ಭೇರ್ಯ: ಕಾವೇರಿ ಕಣಿವೆಯ ನದಿಗಳ ಮೈದುಂಬಿ ಹರಿಯುತ್ತಿದ್ದು, ಅತೀ ಶೀಘ್ರದಲ್ಲಿ ರೈತ ಮುಖಂಡರ ಸಭೆ ಕರೆದು, ಬಿತ್ತನೆ ಬೀಜ, ರಸಗೊಬ್ಬರ, ನಾಲೆಗಳಿಗೆ ನೀರು ಹರಿಸಲು ಚರ್ಚಿಸಲಾಗುವುದು ಎಂದು ಶಾಸಕ ಡಿ. ರವಿಶಂಕರ್ ಹೇಳಿದರು.
ಸಾಲಿಗ್ರಾಮ ತಾಲೂಕಿನ ಭೇರ್ಯ ಸಮೀಪದ ಕೆಂಚನಹಳ್ಳಿ ಗ್ರಾಮದಲ್ಲಿ ಬಾಚಹಳ್ಳಿ -ಕೆಂಚನಹಳ್ಳಿ ಸಂಪರ್ಕ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರ ರೈತರಿಗೆ ಸಕಾಲದಲ್ಲಿ ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ ವನ್ನು ಸರಿಯಾದ ನಿಗದಿತ ಸಮಯಕ್ಕೆ ಒದಗಿಸುತ್ತಿದ್ದು, ಈ ಬಾರಿ ಕೂಡ ಮುಂಗಾರು ಮಳೆ ಮೇ ತಿಂಗಳಲ್ಲಿ ಪ್ರಾರಂಭವಾಗಿದ್ದು, ರೈತರಿಗೆ ಹರ್ಷ ತಂದಿದೆ ಎಂದರು.
ಈಗಾಗಲೇ ನಾಲೆಗಳಿಗೆ ನೀರು ಹರಿಸಲು ಕೆ.ಆರ್. ನಗರ ಮತ್ತು ಸಾಲಿಗ್ರಾಮ ಅವಳಿ ತಾಲೂಕಿನ ಎಲ್ಲ ನಾಲೆಗಳ ಹೂಳು ತೆಗೆಯಲು ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಹೂಳು ತೆಗೆಯುವ ಕೆಲಸವಾಗುತ್ತಿದೆ, ನಿಗದಿತ ಅವದಿಯಲ್ಲಿ ಎಲ್ಲ ನಾಲೆಗಳಿಗೂ ನೀರು ಹರಿಸಲಾಗುವುದು ಎಂದು ಮಾಹಿತಿ ನೀಡಿದರು.ಸಾಲಿಗ್ರಾಮ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯಶಂಕರ್, ಗ್ರಾಪಂ ಸದಸ್ಯರಾದ ಸಣ್ಣಲಿಂಗೇಗೌಡ, ಯತಿರಾಜ್, ಮಾಜಿ ಸದಸ್ಯ ಸುಮಿತ್ರ ಕೃಷ್ಣೇಗೌಡ, ಮಾಜಿ ಅಧ್ಯಕ್ಷ ಚಂದ್ರೇಗೌಡ, ಕಾಂಗ್ರೆಸ್ ಘಟಕದ ಅಧ್ಯಕ್ಷ ನರಸಿಂಹನಾಯಕ ಇದ್ದರು.