ನವಲಗುಂದ:
ಟಾಟಾ ಪವರ್ ಕಂಪನಿ ಲಿಮಿಟೆಡ್ ಖಾಸಗಿ ಕಂಪನಿಗೆ ರಾಜ್ಯದಲ್ಲಿ ವಿದ್ಯುತ್ ವಿತರಣಾ ಹಸ್ತಾಂತರಿಸಲು ಪ್ರಯತ್ನ ನಡೆಯುತ್ತಿರುವುದನ್ನು ವಿರೋಧಿಸಿ ನವಲಗುಂದ ಹೆಸ್ಕಾಂ ನೌಕರರ ಸಂಘ ಶಾಸಕ ಎನ್.ಎಚ್. ಕೋನರಡ್ಡಿಗೆ ಮನವಿ ಸಲ್ಲಿಸಿದರು.ಇಂಧನ ಇಲಾಖೆಯನ್ನು ಖಾಸಗೀಕರಣ ಮಾಡುತ್ತಿರುವುದರಿಂದ ಮುಂದಿನ ದಿನದಲ್ಲಿ ಪ್ರತಿಯೊಬ್ಬರಿಗೂ ತೊಂದರೆಯಾಗಲಿದೆ. ಒಕ್ಕೂಟವು ರಾಜ್ಯದ ಎಲ್ಲ ವರ್ಗದ ಗ್ರಾಹಕರ ಮತ್ತು ಕಂಪನಿಗಳ ಹಿತ ಕಾಯಲು ಬದ್ಧವಾಗಿದೆ. ರಾಜ್ಯದಲ್ಲಿ ಅದ್ಭುತ ತಾಂತ್ರಿಕ ಸಾಮರ್ಥ್ಯ, ಮೂಲಸೌಕರ್ಯ ಮತ್ತು ಸುಗಮ ಆಡಳಿತ ನಿರ್ವಹಣೆ ಇರುವಾಗ ರಾಜ್ಯದ ವಿದ್ಯುತ್ ವಿತರಣಾ ಜಾಲವನ್ನು ಹೊರ ರಾಜ್ಯದ ಖಾಸಗಿ ಸಂಸ್ಥೆಗೆ ಹಸ್ತಾಂತರಿಸಲು ಬಿಡುವುದಿಲ್ಲ. ವಿದ್ಯುತ್ ವಿತರಣಾ ಜಾಲದ ಖಾಸಗೀಕರಣ ನಿರ್ಧಾರ ಕೈಬಿಟ್ಟು ಟಾಟಾ ಪವರ್ ಸಂಸ್ಥೆಯ ಅರ್ಜಿಯನ್ನು ತಿರಸ್ಕರಿಸಬೇಕು ಎಂದು ಒತ್ತಾಯಿಸಿದರು.
ಕೆಪಿಟಿಸಿಎಲ್ ಹಾಗೂ 5 ಎಸ್ಕಾಂಗಳ ವ್ಯಾಪ್ತಿಯಲ್ಲಿ ವಿದ್ಯುತ್ ವಿತರಣೆಗೆ ಟಾಟಾ ಪವರ್ ಕಂಪನಿ ಪರವಾನಗಿ ಪಡೆಯುತ್ತಿರುವುದು ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣಗೊಳಿಸುವ ವ್ಯವಸ್ಥಿತ ಸಂಚು. ಹೀಗಾಗಿ ಪರವಾನಗಿ ನೀಡುವುದಕ್ಕೆ ಆಕ್ಷೇಪಣೆ ಸಲ್ಲಿಸಬೇಕು. ಒಂದು ವೇಳೆ ಸರ್ಕಾರವು ಈ ಖಾಸಗೀಕರಣದ ನಿರ್ಧಾರದಿಂದ ಹಿಂದೆ ಸರಿಯದಿದ್ದರೆ ಮುಂದಿನ ದಿನಗಳಲ್ಲಿ ಉಗ್ರವಾದ ಪ್ರತಿಭಟನೆ ನಡೆಸುವುದಾಗಿ ಸಂಘವು ಮನವಿ ಪತ್ರದಲ್ಲಿ ತಿಳಿಸಿದೆ.ರಾಜ್ಯದ ಗ್ರಾಹಕ ವರ್ಗದ ಹಿತದೃಷ್ಟಿಯಿಂದ ಹಾಗೂ ನವಲಗುಂದ ನೌಕರರ ಹಿತದೃಷ್ಟಿಯಿಂದ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದು ಶಾಸಕ ಎನ್.ಎಚ್. ಕೋನರಡ್ಡಿ ಭರವಸೆ ನೀಡಿದರು. ಸಂಘದ ಕಾರ್ಯದರ್ಶಿ ಚಂದ್ರಶೇಖರ ಬಾವಿಕಟ್ಟಿ, ಹಣಮರಡ್ಡಿ ರೋಗಿ, ಎಸ್.ಎಸ್. ಬೆಟಗೇರಿ, ಆರ್.ಕೆ. ಪಾಟೀಲ್, ಬಿ.ಎನ್. ನಾಯ್ಕರ್, ಎಸ್.ಡಿ. ನಡುವಿನಮನಿ, ಬಿ.ಎ. ಸಿದ್ದನಗೌಡ, ಸಿದ್ದಪ್ಪ ಲಕ್ಕುಂಡಿ, ಜಿ.ಎಸ್. ಬಸಾಪುರ, ಎ.ಜಿ. ನಾಗನೂರ, ವಿ.ವೈ. ಆನಂದಿ, ಅರ್ಜುನ ಕೊಣ್ಣೂರ ಸೇರಿದಂತೆ ಹೆಸ್ಕಾಂ ನೌಕರರ ಸಂಘದ ಸದಸ್ಯರಿದ್ದರು.