ಕನ್ನಡಪ್ರಭ ವಾರ್ತೆ, ಮೈಸೂರು
ರಾಜ್ಯದ ಕಂದಾಯ ಇಲಾಖೆಯಲ್ಲಿ ಕ್ರಾಂತಿಕಾರಕ ಬದಲಾವಣೆ ತರಲಾಗಿದ್ದು, ಸಾರ್ವಜನಿಕರು ಇನ್ಮುಂದೆ ಕಂದಾಯ ಇಲಾಖೆ ಕೆಲಸಗಳಿಗೆ ಸರ್ಕಾರಿ ಕಚೇರಿಗೆ ಅಲೆಯುವ ಅಗತ್ಯವಿಲ್ಲ. ಜನರ ಮನೆ ಬಾಗಿಲಿಗೆ ಆಡಳಿತ ಎಂಬುದು ಒಂದಡೆಯಾದರೆ.ಮುಖ್ಯಮಂತ್ರಿ ತವರು ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ಕಚೇರಿಗೆ ರೈತರೊಬ್ಬರು ಆರ್ಟಿಸಿಯಲ್ಲಿ ಹಿಸ್ಸೆ ಇಂಡೀಕರಣಕ್ಕಾಗಿ ಅರ್ಜಿ ಸಲ್ಲಿಸಿ 5 ತಿಂಗಳು ತುಂಬಿದ್ದರೂ ಕೆಲಸ ಮಾತ್ರ ಇದುವರಗೆ ಆಗಿಲ್ಲ.
ಏನಿದು ಪ್ರಕರಣ:ನಂಜನಗೂಡು ತಾಲೂಕು ಹುಲ್ಲಹಳ್ಳಿ ಹೋಬಳಿ ಕಣೇನೂರು ಸ.ನಂ.262ರ ಆರ್ಟಿಸಿ ಗೆ ಸಂಬಂಧಿಸಿದಂತೆ ಆಕಾರ್ಬಂದ್ನಂತೆ ಆರ್ಟಿಸಿಯಲ್ಲಿ ಹಿಸ್ಸೆ ಇಂಡೀಕರಣ ಮಾಡಿಕೊಡುವಂತೆ 2025ರ ಸೆ. 17ರಂದು ಅರ್ಜಿ ಸಲ್ಲಿಸಿದ್ದರೂ ಇದುವರಗೆ ಆರ್ಟಿಸಿ ಇಂಡೀಕರಣವಾಗಿಲ್ಲ.
ಕಂದಾಯ ಸಚಿವರು ರೈತರು ಅಲೆಯುವುದನ್ನು ತಪ್ಪಿಸುವ ಸಲುವಾಗಿ ಖಾತೆ ಬದಲಾವಣೆ, ಪೋಡಿ ಸೇರಿದಂತೆ ಹಲವು ಸೇವೆಗಳನ್ನು ತ್ವರಿತಗತಿಯಲ್ಲಿ ಒದಗಿಸುವ ಸಲುವಾಗಿ ಸಾಕಷ್ಟು ಬದಲಾವಣೆ ಮಾಡಲು ಹೊರಟಿದ್ದು, ನಂಜನಗೂಡು ತಾಲೂಕು ಕಚೇರಿಯಲ್ಲಿ ಮಾತ್ರ ಸರ್ವರ್ ಡೌನ್, ನೆಟ್ ವರ್ಕ್ ಇಲ್ಲ, ವೆಬೈಸೈಟ್ ಓಪನ್ ಆಗುತ್ತಿಲ್ಲ, ಸಿಬ್ಬಂದಿ ರಜೆಯಲ್ಲಿದ್ದಾರೆ, ತಹಸೀಲ್ದಾರ್ ಇನ್ನೂ ನೋಡಿಲ್ಲ ಮಂತಾದ ಕಾರಣಗಳನ್ನು ಹೇಳಿ ರೈತರನ್ನು ಅಲೆಸುತ್ತಿದ್ದಾರೆ.
ಅರ್ಜಿ ಸಲ್ಲಿಸಿ 5 ತಿಂಗಳಲ್ಲಿ ಅರ್ಜಿದಾರರು ಹಲವಾರು ಬಾರಿ ತಾಲೂಕು ಕಚೇರಿಗೆ ತೆರಳಿ ವಿಷಯ ನಿರ್ವಾಹಕರು, ಶಿರಸ್ತೇದಾರ್ ಮತ್ತು ತಹಸೀಲ್ದಾರ್ ಭೇಟಿ ಮಾಡಿ ವಿಳಂಬದ ಬಗ್ಗೆ ಗಮನಕ್ಕೆ ತರುವುದಲ್ಲದೆ, ಅಗತ್ಯ ದಾಖಲಾತಿಗಳನ್ನು ಸಲ್ಲಿಸಿದ್ದರೂ ಕೆಲಸವಾಗದ ಹಿನ್ನೆಲೆ ಬೇಸತ್ತು ಕಂದಾಯ ಸಚಿವರಿಗೆ ದೂರು ಸಲ್ಲಿಸಿದ್ದಾರೆ.ಕಂದಾಯ ಇಲಾಖೆಯಲ್ಲಿ ಇಂತಹ ಸಾಕಷ್ಟು ಅರ್ಜಿಗಳು ಬಾಕಿ ಇದ್ದು, ಆದ್ಯತೆ ಮೇಲೆ ಕೆಲಸ ಮಾಡುತ್ತಿದ್ದೇವೆ. ಕಣೇನೂರು ಸ.ನಂ. 262ರ ಆರ್ಟಿಸಿ ಇಂಡೀಕರಣಕ್ಕಾಗಿ ಭೂಮಿ ಕೇಂದ್ರದಿಂದ ಸರ್ವೇ ವಿಭಾಗಕ್ಕೆ ಕಳುಹಿಸಲಾಗಿದೆ.
- ಡಾ.ಸ್ಮೀತಾ, ತಹಸೀಲ್ದಾರ್, ನಂಜನಗೂಡು.ತಾಲೂಕು ಕಚೇರಿಯಲ್ಲಿ ಆರ್ಟಿಸಿ ಇಂಡೀಕರಣಕ್ಕಾಗಿ 5 ತಿಂಗಳ ಹಿಂದೆ ಅರ್ಜಿ ಸಲ್ಲಿಸಿದ್ದರೂ ಕೆಲಸವಾಗಿಲ್ಲ. ನಿಗಧಿತ ಅವಧಿಯಲ್ಲಿ ಕೆಲಸ ಮಾಡಲು ವಿಳಂಬಧೋರಣೆ ಅನುಸರಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು.
- ದೇವರಾಜು, ರೈತ