ಸಾರಾಂಶ
ಉಡುಪಿ ಜಿಲ್ಲಾ ಪಂಚಾಯಿತಿಯಲ್ಲಿ ವಿವಿಧ ಉನ್ನತ ಹುದ್ದೆಗಳಲ್ಲಿ ಕರ್ತವ್ಯ ಸಲ್ಲಿಸಿ ವಯೋನಿವೃತ್ತಿ ಹೊಂದಿದ ಶ್ರೀನಿವಾಸ ರಾವ್ ಅವರನ್ನು ರಜತಾದ್ರಿಯ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸನ್ಮಾನಿಸಲಾಯಿತು.
ಕನ್ನಡಪ್ರಭ ವಾರ್ತೆ ಉಡುಪಿ
ಸರ್ಕಾರಿ ಸೇವೆಯಲ್ಲಿ ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಸೇವೆ ನೀಡುವ ಗರಿಷ್ಠ ಅವಕಾಶವಿದ್ದು, ಲಭಿಸಿದ ಅವಕಾಶಗಳಲ್ಲಿ ಯಶಸ್ವಿಯಾಗಿ ಸೇವೆ ನೀಡಲು ಸಹಕರಿಸಿದ ಹಿರಿಯ ಅಧಿಕಾರಿಗಳು, ಕ್ಷೇತ್ರ ಮಟ್ಟದ ಅಧಿಕಾರಿಗಳು ಹಾಗೂ ವಿಶೇಷವಾಗಿ ಜನಪ್ರತಿನಿಧಿಗಳ ಸಹಕಾರ ನಿರಂತರ ಸ್ಮರಣೀಯವಾಗಿದೆ ಎಂದು ಶ್ರೀನಿವಾಸ ರಾವ್ ಹೇಳಿದರು.ಉಡುಪಿ ಜಿಲ್ಲಾ ಪಂಚಾಯಿತಿಯಲ್ಲಿ ವಿವಿಧ ಉನ್ನತ ಹುದ್ದೆಗಳಲ್ಲಿ ಕರ್ತವ್ಯ ಸಲ್ಲಿಸಿ ವಯೋನಿವೃತ್ತಿ ಹೊಂದಿದ ಅವರಿಗೆ ರಜತಾದ್ರಿಯ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ಸರ್ಕಾರಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಹಾಗೂ ಹೊಸತನದ ಕಾರ್ಯ ನಿರ್ವಹಣೆಯಿಂದಾಗಿ ಉಡುಪಿ ಜಿಲ್ಲೆ ರಾಷ್ಟ್ರ ಹಾಗೂ ರಾಜ್ಯ ಹಂತದಲ್ಲಿ ಮುಂಚೂಣಿಯಲ್ಲಿದೆ. ಘನತಾಜ್ಯ ನಿರ್ವಹಣೆ, ಸಂಜೀವಿನಿ, ಮಾನವ ಅಭಿವೃದ್ಧಿ ಸೂಚ್ಯಂಕ ಸೇರಿದಂತೆ ಮಾದರಿ ಕೆಲಸ ಕಾರ್ಯಗಳನ್ನು ಮಾಡಲು ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಣೆಗೆ ಅವಕಾಶ ಲಭಿಸಿರುವುದು ಸ್ಮರಣೀಯವಾಗಿದೆ. ಇಲ್ಲಿನ ಜನಪ್ರತಿನಿಧಿಗಳು ಹಾಗೂ ಅಧಿಕಾರಿ, ಸಿಬ್ಬಂದಿ ವರ್ಗದವರ ಸಹಕಾರ ಅಭಿನಂದನೀಯ ಎಂದರು.ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಮಾತನಾಡಿ, ನಾವೀನ್ಯತೆಯ ಕಾರ್ಯಚಟುವಟಿಕೆ ಹಾಗೂ ದಕ್ಷತೆಯ ಕಾರ್ಯಶೈಲಿಯಿಂದಾಗಿ ಶ್ರೀನಿವಾಸ ರಾವ್ ಅವರು ವಿಶಿಷ್ಟ ಅಧಿಕಾರಿಯಾಗಿದ್ದಾರೆ ಎಂದರು.
ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಮಾತನಾಡಿ, ಉಡುಪಿ ಜಿ.ಪಂ. ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುವುದರೊಂದಿಗೆ ವಿಶೇಷ ಪ್ರಶಸ್ತಿ- ಪುರಸ್ಕಾರಗಳನ್ನು ಪಡೆದಿದ್ದು, ಶ್ರೀನಿವಾಸ ರಾವ್ ಅವರ ಶ್ರಮ ಇದರಲ್ಲಿ ಬಹುಮುಖ್ಯವಾಗಿದೆ. ಜಿ.ಪಂ. ಉಪ ಕಾರ್ಯದರ್ಶಿ, ಮುಖ್ಯ ಲೆಕ್ಕಾಧಿಕಾರಿ, ಯೋಜನಾಧಿಕಾರಿ, ಯೋಜನಾ ನಿರ್ದೇಶಕ ಸೇರಿದಂತೆ ಹಲವು ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ಅಪಾರ ಅನುಭವವನ್ನು ಹೊಂದಿದ್ದು, ಅವರ ಕರ್ತವ್ಯ ನಿರ್ವಹಣೆ ಮತ್ತು ಕ್ರಿಯಾಶೀಲತೆ ಯುವ ಅಧಿಕಾರಿಗಳಿಗೆ ಮಾದರಿಯಾಗಿದೆ ಎಂದು ಹೇಳಿದರು.ಈ ಸಂದರ್ಭ ಕುಂದಾಪುರ ಉಪ ವಿಭಾಗದ ಸಹಾಯಕ ಆಯುಕ್ತೆ ರಶ್ಮಿ, ಜಿಪಂ ಮುಖ್ಯ ಯೋಜನಾಧಿಕಾರಿ ಡಾ. ಉದಯಕುಮಾರ್ ಶೆಟ್ಟಿ, ಜಿ.ಪಂ., ತಾ.ಪಂ. ಹಾಗೂ ವಿವಿಧ ಪಂಚಾಯಿತಿಗಳ ಅಧಿಕಾರಿಗಳು, ಜೆ.ಜೆ.ಎಂ. ಹಾಗೂ ಎಸ್.ಬಿ.ಎಂ. ಯೋಜನಾ ಸಂಯೋಜಕರು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ, ಶ್ರೀನಿವಾಸ್ ರಾವ್ ಪತ್ನಿ ಪೂರ್ಣಿಮಾ ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಪಿಡಿಒ ನಾಗೇಂದ್ರ ಪ್ರಾರ್ಥಿಸಿದರು. ಬ್ರಹ್ಮಾವರ ತಾ.ಪಂ ಸಹಾಯಕ ನಿರ್ದೇಶಕ ಮಹೇಶ್ ಕೆ. ನಿರೂಪಿಸಿ, ವಂದಿಸಿದರು.