೆಪ್ಟೆಂಬರ್ ಅಂತ್ಯದ ವರೆಗೆ 2759.02 ಕೋಟಿ ಡಿಬಿಟಿ ಮೂಲಕ ಸಂದಾಯಿಸಲಾಗಿರುತ್ತದೆ. ಬೆಳಗಾವಿ ಕಂದಾಯ ವಿಭಾಗದಲ್ಲಿ 5231 ನ್ಯಾಯಬೆಲೆ ಅಂಗಡಿಗಳಿದ್ದು, ಹೊಸ ಪಡಿತರ ಅಂಗಡಿಗಳನ್ನು ತೆರೆಯಲು ಇರುವಂತಹ ಮಾರ್ಗಸೂಚಿಗಳನ್ವಯ ಪ್ರಸ್ತಾವನೆ ಸಲ್ಲಿಸಲು ತಿಳಿಸಿದರು.
ಕಾನೂನು ಮಾಪನ ಇಲಾಖೆ ನಿಯಂತ್ರಕಿ ಅನೀತಾ ಲಕ್ಷ್ಮೀ ಮಾತನಾಡಿ, ಬೆಳಗಾವಿ ಕಂದಾಯ ವಿಭಾಗದಲ್ಲಿ ಜನವರಿ -2025ರ ಅಂತ್ಯದ ವರೆಗೆ ₹12.15 ಕೋಟಿ ರಾಜಸ್ವ ಸಂಗ್ರಹ ಮಾಡಲಾಗಿರುತ್ತದೆ. ಒಟ್ಟು 11418 ತಪಾಸಣೆ ನಡೆಸಿ 2218 ಮೊಕದ್ದಮೆಗಳನ್ನು ಹೂಡಿ ₹73.88 ಲಕ್ಷ ಅಭಿಸಂಧಾನ ದಂಡವನ್ನು ವಿಧಿಸಲಾಗಿದೆ. ಬೆಳಗಾವಿ ಕಂದಾಯ ವಿಭಾಗದಲ್ಲಿ ಪ್ರಸಕ್ತ ವರ್ಷದಲ್ಲಿ 1821 ಪೆಟ್ರೋಲ್ ಪಂಪ್ಗಳನ್ನು ತಪಾಸಣೆ ಗೈದಿದ್ದು ಈ ಪೈಕಿ 225 ಮೊಕದ್ದಮೆಗಳನ್ನು ಹೂಡಿ ₹5,55,00 ಅಭಿಸಂದಾನ ಶುಲ್ಕವನ್ನು ಸಂಗ್ರಹಿಸಲಾಗಿರುತ್ತದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಸಚಿವರ ವಿಶೇಷ ಕರ್ತವ್ಯಾಧಿಕಾರಿ ವೆಂಕಟೇಶ, ಆಪ್ತ ಕಾರ್ಯದರ್ಶಿ ನಟರಾಜ, ಆಹಾರ ಇಲಾಖೆ ಐಟಿ ವಿಭಾಗದ ಮುಖ್ಯಸ್ಥ ಎಂ.ವಿ.ಚಂದ್ರಕಾಂತ, ಆಹಾರ ಇಲಾಖೆ ಆಯುಕ್ತರ ಕಚೇರಿ ಜಂಟಿ ನಿರ್ದೆಶಕ ಎಂ.ಎಸ್.ಬಾಬು, ಕಾನೂನು ಮಾಪನ ಶಾಸ್ತ್ರ ಇಲಾಖೆ ಜಂಟಿ ನಿಯಂತ್ರಕ ಎಸ್.ಆರ್.ಮಾಳಿ ಸೇರಿದಂತೆ ಬೆಳಗಾವಿ ಕಂದಾಯ ವಿಭಾಗದ ವಿವಿಧ ಜಿಲ್ಲೆಗಳ ಜಂಟಿ ನಿರ್ದೆಶಕರು, ಉಪನಿರ್ದೆಶಕರುಗಳು ಹಾಜರಿದ್ದರು.