ಕನ್ನಡಪ್ರಭ ವಾರ್ತೆ ಮಂಡ್ಯ

ಮಧ್ಯಪ್ರಾಚ್ಯ ಯುದ್ಧದ ಪರಿಣಾಮ ಮಂಡ್ಯ ನಗರದಲ್ಲೂ ಆಟೋ ಗ್ಯಾಸ್ ಖಾಲಿಯಾಗಿದೆ. ಇದರಿಂದ ಆಟೋ ಚಾಲಕರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಶನಿವಾರ ಬೆಳಗ್ಗೆಯಿಂದ ಗ್ಯಾಸ್ ಖಾಲಿಯಾಗಿದೆ. ಅಂಗಡಿ ಎದುರು ಗ್ಯಾಸ್ ಖಾಲಿಯಾಗಿರುವ ನಾಮಫಲಕವನ್ನು ಅಳವಡಿಸಲಾಗಿದೆ.

ಇಲ್ಲಿನ ಅಶೋಕನಗರ ಮತ್ತು ಕಲ್ಲಹಳ್ಳಿಯಲ್ಲಿ ಎರಡು ಆಟೋ ಗ್ಯಾಸ್ ಬಂಕ್‌ಗಳಿವೆ. ಇದರಲ್ಲಿ ಅಶೋಕನಗರದ ಬಂಕ್‌ನಲ್ಲಿ ಗ್ಯಾಸ್ ಖಾಲಿಯಾಗಿರುವ ಬೋರ್ಡ್ ಹಾಕಲಾಗಿದೆ. ಮತ್ತೊಂದು ಬಂಕ್‌ನಲ್ಲಿ ಗ್ಯಾಸ್ ನೀಡಲಾಗುತ್ತಿದ್ದರೂ ಯಾವಾಗ ಖಾಲಿಯಾಗುವುದೋ ಗೊತ್ತಿಲ್ಲ. ಇದರಿಂದ ಎಲ್‌ಪಿಜಿ ಆಟೋ ಚಾಲಕರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ.

ಯುದ್ಧ ಆರಂಭಕ್ಕೂ ಮುನ್ನ ಅಶೋಕನಗರ ಬಂಕ್‌ನಲ್ಲಿ ನಿತ್ಯ ೯ ರಿಂದ ೧೦ ಟನ್ ಗ್ಯಾಸ್ ಸರಬರಾಜಾಗುತ್ತಿತ್ತು. ಪ್ರತಿದಿನ ಆಟೋಗಳಿಗೆ ೨ ಸಾವಿರ ಲೀಟರ್‌ನಷ್ಟು ಗ್ಯಾಸ್ ತುಂಬಿಸಿಕೊಡಲಾಗುತ್ತಿತ್ತು. ಯುದ್ಧ ಆರಂಭವಾದ ನಂತರದಲ್ಲಿ ಆಟೋ ಗ್ಯಾಸ್‌ಗೆ ದಿಢೀರ್ ಬೇಡಿಕೆ ಸೃಷ್ಟಿಯಾಯಿತು. ಬೇರೆ ಬೇರೆ ಕಡೆಗಳಲ್ಲಿರುವ ಬಂಕ್‌ಗಳಲ್ಲಿ ಸಿಎನ್‌ಐ ಗ್ಯಾಸ್ ಖಾಲಿಯಾಗಿರುವುದರಿಂದ ಮದ್ದೂರು, ಮಳವಳ್ಳಿ ಸೇರಿದಂತೆ ಇತರೆ ಭಾಗಗಳಿಂದಲೂ ಗ್ಯಾಸ್ ತುಂಬಿಸಿಕೊಳ್ಳಲು ಮಂಡ್ಯಕ್ಕೆ ಬರುತ್ತಿದ್ದಾರೆ. ಪರಿಣಾಮ ನಿತ್ಯದ ಬೇಡಿಕೆ ೨ ಸಾವಿರ ಲೀಟರ್ ಇದ್ದದ್ದು ಒಮ್ಮೆಗೇ ೫ ಸಾವಿರ ಲೀಟರ್‌ಗೆ ಏರಿಕೆಯಾಯಿತು.

ಈ ಮೊದಲು ಆಟೋ ಚಾಲಕರು ೨೦೦ರು., ೪೦೦ ರು.ಗಳಿಗೆ ಗ್ಯಾಸ್ ತುಂಬಿಸಿಕೊಳ್ಳುತ್ತಿದ್ದವರು ಈಗ ಫುಲ್ ಟ್ಯಾಂಕ್ ಗ್ಯಾಸ್ ಮಾಡಿಸಿಕೊಳ್ಳುತ್ತಿದ್ದಾರೆ. ಬೇರೆ ಬೇರೆ ಕಡೆಗಳಿಂದಲೂ ಬಂಕ್‌ಗಳಿಗೆ ಆಟೋ ಚಾಲಕರು ಲಗ್ಗೆ ಇಡುತ್ತಿರುವುದರಿಂದ ಬೇಡಿಕೆಯನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ ಎಂದು ಗ್ಯಾಸ್ ಬಂಕ್‌ನವರು ಹೇಳುವ ಮಾತಾಗಿದೆ.


