ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
೧೨ನೇ ಶತಮಾನದಲ್ಲಿ ಬಸವಣ್ಣನವರು ಸಮಾಜವನ್ನು ಒಗ್ಗೂಡಿಸುವ ಸಲುವಾಗಿ ಎಲ್ಲರನ್ನು ಒಂದೇ ಎಂಬಂತೆ ನಡೆಸಿಕೊಂಡು ವಿಶ್ವವಿಖ್ಯಾತರಾದರು. ಆದರೆ ಅವರ ನಂತರ ೧೯ ಮತ್ತು ೨೦ನೇ ಶತಮಾನದಲ್ಲಿ ನಮ್ಮ ಶ್ರೀ ಸಿದ್ಧಗಂಗೆ ಸ್ವಾಮೀಜಿಗಳಾದ ಶ್ರೀ ಶಿವಕುಮಾರ ಸ್ವಾಮಿಗಳು ಸಮಾಜಕ್ಕೆ ಅತ್ಯವಶ್ಯವಾಗಿ ಬೇಕಾಗಿರುವ ತ್ರಿವಿಧದ ದಾಸೋಹ ನೀಡುವ ಮೂಲಕ ವಿಶ್ವ ಖ್ಯಾತರಾದರೆಂದು ನಿವೃತ್ತ ಪ್ರಾಂಶುಪಾಲ ಎಚ್. ಎಸ್. ಪ್ರಭುಶಂಕರ್ ತಿಳಿಸಿದರು.ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ತಾಲೂಕು ವಕೀಲರ ಸಂಘ ಏರ್ಪಡಿಸಿದ್ದ ಶಿವಕುಮಾರ ಸ್ವಾಮೀಜಿಗಳ ೧೧೯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಶಿವಕುಮಾರ ಸ್ವಾಮೀಜಿ ಅವರು ಸಿದ್ಧಗಂಗೆ ಮಠಾಧೀಶರಾಗಿ ೮೯ ವರ್ಷಗಳು ನಿರಂತರವಾಗಿ ಕಾರ್ಯನಿರ್ವಹಿಸಿದರೆಂದು ತಿಳಿಸಿದರು. ಶಿವಕುಮಾರ ಸ್ವಾಮೀಜಿ ಅವರು ತಮ್ಮ ಸೇವಾ ಅವಧಿಯಲ್ಲಿ ೧೫೩ ಸಂಸ್ಥೆಗಳನ್ನು ಆರಂಭಿಸಿ ಅದರಲ್ಲಿ ಸುಮಾರು ೫೪ ಸಾವಿರ ಮಂದಿ ವಿದ್ಯಾರ್ಥಿಗಳಿಗೆ ದಾರಿದೀಪವಾಗಿದ್ದಾರೆ. ಇವರು ಆರಂಭಿಸಿರುವ ವಿದ್ಯಾಸಂಸ್ಥೆಗಳು ವಿಶ್ವಕ್ಕೆ ಮಾದರಿಯಾಗಿದೆ. ಶಿವಕುಮಾರಸ್ವಾಮಿಗಳು ಸಿದ್ಧಗಂಗೆಯಲ್ಲಿ ಆರಂಭಿಸಿದ ಅನ್ನದಾಸೋಹ ಇಂದಿಗೂ ಸಹ ಮುಂದುವರೆದಿದೆ, ಈ ಮಠದಲ್ಲಿ ದಿನದ ೨೪ ಗಂಟೆಗಳು ಸಹ ಬರುವ ಭಕ್ತರಿಗೆ ಅನ್ನ ದಾಸೋಹ ನೀಡುವ ಮೂಲಕ ಖ್ಯಾತಿ ಪಡೆದುಕೊಂಡಿದೆ.ಇವರು ಆರಂಭಿಸಿರುವ ವಿದ್ಯಾಸಂಸ್ಥೆಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಉಚಿತ ಆಕ್ಷರ ನೀಡುವ ಮೂಲಕ ವಿಶ್ವಖ್ಯಾತಿಗೆ ಕಾರಣರಾಗಿದ್ದಾರೆ ಎಂದರು.ಸಮಾಜದವನ್ನು ಉತ್ತಮ ದಾರಿಗೆ ತರುವ ಸಲುವಾಗಿ ಅನೇಕ ಮಹಾನ್ ದಾಸವರೈಣ್ಯರು ತಮ್ಮ ಜೀವನವನ್ನು ಮುಡಿಪಾಗಿಟ್ಟು ಇಂದಿಗೂ ಸಾರ್ವಜನಿಕರಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ, ಅಂತಹ ದಾರ್ಶನಿಕರಲ್ಲಿ ನಮ್ಮ ಸಿದ್ದಗಂಗೇಯ ಡಾ. ಶಿವಕುಮಾರಸ್ವಾಮಿಗಳು ಮೊದಲ ಪಂಕ್ತಿಯಲ್ಲಿದ್ದಾರೆ, ಅದ್ದರಿಂದಲೇ ಅವರನ್ನು ೧೯-೨೦ ನೇ ಶತಮಾನದ ನಡೆದಾಡುವ ದೇವರು ಎಂದು ಖ್ಯಾತಿ ಪಡೆಯಲು ಕಾರಣವಾಗಿದೆ, ಮನುಷ್ಯನಾದವನು ದೇವರಲ್ಲಿ ತೆರಳಿ ತಮ್ಮ ಆಸೆ ಅಭಿಲಾಷೆಗಳನ್ನು ಕೇಳುವುದು ವಾಡಿಕೆ ಆದರೆ ನಮ್ಮ ಶಿವಕುಮಾರಸ್ವಾಮಿಗಳು ಜನರ ಬಳಿಗೆ ತೆರಳ ಅವರ ಕಷ್ಟಕಾರ್ಪಣ್ಯ ಸಮಸ್ಯೆಗಳನ್ನು ಬಗೆ ಹರಿಸುವ ಮೂಲಕ ನಡೆದಾಡುವ ದೇವರಾದರೆಂದು ಪ್ರಶಂಶಿಸಿದರು.ಶಿವಕುಮಾರಸ್ವಾಮಿಗಳ ಗುರುಕುಲದಲ್ಲಿ ವ್ಯಾಸಂಗ ಮಾಡಿದ ಬಹುತೇಕರ ಉನ್ನತ ಸ್ಥಾನದಲ್ಲಿ ಇದ್ದಾರೆ,ಇದಕ್ಕೆ ಉದಾಹರಣೆಗೆ ನಮ್ಮೂರಿನ ಅನೇಕ ವಕೀಲರು ಈ ಗುರುಕುಲದಲ್ಲಿ ಶಿಕ್ಷಣ ಪಡೆದವರು ಎಂದರೆ ಅತಿಶಯೋಕ್ತಿಯಲ್ಲ ಎಂದರು. ಸಿವಿಲ್ ನ್ಯಾಯಾಧೀಶೆ ಚೇತನ ಅವರು ಕಾರ್ಯಕ್ರಮ ಉದ್ಘಾಟಿಸಿ, ಶಿವಕುಮಾರ ಸ್ವಾಮಿಗಳ ಜಯಂತ್ಯುತ್ಸವದ ಪ್ರಯುಕ್ತ ಎಲ್ಲರಿಗೂ ಶುಭ ಕೋರಿದರು.ವೇದಿಕೆ ಕಾರ್ಯಕ್ರಮ ಆರಂಭಕ್ಕೆ ಮುನ್ನ ವಕೀಲರ ಸಂಘದಲ್ಲಿ ನ್ಯಾಯಮೂರ್ತಿಗಳಾದ ಚೇತನರವರು ಹಾಗೂ ಐಶ್ವರ್ಯ ಎಸ್. ಗುಡದಿನ್ನಿ, ವಕೀಲರ ಸಂಘದ ಅಧ್ಯಕ್ಷ ಶಿವಕುಮಾರ್ ಸೇರಿದಂತೆ ಬಹುತೇಕ ವಕೀಲರು ಡಾ. ಶಿವಕುಮಾರ ಸ್ವಾಮೀಜಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.ತಾಲೂಕು ವಕೀಲರ ಸಂಘದ ಅಧ್ಯಕ್ಷ ಶಿವಕುಮಾರ್ ಅಧ್ಯಕ್ಷತೆ ವಹಿಸಿದ್ದರು. ವಕೀಲರಾದ ಕುಮಾರಿ ಅನುಪಮ ಪ್ರಾರ್ಥಿಸಿದರು, ವಕೀಲ ಕೃಷ್ಣಮೂರ್ತಿ ಸ್ವಾಗತಿಸಿದರು, ಹಿರಿಯ ವಕೀಲ ಜೈಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು.ಕಾರ್ಯಕ್ರಮದಲ್ಲಿ ಅಧಿಕ ಸಿವಿಲ್ ನ್ಯಾಯಾಧೀಶರಾದ ಐಶ್ವರ್ಯ ಗುಡದಿನ್ನಿ,ಸರ್ಕಾರಿ ಅಭಿಯೋಜಕರಾದ ಸುನೀಲ್ ಹಾಗೂ ಶಿವಮ್ಮ, ವಕೀಲರಾದ ಯು. ಆರ್. ಸತೀಶ್, ಆರ್.ಡಿ. ರವೀಶ್, ಕೆ.ವಿ.ನಟರಾಜ್, ಎ.ಶ್ರೀಧರ್, ಪುರುಷೋತ್ತಮ್, ಎಚ್.ಎಸ್. ಅರುಣ್ ಕುಮಾರ್, ಶಿವಕುಮಾರ್, ಜಯ ಪ್ರಕಾಶ್, ಶ್ರೀನಿವಾಸ್, ಗುಂಡೇಗೌಡ, ಬಿ.ಎನ್. ಕೃಷ್ಣಮೂರ್ತಿ, ಶೇಖರಪ್ಪ, ಶಿವಕುಮಾರ್, ಕೆ.ಆರ್. ಸುನೀಲ್, ಅಶೋಕ್, ಆನಂದೇಶ್ವರ, ಚೇತನ್, ಶಶಿಕುಮಾರ್, ವೈ.ಡಿ. ಪ್ರಶಾಂತ್, ಹರಿಣಿ ರವೀಶ್, ಶ್ವೇತಾ, ಮೈತ್ರಿ, ಆಶಾ ಕುಮಾರಿ, ಸಂಗೀತ, ರಾಣಿ, ಜ್ಯೋತಿ, ಅನುಷಾ, ಇತರರು ಇದ್ದರು.