ವಸತಿ ನಿಲಯಗಳಲ್ಲಿ ಯಾವುದೇ ಕಾರಣಕ್ಕೂ ಅಹಿತಕರ ಘಟನೆ ನಡೆಯದಂತೆ ನಿಲಯಪಾಲಕರು ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಎಚ್ಚರವಹಿಸಬೇಕು ಎಂದು ಶಾಸಕ ರಾಜುಗೌಡ ಪಾಟೀಲ ಕುದರಿಸಾಲವಾಡಗಿ ಸೂಚನೆ ನೀಡಿದರು.
ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ
ವಸತಿ ನಿಲಯಗಳಲ್ಲಿ ಯಾವುದೇ ಕಾರಣಕ್ಕೂ ಅಹಿತಕರ ಘಟನೆ ನಡೆಯದಂತೆ ನಿಲಯಪಾಲಕರು ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಎಚ್ಚರವಹಿಸಬೇಕು ಎಂದು ಶಾಸಕ ರಾಜುಗೌಡ ಪಾಟೀಲ ಕುದರಿಸಾಲವಾಡಗಿ ಸೂಚನೆ ನೀಡಿದರು.ಪಟ್ಟಣದ ಸಮಾಜಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಯರ ನೂತನ ವಸತಿ ನಿಲಯಕ್ಕೆ ಸೋಮವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ವಸತಿ ನಿಲಯಗಳ ಸಮರ್ಪಕ ನಿರ್ವಹಣೆಯಲ್ಲಿ ವಾರ್ಡನ್ಗಳ ಪಾತ್ರ ಪ್ರಮುಖವಾಗಿದೆ. ಬದ್ಧತೆ ಹಾಗೂ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ವಸತಿ ನಿಲಯದಲ್ಲಿನ ಎಲ್ಲಾ ಮಕ್ಕಳನ್ನು ಸ್ವಂತ ಮಕ್ಕಳಂತೆ ಕಾಳಜಿಯಿಂದ ಕಾಣಬೇಕು. ಪ್ರತಿಯೊಂದು ವಿಷಯಗಳ ಮೇಲೆ ನಿಗಾ ವಹಿಸಬೇಕು. ಮುಖ್ಯವಾಗಿ ವಸತಿನಿಲಯಗಳಲ್ಲಿ ಭದ್ರತೆಗೆ ಕ್ರಮ ಹಾಗೂ ಸಿಸಿಟಿವಿ ಕಡ್ಡಾಯವಾಗಿ ಚಾಲ್ತಿಯಲ್ಲಿರುವಂತೆ ನೋಡಿಕೊಳ್ಳಬೇಕು. ಆಹಾರ ಪದಾರ್ಥಗಳ ಗುಣಮಟ್ಟ, ಸ್ವಚ್ಛತೆಗೆ ಆದ್ಯತೆ, ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಶೌಚಾಲಯಗಳ ನಿರ್ವಹಣೆಗೆ ಕ್ರಮ ವಹಿಸಬೇಕು. ಒಂದು ವೇಳೆ ಅವ್ಯವಸ್ಥೆ ಕಂಡು ಬಂದರೆ ವಾರ್ಡನ್ ಹಾಗೂ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಲು ಸೂಚಿಸಲಾಗುವುದು ಎಂದು ಹೇಳಿದರು.
ತಹಸೀಲ್ದಾರ್ ನಿಂಗಪ್ಪ ಬಿರಾದಾರ, ಪಿಡಬ್ಲ್ಯೂಡಿ ಎಇಇ ಅರುಣಕುಮಾರ ವಡಗೇರಿ, ಇಲಾಖೆಯ ಸಹಾಯಕ ನಿರ್ದೇಶಕರಾದ ಭವಾನಿ ಪಾಟೀಲ, ಆಹಾರ ಇಲಾಖೆ ಸಹಾಯಕ ನಿರ್ದೇಶಕ ಬಸವರಾಜ ಭೋವಿ, ವಾರ್ಡನ್ ನಫೀಸಾ ಬೇಗಂ, ಪಪಂ ಅಧ್ಯಕ್ಷರ ಪ್ರತಿನಿಧಿ ಬಸವರಾಜ ದೇವಣಗಾಂವ, ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ರೀಯಾಜ ಯಲಗಾರ, ಮುಖಂಡರಾದ ಮುನೀರ್ ಅಹ್ಮದ್ ಮಳಖೇಡ, ಕಾಶಿನಾಥ ವಡವಡಗಿ, ಶರಣು ಧರಿ, ಮಹಾಂತೇಶ ವಂದಾಲ, ಕಾಸು ಕುದರಿ, ಅಪ್ಪುಗೌಡ ಪಾಟೀಲ ಸೇರಿ ಹಲವರಿದ್ದರು.