ಸಾಗರ: ರಸಗೊಬ್ಬರ, ಡೀಸೆಲ್, ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ರಾಜ್ಯ ರೈತ ಸಂಘ ಜಿಲ್ಲಾ ಘಟಕ ಮತ್ತು ಸಂಯುಕ್ತ ರೈತ ಸಂಘದ ವತಿಯಿಂದ ಉಪವಿಭಾಗಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ರೈತ ಸಂಘದ ರಾಜ್ಯ ಉಪಾಧ್ಯಕ್ಷ ಶಿವಾನಂದ ಕುಗ್ವೆ ಮಾತನಾಡಿ, ಕೇಂದ್ರ ಸರ್ಕಾರದ ರೈತವಿರೋಧಿ ಧೋರಣೆ ಹಂತಹಂತವಾಗಿ ಬಯಲಿಗೆ ಬರುತ್ತಿದೆ. ಚುನಾವಣೆ ಪೂರ್ವದಲ್ಲಿ ಬಿಜೆಪಿ ನೀಡಿದ ಭರವಸೆಗಳೆಲ್ಲಾ ಪೊಳ್ಳು ಎನ್ನುವುದು ಸಾಬೀತಾಗಿದೆ. ಸ್ವಾಮಿನಾಥನ್ ವರದಿ, ಬೆಂಬಲಬೆಲೆ, ಬೆಳೆಗೆ ವೈಜ್ಞಾನಿಕ ಬೆಲೆ ಸೇರಿ ಯಾವುದೂ ಅನುಷ್ಠಾನಕ್ಕೆ ಬಂದಿಲ್ಲ. ರಾಜ್ಯ ಸರ್ಕಾರ ಸಹ ಎಪಿಎಂಸಿ ಕಾಯ್ದೆ ಹಿಂದಕ್ಕೆ ಪಡೆಯುವುದು ಸೇರಿದಂತೆ ನೀಡಿದ ಭರವಸೆ ಈಡೇರಿಸಿಲ್ಲ. ಸರ್ಕಾರಗಳ ರೈತ ವಿರೋಧಿ ನೀತಿಯಿಂದಾಗಿ ಕೃಷಿಯಿಂದ ವಿಮುಖರಾಗುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿಯವರ ಕೃಷಿ ನೀತಿ ರೈತರಿಗೆ ಮಾರಕವಾಗಿದೆ. ರಸಗೊಬ್ಬರ ಕಾಳಸಂತೆಯಲ್ಲಿ ಮಾರಾಟವಾಗುತ್ತಿದ್ದು, ರೈತರು ಹಿಂದೆಂದಿಗಿಂತ ದುಬಾರಿ ಬೆಲೆಯಲ್ಲಿ ಗೊಬ್ಬರ ಖರೀದಿಸುವ ಸ್ಥಿತಿ ನಿರ್ಮಾಣವಾಗಿದೆ. ಸಬ್ಸಿಡಿ ಹೆಚ್ಚಿಸಿ ರೈತರಿಗೆ ಅನುಕೂಲ ಕಲ್ಪಿಸಬೇಕು ಎಂದರು.

ಸಂಯುಕ್ತ ರೈತ ಸಂಘದ ಗೌರವಾಧ್ಯಕ್ಷ ಜಿನೇಶ್ ಕುಮಾರ್ ಮಾತನಾಡಿ, ಕೇಂದ್ರ ಸರ್ಕಾರದ ರಸಗೊಬ್ಬರ ನೀತಿ ಅವೈಜ್ಞಾನಿಕವಾಗಿದೆ. ಎಫ್.ಐ.ಡಿ. ಪದ್ದತಿಯಂತೆ ರಸಗೊಬ್ಬರ ನೀಡಿದರೆ ಬಹುತೇಕ ರೈತರಿಗೆ ಗೊಬ್ಬರ ಸಿಗುವುದಿಲ್ಲ. ಎಕರೆಗೆ ಒಂದು ಚೀಲ ಗೊಬ್ಬರ ಕೊಟ್ಟರೆ ಫಸಲಿನ ಇಳುವರಿ ಹೆಚ್ಚಿಸಿಕೊಳ್ಳಲು ಸಾಧ್ಯವಿಲ್ಲ. ತಾಲೂಕಿನಲ್ಲಿ ೭೦ಸಾವಿರ ರೈತರಿದ್ದು, ಈ ಪೈಕಿ ೬೨ ಸಾವಿರ ರೈತರು ಮಾತ್ರ ಎಫ್ಐಡಿ ಅಡಿ ಬರುತ್ತಾರೆ. ಉಳಿದ ೮ಸಾವಿರ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು.

ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಡಿ.ವಸಂತ ಕುಮಾರ್, ರೈತ ಸಂಘದ ಅಧ್ಯಕ್ಷ ಸುಂದರ ಸಿಂಗ್, ಪ್ರಮುಖರಾದ ಎಂ.ಬಿ.ಮಂಜಪ್ಪ, ಹೊಯ್ಸಳ ಗಣಪತಿಯಪ್ಪ, ಜಯಲಕ್ಷ್ಮೀ, ಭದ್ರೇಶ್ ಬಾಳಗೋಡು, ಯು.ಪಿ.ಜೋಸೆಫ್, ರೇವಪ್ಪ ಹೊಸಕೊಪ್ಪ, ರಾಮಣ್ಣ ಹಸಲರು, ಸತೀಶ್ ಅಂಗಡಿ, ವೇದಮೂರ್ತಿ, ದೇವು ಆಲಳ್ಳಿ, ರಾಮಪ್ಪ ಶಿರವಾಳ ಇನ್ನಿತರರು ಹಾಜರಿದ್ದರು.