ತೆಂಗಿನ ನೀರಾ ಮಾರಾಟ ಮಾಡುತ್ತಿದ್ದ ರೈತನ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸುವ ಬೆದರಿಕೆಯೊಡ್ಡಿರುವ ಕ್ರಮವನ್ನು ಖಂಡಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ಮೊಳಕಾಲ್ಮೂರು: ತೆಂಗಿನ ನೀರಾ ಮಾರಾಟ ಮಾಡುತ್ತಿದ್ದ ರೈತನ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸುವ ಬೆದರಿಕೆಯೊಡ್ಡಿರುವ ಕ್ರಮವನ್ನು ಖಂಡಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.ಪಟ್ಟಣದ ಅಬಕಾರಿ ಇಲಾಖೆ ಕಚೇರಿ ಆವರಣದಲ್ಲಿ ಮಂಗಳವಾರ ಮನವಿ ಸಲ್ಲಿಸಿ ಮಾತನಾಡಿದ ಸಂಘದ ಕಾರ್ಯಕರ್ತರು, ತಾಲೂಕಿನ ಬಿಜಿಕೆರೆ ಗ್ರಾಮದ ವಸುಂಧರಾ ಕೃಷಿ ಕ್ಷೇತ್ರದಲ್ಲಿ ತೆಂಗಿನ ನೀರಾ ಇಳಿಸಿ ಮಾರಾಟ ಮಾಡುತ್ತಿದ್ದ ರೈತ ಎಸ್.ಸಿ.ವೀರಭದ್ರಪ್ಪನವರ ಮೇಲೆ ಅಬಕಾರಿ ಇಲಾಖೆ ಅಧಿಕಾರಿಗಳು ಏಕಾಏಕಿ ದಾಳಿ ಮಾಡಿ ಅಲ್ಲಿನ ನಾಮಫಲಕ ಕಿತ್ತು ಹಾಕಿದ್ದಲ್ಲದೆ, ನೀರಾ ಇಳಿಸಿದಂತೆ ಖಡಕ್ ಎಚ್ಚರಿಕೆ ನೀಡಿ ಅವರನ್ನು ಅವಮಾನ ಮಾಡಿರುವ ಕ್ರಮ ಖಂಡನೀಯ ಕೂಡಲೇ ಅಬಕಾರಿ ಅಧಿಕಾರಿಗಳು ಬೆಷರತ್ ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿದರು.ಎಸ್.ಸಿ.ವೀರಭದ್ರಪ್ಪ ರಾಜ್ಯದಲ್ಲಿ ಪ್ರಗತಿ ಪರ ರೈತರಾಗಿದ್ದು, ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಸಮಗ್ರ ಕೃಷಿಯನ್ನು ಅಳವಡಿಸಿಕೊಂಡಿರುವ ಅವರು ಇತರರಿಗೆ ಮಾದರಿಯಾಗಿದ್ದಾರೆ. ದೊಡ್ಡ ದೊಡ್ಡ ರಾಜಕಾರಣಿಗಳು ಇವರ ಸಾಧನೆಯನ್ನು ಪ್ರಶಂಸಿದ್ದಾರೆ. ಈಗಿದ್ದರೂ ಇಲ್ಲಿನ ಅಧಿಕಾರಿಗಳು ತೋಟಕ್ಕೆ ಹೋಗಿದ್ದಲ್ಲದೆ ಅವರನ್ನು ಅವಮಾನಿಸುವುದು ಇಡೀ ರೈತ ಸಮುದಾಯಕ್ಕೆ ಮಾಡಿದ ಅವಮಾನವಾಗಿದೆ. ಕೂಡಲೇ ಇವರನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು.
ತೆಂಗಿನ ಮರದಿಂದ ಇಳಿಸುವ ಪಾನೀಯ ಕಲ್ಪ ವೃಕ್ಷವಾಗಿದೆ. ಆರೋಗ್ಯಕ್ಕೆ ಉತ್ತಮ ಪಾನೀಯಾವೂ ಇದಾಗಿದೆ. ಔಷಧ ಹಾಗೂ ಯಾವುದೇ ಕೆಮಿಕಲ್ ಮಿಶ್ರಣವಿಲ್ಲದೆ ತೆಂಗಿನ ಮರದಿಂದ ನೇರವಾಗಿ ಇಳಿಯುವ ನೀರಾ ಆರೋಗ್ಯಕ್ಕೆ ಉತ್ತಮ ಎನ್ನುವುದು ಸಾಬೀತಾಗಿದೆ. ಹಳ್ಳಿಗಳಲ್ಲಿ ಮದ್ಯ ಮಾರಾಟ ದಿನಸಿ ವಸ್ತುಗಳಂತೆ ಮಾರಾಟವಾಗುತ್ತಿದೆ. ಇದರಿಂದ ಯುವ ಪೀಳಿಗೆ ಮದ್ಯವ್ಯಸನಿಗಳಾಗುತ್ತಿದ್ದಾರೆ. ಅಕ್ರಮ ಮಾದ್ಯಮರಾಟ ತಡೆಯದ ಅಧಿಕಾರಿಗಳು ತೆಂಗಿನ ನೀರಾ ಮಾರಾಟಕ್ಕೆ ನಿರ್ಬಂಧ ಹೇರುವುದು ಸಲ್ಲದು. ಇಂತಹ ಅಧಿಕಾರಿಗಳ ವಿರುದ್ಧ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು. ಇಂತಹ ಘಟನೆಗಳು ಮರುಕಳಿಸಿದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಪ್ರಗತಿಪರ ರೈತ ಎಸ್.ಸಿ.ವೀರಭದ್ರಪ್ಪ, ರೈತ ಸಂಘದ ಕಾರ್ಯಾಧ್ಯಕ್ಷ ಬೇಡ ರೆಡ್ಡಿ ಹಳ್ಳಿ ಬಸವರೆಡ್ಡಿ. ಜಿಲ್ಲಾಧ್ಯಕ್ಷ ರವಿಕುಮಾರ್, ತಾಲೂಕ ಅಧ್ಯಕ್ಷ ಸೂರಮ್ಮನಹಳ್ಳಿ ರಾಜಣ್ಣ, ಬೊಮ್ಮದೇವರ ಹಳ್ಳಿ ವೆಂಕಟೇಶ ನಾಯಕ, ಹಿರೇಹಳ್ಳಿ ಗ್ರಾಮದ ನಾಗೇಂದ್ರಪ್ಪ, ತಿಪ್ಪೇಸ್ವಾಮಿ, ರುದ್ರಮನಹಳ್ಳಿ ತಿಪ್ಪೇಸ್ವಾಮಿ, ರಾಯಪುರ ಬಸವರಾಜ, ಮಹಾಲಿಂಗಪ್ಪ ಶ್ರೀನಿವಾಸ ನಾಯಕ, ವೆಂಕಟೇಶ ನಾಯಕ, ಮಹೇಶ್, ಮೇಸ್ತ್ರಿ ಪಾಪಯ್ಯ, ನಿಂಗಣ್ಣ, ಮುಕ್ಕಣ್ಣ, ಮಲ್ಲಿಕಾರ್ಜುನ, ದಾಸಪ್ಪ ಇದ್ದರು.