ಕನ್ನಡಪ್ರಭ ವಾರ್ತೆ ಜಮಖಂಡಿ
ರಾಜ್ಯದಲ್ಲಿ ನಿಗದಿತ ಪ್ರಮಾಣದ ಮಳೆಯಾಗದೇ ಬರಗಾಲ ಎದುರಾಗಿದೆ. ಮುಂಗಾರು ಬೆಳೆಗಳು ಒಣಗಿ ಹೋಗಿವೆ. ಇದರಿಂದ ರೈತಾಪಿ ವರ್ಗ ಕಂಗಾಲಾಗಿದ್ದು ರೈತರ ಬೆಳೆ ಸಾಲ ಮನ್ನಾ ಮಾಡಬೇಕು. ಅಲ್ಲದೇ ಮುಂಗಾರು ಬೆಳೆಗಳ ಪರಿಹಾರ ಘೋಷಿಸಬೇಕು ಎಂದು ಆಗ್ರಹಿಸಿ ರೈತ ಸಂಘದ ಪದಾಧಿಕಾರಿಗಳು ಗುರುವಾರ ನಗರದ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.ಮುಂಗಾರು ಮಳೆ ಬರದ ಕಾರಣ ಬರಗಾಲದ ಛಾಯೆ ಆವರಿಸಿದೆ. ಅಂತರ್ಜಲ ಮಟ್ಟ ಕುಸಿದಿದ್ದು ಬೋರ್ವೆಲ್ಗಳಿಂದ ನೀರಾವರಿ ಮಾಡಲು ಸಾಧ್ಯವಾಗುತ್ತಿಲ್ಲ. ಪ್ರಕೃತಿ ವಿಕೋಪದಿಂದ ರೈತರು ಕಂಗಾಲಾಗಿದ್ದು, ಸರ್ಕಾರ ರೈತರ ಸಹಾಯಕ್ಕೆ ಮುಂದಾಗಬೇಕು. ಮಳೆಗಾಲ ಪ್ರಾರಂಭವಾಗುತ್ತದೆ ಎಂಬ ನಂಬಿಕೆಯಿಂದ ರೈತರು ಮುಂಗಾರು ಬೆಳೆಗಳ ಬಿತ್ತನೆ ಮಾಡಿದ್ದರು. ಸದ್ಯ ಮಳೆ ಇಲ್ಲದ ಕಾರಣ ಬೆಳೆಗಳೆಲ್ಲ ಒಣಗಿ ಹೋಗಿದೆ. ರೈತರ ಬೆಳೆಸಾಲ ಮನ್ನಾ ಮಾಡುವ ಮೂಲಕ ಸಂಕಷ್ಟಕ್ಕೆ ಒಳಗಾಗಿರುವ ರೈತರಿಗೆ ಸರ್ಕಾರ ಸ್ಪಂದಿಸಬೇಕು.
ಮುಂಗಾರು ಬೆಳೆಗಳ ಬಿತ್ತನೆಗೆ ರೈತರು ಸಾಕಷ್ಟು ಕರ್ಚು ಮಾಡಿಕೊಂಡಿದ್ದು, ಬೆಳೆ ಪರಿಹಾರ ವದಗಿಸಿಕೊಡಬೇಕು. ಸಂಕಷ್ಟದಲ್ಲಿರುವ ರೈತಾಪಿ ವರ್ಗಕ್ಕೆ ಸರ್ಕಾರ ಸೂಕ್ತ ರೀತಿಯಲ್ಲಿ ಬೆಂಬಲವಾಗಿ ನಿಲ್ಲಬೇಕು ಎಂದು ರೈತರು ಸರ್ಕಾರವನ್ನು ಆಗ್ರಹಿಸಿದರು.ವಿದ್ಯುತ್ ಖಾಸಗೀಕರಣಕ್ಕೆ ಸರ್ಕಾರ ಸಮ್ಮತಿ ಸೂಚಿಸಬಾರದು. ಸರ್ಕಾರಿ ಸಂಸ್ಥೆ ಆಗಿಯೇ ಅದನ್ನು ಮುಂದುವರಿಯಿಸಿಕೊಂಡು ಹೋಗಬೇಕು. ವಿದ್ಯುತ್ ಖಾಸಗೀಕರಣದಿಂದ ರೈತಾಪಿ ವರ್ಗಕ್ಕೆ ಸಾಕಷ್ಟು ಹಾನಿಯಾಗಿದೆ. ಅಲ್ಲದೇ ವಿನಾಕಾರಣ ಖಾಸಗಿ ಕಂಪನಿಗಳ ಹಿಂಸೆಗೆ ರೈತನ್ನು ನೂಕಿದಂತಾಗುತ್ತದೆ. ಆದ್ದರಿಂದ ಸರ್ಕಾರ ಕೆಇಬಿ ಖಾಸಗೀಕರಣದ ವಿಚಾರ ಕೈಬಿಡಬೇಕು ಎಂದು ಮನವಿ ಮಾಡಿದರು. ರೈತರ ಕೆಲಸಗಳಿಗೆ ಸರ್ಕಾರ ನಿಗದಿಪಡಿಸಿರುವ ಶುಲ್ಕದ ನಾಮಫಲಕವನ್ನು ಅಳವಡಿಸಿ ರೈತರಿಗೆ ಮಾಹಿತಿ ನೀಡುವ ಕೆಲಸವಾಗಬೇಕು. ವಿವಿಧ ಕೆಲಸ ಕಾರ್ಯಗಳಿಗೆ ಮನ ಬಂದಂತೆ ಹಣ ವಸೂಲಿ ಮಾಡುವುದಕ್ಕೆ ಕಡಿವಾಣ ಹಾಕಬೇಕು ಎಂದು ರೈತ ಸಂಘ ಆಗ್ರಹಿಸಿದೆ.
ರೈತ ಮುಖಂಡರಾದ ಶ್ರೀಶೈಲ ಭೂಮಾರ, ರಾಜು ನದಾಫ್, ಹಣಮಂತ ಮಗದುಮ, ಬಾಹುಬಲಿ ನ್ಯಾಮಗೌಡ, ಕಲ್ಲಪ್ಪ ಬಿರಾದಾ, ಕಲೂತಿ, ಸಿದ್ದುಗೌಡ ಪಾಟೀಲ, ಡಾ.ಅಜಯ ಕುಲಕರ್ಣಿ, ಶ್ರೀಶೈಲ ಮೈಗೂರ, ಪ್ರಸನ್ನ ಜಮಖಂಡಿ, ಧರೆಪ್ಪ ದಾನಗೌಡ, ಸುರೇಶ ಹಂಚಿನಾಳ ಸೇರಿ ಅಥಣಿ, ಬಬಲೇಶ್ವರ ತಾಲುಕಿನ ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.