ಬಯೋಗ್ಯಾಸ್ ಉತ್ಪಾದನೆಗೆ ಪ್ರೋತ್ಸಾಹ

| Published : Dec 23 2024, 01:05 AM IST

ಸಾರಾಂಶ

ಉದ್ಯಮಿದಾರರಿಗೆ ಪರಿಚಯಿಸುವಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ.

ಬಳ್ಳಾರಿ: ತಾಲೂಕಿನ ಹಗರಿ ಕೃಷಿ ವಿಜ್ಞಾನ ಕೇಂದ್ರಕ್ಕೆ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಸ್.ಈ.ಸುಧೀಂದ್ರ ಭಾನುವಾರ ಭೇಟಿ ನೀಡಿ ಕೇಂದ್ರದ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಗ್ರ ಮಾಹಿತಿ ಪಡೆದುಕೊಂಡರು.

ಹಗರಿ ಕೃಷಿ ವಿಜ್ಞಾನ ಕೇಂದ್ರವು ಇಡೀ ಜಿಲ್ಲೆಯಲ್ಲಿ ಜೈವಿಕ ಇಂಧನ ಕಾರ್ಯ ಯೋಜನೆಗಳ ಕುರಿತು ರೈತರಿಗೆ, ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಹಾಗೂ ಉದ್ಯಮಿದಾರರಿಗೆ ಪರಿಚಯಿಸುವಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಪ್ರಶಂಶಿಸಿದರು.

ಬಯೋಡೇಸಲ್ ಉತ್ಪಾದನಾ ಘಟಕಕ್ಕೆ ಭೇಟಿ ನೀಡಿದ ಅಧ್ಯಕ್ಷರು, ಯಂತ್ರೋಪಕರಣಗಳು ದುರಸ್ತಿಯಲ್ಲಿರುವುದನ್ನು ಕಂಡು ಕೂಡಲೇ ತಂತ್ರಜ್ಞರನ್ನು ಕಳುಹಿಸಿ ರಿಪೇರಿ ಮಾಡಿಸಿ ಕೊಡುವುದಾಗಿ ಭರವಸೆ ನೀಡಿದರು.

ಕೇಂದ್ರದ ಜೈವಿಕ ಇಂಧನ ನೆಡುತೋಪಿಗೆ ಭೇಟಿ ನೀಡಿದ ಅವರು ಮಳೆ ಕೊಯ್ಲು ಉದ್ದೇಶಕ್ಕಾಗಿ ನಿರ್ಮಿಸಿರುವ ಕೊಂಡಗಳನ್ನು ವೀಕ್ಷಿಸಿದರು. ಮಂಡಳಿಯು ಜೈವಿಕ ಇಂಧನ ಕ್ಷೇತ್ರದ ಉನ್ನತೀಕರಣ ಹಾಗೂ ವಾಣಿಜ್ಯೀಕರಣಕ್ಕಾಗಿ ಕೈಗೊಳ್ಳಲಾಗುತ್ತಿರುವ ಕಾರ್ಯಯೋಜನೆಗಳು, ರಚನಾತ್ಮಕ ಕಾರ್ಯಯೋಜನೆಗಳ ಕುರಿತು ಅಧ್ಯಕ್ಷರು ವಿವರಿಸಿದರು.

ಮಂಡಳಿಯ ನೂತನ ರಾಜ್ಯ ಜೈವಿಕ ಇಂಧನ ನೀತಿ 2025 ಹಾಗೂ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯನ್ನು ಕರ್ನಾಟಕ ಜೈವಿಕ ಇಂಧನ ಅಭಿವೃದ್ಧಿ ಮತ್ತು ನಿರ್ವಹಣಾ ಪ್ರಾಧಿಕಾರವನ್ನಾಗಿ ಪರಿವರ್ತಿಸುವ ಕುರಿತು ಈಗಾಗಲೇ ಪೂರ್ವ ಸಿದ್ಧತಾ ಕಾರ್ಯಗಳ ಕುರಿತು ವಿಚಾರ ವಿನಿಮಯ ಮಾಡಿಕೊಂಡರು.

ಮುಂದಿನ ದಿನಗಳಲ್ಲಿ ಜೈವಿಕ ಇಂಧನ ಕ್ಷೇತ್ರದಲ್ಲಿ ಬಯೋಡಿಸಲ್, 2G ಎಥೆನಾಲ್ ಜೊತೆಗೆ ಬಯೋ ಗ್ಯಾಸ್ ಸಿಬಿಜಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಅಭಿಪ್ರಾಯಪಟ್ಟ ಅವರು, ಬಯೋಗ್ಯಾಸ್ ಉತ್ಪಾದನಾ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸಲು ಮಂಡಳಿಯು ಪೂರಕ ವಾತಾವರಣ ನಿರ್ಮಾಣ ಮಾಡಲು ಯೋಜನೆಗಳನ್ನು ಕಾರ್ಯಗತಗೊಳಿಸಲಾಗುವುದು ಎಂದು ತಿಳಿಸಿದರು.

ಬಳಿಕ ಯುವ ವಿದ್ಯಾರ್ಥಿಗಳೊಂದಿಗೆ ಜೈವಿಕ ಇಂಧನ ಕುರಿತು ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ಕೃಷಿ ವಿಜ್ಞಾನ ಕೇಂದ್ರದ ಸಂಯೋಜಕರಾದ ಡಾ.ಗಿರೀಶ್ ಮತ್ತು ರವಿಕುಮಾರ್, ಕೃಷಿ ವಿದ್ಯಾರ್ಥಿಗಳು, ಬೋಧಕ ಸಿಬ್ಬಂದಿ ಹಾಗೂ ಬೋಧಕೇತರ ಸಿಬ್ಬಂದಿ ಇದ್ದರು.