ರಸ್ತೆಗಳನ್ನು ಗುಂಡಿಗಳಿಂದ ಮುಕ್ತಿಗೊಳಿಸಲು ಶಾಸಕರ ತುರ್ತು ಸಭೆ

| Published : Oct 25 2024, 12:53 AM IST

ಸಾರಾಂಶ

ಪಟ್ಟಣದಲ್ಲಿಯೂ ಸಹ ರಸ್ತೆಗಳು ಹದಗೆಟ್ಟಿದ್ದು ರಸ್ತೆಗಳ ಅಭಿವೃದ್ಧಿಗಾಗಿ ಸರ್ಕಾರ ೨೦ ಕೋಟಿ ರು.ಗಳ ಅನುದಾನ ಬಿಡುಗಡೆ ಮಾಡಿದ್ದು, ರಸ್ತೆ ಅಭಿವೃದ್ಧಿ ಕಾಮಗಾರಿಗಳು ಪ್ರಾರಂಭವಾಗುವ ಮೊದಲು ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚಿ ಸುಗಮ ವಾಹನ ಸಂಚಾರಕ್ಕೆ ಅನುಕೂಲ ಕಲ್ಪಿಸುವಂತೆ ಪುರಸಭಾ ಅಧಿಕಾರಿಗಳಿಗೆ ಸೂಚಿಸಿದರು.

ಕನ್ನಡಪ್ರಭ ವಾರ್ತೆ ಮಾಲೂರು

ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆಗಳ ಗುಂಡಿಗಳಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ತೊಂದರೆಯಾಗಿರುವುದರಿಂದ ಶಾಸಕ ನಂಜೇಗೌಡ ಅವರು ಲೋಕೋಪಯೋಗಿ ಇಲಾಖೆ ಹಾಗೂ ಪುರಸಭೆಯ ಅಧಿಕಾರಿಗಳ ತುರ್ತು ಸಭೆ ನಡೆಸಿ ಪರಿಸ್ಥಿತಿ ಬಗ್ಗೆ ಚರ್ಚಿಸಿದರು.

ಪಟ್ಟಣದ ಕೋಚಿಮುಲ್ ಶಿಬಿರ ಕಚೇರಿಯ ಸಭಾಂಗಣದಲ್ಲಿ ಲೋಕೋಪಯೋಗಿ ಇಲಾಖೆ ಹಾಗೂ ಪುರಸಭೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ತಾಲೂಕಿನಲ್ಲಿ ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆಗಳಲ್ಲಾಗಿರುವ ತಗ್ಗುಗುಂಡಿಗಳಲ್ಲಿ ಮಳೆಯ ನೀರು ನಿಂತ್ತಿದ್ದು, ಸಂಚಾರಕ್ಕೆ ತುಂಬಾ ತೊಂದರೆಯಾಗಿರುವ ಬಗ್ಗೆ ವಾಹನ ಸವಾರರು, ಸಾರ್ವಜನಿಕರು ನನ್ನ ಗಮನಕ್ಕೆ ತಂದಿದ್ದಾರೆ. ಇದು ನನ್ನ ಅನುಭವಕ್ಕೂ ಬಂದಿದೆ ಎಂದ ಶಾಸಕರು, ವಾಹನ ಸವಾರರಿಗೆ ಯಾವುದೇ ರೀತಿಯ ಅನಾಹುತಗಳಾಗದಂತೆ ತಪ್ಪಿಸಲು ಅಧಿಕಾರಿಗಳು ಹೊಸೂರು ರಸ್ತೆ ಮಾಸ್ತಿ ರಸ್ತೆಯಲ್ಲಿ ಬಿದ್ದಿರುವ ತಗ್ಗು, ಗುಂಡಿಗಳನ್ನು ದುರಸ್ತಿ ಪಡಿಸುವಂತೆ ಸೂಚಿಸಿದರು.

ಪಟ್ಟಣದಲ್ಲಿಯೂ ಸಹ ರಸ್ತೆಗಳು ಹದಗೆಟ್ಟಿದ್ದು ರಸ್ತೆಗಳ ಅಭಿವೃದ್ಧಿಗಾಗಿ ಸರ್ಕಾರ ೨೦ ಕೋಟಿ ರು.ಗಳ ಅನುದಾನ ಬಿಡುಗಡೆ ಮಾಡಿದ್ದು, ರಸ್ತೆ ಅಭಿವೃದ್ಧಿ ಕಾಮಗಾರಿಗಳು ಪ್ರಾರಂಭವಾಗುವ ಮೊದಲು ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚಿ ಸುಗಮ ವಾಹನ ಸಂಚಾರಕ್ಕೆ ಅನುಕೂಲ ಕಲ್ಪಿಸುವಂತೆ ಪುರಸಭಾ ಅಧಿಕಾರಿಗಳಿಗೆ ಸೂಚಿಸಿದರು.

ಪುರಸಭಾ ಅಧ್ಯಕ್ಷ ಕೋಮಲ ನಾರಾಯಣ್, ಸ್ಥಾಯಿ ಸಮಿತಿಯ ಅಧ್ಯಕ್ಷ ಎ.ರಾಜಪ್ಪ, ತಾಲೂಕು ಪಂಚಾಯಿತಿ ಇಒ ವಿ ಕೃಷ್ಣಪ್ಪ, ಪುರಸಭಾ ಮುಖ್ಯ ಅಧಿಕಾರಿ ಎಪಿ ಪ್ರದೀಪ್ ಕುಮಾರ್, ಲೋಕೋಪಯೋಗಿ ಇಲಾಖೆಯ ಅಭಿಯಂತರ ರಾಜು, ಜಿಪಂ ಇಂಜಿನಿಯರಿಂಗ್ ಉಪ ವಿಭಾಗದ ಅಭಿಯಂತರ ವಿಶ್ವನಾಥ್ ರೆಡ್ಡಿ, ಕುಡಿಯುವ ನೀರು ನೈರ್ಮಲ್ಯ ವಿಭಾಗದ ಎಇಇ ಉಬೆದುಲ್ಲಾ ಬೇಗ್, ಇನ್ನಿತರಿದ್ದರು.