ನಿತ್ಯ ೯ ರಿಂದ ೧೦ ಟನ್ ಆಟೋ ಗ್ಯಾಸ್ ಬರುತ್ತಿದ್ದ ಕಡೆ ಈಗ ಕೇವಲ ಅರ್ಧ ಟನ್ ಗ್ಯಾಸ್ ಮಾತ್ರ ಪೂರೈಕೆಯಾಗುತ್ತಿದೆ. ಇದರಿಂದ ನಿತ್ಯ ೫ ಸಾವಿರ ಲೀಟರ್ ಗ್ಯಾಸ್‌ನ್ನು ಆಟೋಗಳಿಗೆ ನೀಡುವುದಕ್ಕೆ ಸಾಧ್ಯವಾಗುತ್ತಿಲ್ಲ. ನಿತ್ಯ ಬರುತ್ತಿದ್ದ ಆಟೋ ಗ್ಯಾಸ್ ಈಗ ಎರಡು-ಮೂರು ದಿನಕ್ಕೊಮ್ಮೆ ಬರುತ್ತಿದೆ. ಮುಂದೆ ಮತ್ತಷ್ಟು ವಿಳಂಬವಾಗಬಹುದೆಂದೂ ಹೇಳಲಾಗುತ್ತಿದೆ. ನಮ್ಮ ಬಂಕ್‌ನಲ್ಲಿ ದಾಸ್ತಾನಿದ್ದ ಗ್ಯಾಸ್‌ನ್ನು ಶನಿವಾರ ಬೆಳಗ್ಗೆ ೯ ಗಂಟೆಯವರೆಗೆ ನೀಡಲಾಗಿದೆ. ಆನಂತರ ಖಾಲಿಯಾಗಿದ್ದು, ನಾಳೆ ಮಧ್ಯಾಹ್ನ ಬರುವುದಾಗಿ ಹೇಳುತ್ತಿದ್ದಾರೆ. ಅಲ್ಲಿಯವರೆಗೆ ಕಾದು ಕೂರಬೇಕಿರುವುದು ಅನಿವಾರ್ಯವಾಗಿದೆ.ಯುದ್ಧ ಆರಂಭವಾಗುವುದಕ್ಕೆ ಮುನ್ನ ಲೀಟರ್ ಗ್ಯಾಸ್‌ಗೆ ೫೩ ರು. ಇತ್ತು. ಈಗ ೮೮ ರು.ಗಳಿಗೆ ಏರಿಕೆಯಾಗಿದೆ. ಹೆಚ್ಚು ಹಣ ಕೊಟ್ಟರೂ ಸರಿಯಾದ ಪ್ರಮಾಣದ ಗ್ಯಾಸ್ ಸಿಗುತ್ತಿಲ್ಲ. ಇಂದು ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಬಂದಿದ್ದರು. ನಾವು ಸರ್ಕಾರಕ್ಕೆ ಮನವಿ ಸಲ್ಲಿಸುತ್ತೇವೆ. ಗ್ಯಾಸ್ ಕೊಡಿ ಇಲ್ಲವೇ ಅಲ್ಲಿಯವರೆಗೆ ಪರಿಹಾರವನ್ನಾದರೂ ಕೊಡಿ. ನಮಗೆ ಜೀವನ ನಡೆಸಲು ತುಂಬಾ ಕಷ್ಟವಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

- ಶಿವಕುಮಾರ್, ಗ್ಯಾಸ್ ಬಂಕ್ ಮ್ಯಾನೇಜರ್ ಎಲ್‌ಪಿಜಿಯನ್ನೇ ನಂಬಿ ಜೀವನ ನಡೆಸುತ್ತಿರುವ ಆಟೋ ಚಾಲಕರು ಕಣ್ಣೀರು ಹಾಕುವಂತಾಗಿದೆ. ಗ್ಯಾಸ್ ಖಾಲಿಯಾಗಿರುವುದರಿಂದ ಬಂಕ್ ಮುಚ್ಚಿದೆ. ಗ್ಯಾಸ್ ಸ್ಟೇಷನ್‌ನಲ್ಲಿ ಆಟೋ ಎಲ್‌ಪಿಜಿ ಲಭ್ಯತೆ ಇಲ್ಲವೆಂದು ತಿಳಿದು ಚಾಲಕರು ನಿರಾಸೆಯಿಂದ ತೆರಳುವಂತಾಗಿದೆ. ಆಟೋ ಓಡಿಸಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದೇವೆ. ಈಗ ಗ್ಯಾಸ್ ಬೆಲೆಯೂ ೩೦ ರು. ಹೆಚ್ಚಾಗಿದೆ. ಅಷ್ಟು ಹಣ ಕೊಟ್ಟರೂ ಗ್ಯಾಸ್ ಸಿಗುತ್ತಿಲ್ಲ. ಸರ್ಕಾರ ಕೂಡಲೇ ಗ್ಯಾಸ್‌ಗೆ ವ್ಯವಸ್ಥೆ ಮಾಡಬೇಕಿದೆ.

- ಅರುಣ, ಚಾಲಕ