ಸಾರಾಂಶ
ಮತದಾನ ನಮ್ಮ ಪ್ರಮುಖ ಹಕ್ಕು. ಅದನ್ನು ಕಡ್ಡಾಯವಾಗಿ ಚಲಾವಣೆ ಮಾಡಬೇಕು. ಯುವಕರೇ ದೇಶದ ಶಕ್ತಿ. ಪ್ರತಿಯೊಬ್ಬರು ಮತದಾನ ಮಾಡುವುದರ ಜತೆಗೆ ಮತ್ತೊಬ್ಬರನ್ನು ಕರೆತಂದು ಮತದಾನದ ಅರಿವು ಮೂಡಿಸಿ ಇದು ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವ ಹಕ್ಕು ಇದಾಗಿದೆ.
ಕನ್ನಡಪ್ರಭ ವಾರ್ತೆ ಯಾದಗಿರಿ
ಮೇ 7ರಂದು ನಡೆಯುವ ಲೋಕಸಭೆ ಚುನಾವಣೆಯಲ್ಲಿ ಪ್ರತಿಯೊಬ್ಬರೂ ತಪ್ಪದೇ ಮತದಾನ ಮಾಡಬೇಕೆಂದು ವಡಗೇರಾ ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಸ್ವೀಪ್ ಸಮಿತಿಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಸಂಗ್ವಾರ ಹೇಳಿದರು.ಜಿಲ್ಲೆಯ ವಡಗೇರಾ ತಾಲೂಕಿನ ಹಯ್ಯಾಳ (ಬಿ) ಗ್ರಾಮದಲ್ಲಿ ನಡೆದ ಹೋಬಳಿ ಮಟ್ಟದ ಮತದಾನ ಜಾಗೃತಿ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತ, ಮತದಾನ ಅತ್ಯಂತ ಪವಿತ್ರವಾದದ್ದು, ಸಂವಿಧಾನವು ನಮಗೆ ಮತದಾನದ ಹಕ್ಕನ್ನು ನೀಡಿದೆ. ಯಾರೂ ಕೂಡ ಮತದಾನದಿಂದ ದೂರ ಉಳಿಯದೆ ಕಡ್ಡಾಯವಾಗಿ ಮತದಾನ ಮಾಡುವಂತೆ ಹೇಳಿದರು.
ಪ್ರಖ್ಯಾತ ಹಾಸ್ಯ ಕಲಾವಿದ ಬಸವರಾಜ ಮಹಾಮನಿ ಮಾತನಾಡಿ, ಸರ್ಕಾರವು ಮತದಾನದ ಜಾಗೃತಿ ಕುರಿತು ಹಲವು ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಪ್ರತಿ ಗ್ರಾಮ ಮಟ್ಟದಲ್ಲಿ ಕೂಡ ಜಾಗೃತಿ ಮೂಡಿಸುತ್ತಿರುವ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.ಮತದಾನ ನಮ್ಮ ಪ್ರಮುಖ ಹಕ್ಕು. ಅದನ್ನು ಕಡ್ಡಾಯವಾಗಿ ಚಲಾವಣೆ ಮಾಡಬೇಕು. ಯುವಕರೇ ದೇಶದ ಶಕ್ತಿ. ಪ್ರತಿಯೊಬ್ಬರು ಮತದಾನ ಮಾಡುವುದರ ಜತೆಗೆ ಮತ್ತೊಬ್ಬರನ್ನು ಕರೆತಂದು ಮತದಾನದ ಅರಿವು ಮೂಡಿಸಿ ಇದು ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವ ಹಕ್ಕು ಇದಾಗಿದೆ. ಯಾರು ಕೂಡ ನಿರ್ಲಕ್ಷ್ಯ ಮಾಡಬಾರದು ಎಂದು ತಮ್ಮ ಹಾಸ್ಯ ಚಟಾಕಿಯ ಮೂಲಕ ಮತದಾನ ಕುರಿತು ಜಾಗೃತಿ ಮೂಡಿಸಿದರು.
ಇದಕ್ಕೂ ಮುನ್ನ ಗ್ರಾಮದ ಹಯ್ಯಾಳಲಿಂಗೇಶ್ವರ ದೇವಸ್ಥಾನದಿಂದ ಬೈಕ್ ರ್ಯಾಲಿ ನಡೆಯಿತು. ಮತದಾನ ಜಾಗೃತಿ ಪೋಸ್ಟರ್ ಹಿಡಿದು ಜಾಗೃತಿ ಘೋಷಣೆಗಳನ್ನು ಹಾಕುವ ಮೂಲಕ ಗ್ರಾಮಸ್ಥರಲ್ಲಿ ಮತದಾನದ ಅರಿವು ಮೂಡಿಸಲು ವಿಶೇಷವಾಗಿ ಗ್ರಂಥಾಲಯದ ಸಿಬ್ಬಂದಿಗಳಾದ ಮರೆಪ್ಪ ಕ್ಯಾತ್ನಳ ಹಾಗೂ ಬಸರೆಡ್ಡಿ ಅವರು ಬಯಲಾಟದ ಮೂಲಕ ಮತದಾನ ಜಾಗೃತಿ ಮೂಡಿಸಿ ಎಲ್ಲರ ಗಮನ ಸೆಳೆದರು.ಮಹಿಳೆಯರಿಂದ ರಂಗೋಲಿ ಸ್ಪರ್ಧೆ ನಿಂಬೆಹಣ್ಣಿನ ಓಟ, ಗೋಣಿಚೀಲದ ಓಟ ಹಾಗೂ ಚುನಾವಣೆ ರಾಯಭಾರಿಗಳಿಂದ ಹಾಡು ಇನ್ನಿತರ ಕಾರ್ಯಕ್ರಮಗಳ ಮೂಲಕ ಅರಿವು ಮೂಡಿಸಲಾಯಿತು. ಕ್ರೀಡೆಯಲ್ಲಿ ಗೆದ್ದವರಿಗೆ ಸೂಕ್ತ ಬಹುಮಾನ ವಿತರಿಸಿದರು.
ತಹಸೀಲ್ದಾರ್, ಆರೋಗ್ಯ ಇಲಾಖೆ ಅಧಿಕಾರಿಗಳು, ಜಿಲ್ಲಾ ವಿಕಲಚೇತನ ಅಧಿಕಾರಿಗಳು, ಸಿಡಿಪಿಒ, ತಾಲೂಕು ಪಂಚಾಯ್ತಿ ಸಹಾಯಕ ನಿರ್ದೇಶಕರು, ಕ್ರೀಡಾ ಇಲಾಖೆ ಅಧಿಕಾರಿಗಳು ಇತರರಿದ್ದರು.