ಕನ್ನಡಪ್ರಭ ವಾರ್ತೆ ವಿಜಯಪುರ

ಯಾರಾದರೂ ಬಿಜೆಪಿ, ಆರ್‌ಎಸ್‌ಎಸ್‌ ವಿರುದ್ಧವಾಗಿ ಮಾತನಾಡಿದರೆ ಅವರೆಲ್ಲರೂ ದೇಶದ್ರೋಹಿಗಳಾಗುತ್ತಾರೆ. ಅಂತಹವರನ್ನು ಆದಾಯ ತೆರಿಗೆಗೆ ಒಳಪಡಿಸುತ್ತಾರೆ. ಆರ್‌ಎಸ್‌ಎಸ್‌ ಬಗ್ಗೆ ಮಾತನಾಡಿದವರ ಮೇಲೆ ಇಡಿ, ಐಟಿ, ಸಿಬಿಐ ಸೇರಿದಂತೆ ವಿವಿಧ ತನಿಖಾ ಸಂಸ್ಥೆಗಳನ್ನು ಬೆನ್ನುಹಚ್ಚುತ್ತಾರೆ. ಈ ಪರಂಪರೆ 14 ವರ್ಷಗಳಿಂದ ದೇಶದಲ್ಲಿ ನಡೆಯುತ್ತಿದೆ ಎಂದು ಪರೋಕ್ಷವಾಗಿ ಬಿಜೆಪಿ ವಿರುದ್ಧ ಮಾಜಿ ಶಾಸಕ ಪ್ರೊ.ರಾಜು ಆಲಗೂರ ಕಿಡಿಕಾರಿದರು.

ನಗರದ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೀಗ ಪ್ರಿಯಾಂಕ ಖರ್ಗೆ ಅವರನ್ನು ಟಾರ್ಗೆಟ್ ಮಾಡುವ ಸಂಭವವಿದ್ದು, ನಾವು ಅವರ ಪರವಾಗಿ ನಿಲ್ಲುತ್ತೇವೆ. ಅವರದ್ದು ಒಂದು ಕೂದಲು ಕೊಂಕಾದರೂ ನಾವು ರಾಜ್ಯಾದ್ಯಂತ ಆರ್‌ಎಸ್‌ಎಸ್‌ ಹಾಗೂ ಬಿಜೆಪಿ ವಿರುದ್ಧ ಉಗ್ರ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಸಿದರು. ಆರ್‌ಎಸ್‌ಎಸ್‌ ಸ್ಥಾಪನೆಗೊಂಡು 100 ವರ್ಷಗಳಾಗಿದೆ ಎಂದು ಹೇಳುವ ಆರ್‌ಎಸ್‌ಎಸ್‌ ಮುಖ್ಯಸ್ಥ ಮೊಹನ ಭಾಗವತ ಅವರು ಭದ್ರತೆ ನೀಡಲು ಸರ್ಕಾರಕ್ಕೆ ಭರಿಸಬೇಕಿರುವ ಹಣ ತುಂಬದೆಯೇ ಝೆಡ್ ಪ್ಲಸ್‌ ಸೆಕ್ಯೂರಿಟಿ ಪಡೆಯುತ್ತಿದ್ದಾರೆ ಎಂದು ಆರೋಪಿಸಿದರು.

ಪ್ರಿಯಾಂಕ ಖರ್ಗೆ ಅವರು ಆರ್‌ಎಸ್‌ಎಸ್‌ ನೋಂದಣಿ ಬಗ್ಗೆ ಕೇಳಿದ್ದಕ್ಕೆ ಸಂಸದ ರಮೇಶ ಜಿಗಜಿಣಗಿಯವರು ದಲಿತರಿಗೆ ಆರ್‌ಎಸ್‌ಎಸ್‌ ವಿಚಾರ ಏಕೆ ಬೇಕು ಎಂದು ಪ್ರಶ್ನಿಸಿದ್ದಾರೆ. ದಲಿತರಾದರೆ ದೇಶದಲ್ಲಿ ಎಲ್ಲರಿಗೂ ಒಂದೇ ಇರುವ ಕಾನೂನು ಪ್ರಶ್ನಿಸಬಾರದೆ?. ಕಾನೂನಿಗಿಂತ ಯಾರೂ ದೊಡ್ಡವರಲ್ಲ, ಎಲ್ಲರೂ ಕಾನೂನು ಪರಿಪಾಲನೆ ಮಾಡಬೇಕು. ನಾವು ಎಂದೂ ಆರ್‌ಎಸ್‌ಎಸ್‌ ಬಗ್ಗೆಯಾಗಲಿ ಅಥವಾ ಅದರ ಮುಖ್ಯಸ್ಥರ ಬಗ್ಗೆಯಾಗಲಿ ಅವಾಚ್ಯ ಶಬ್ಧಗಳಿಂದ ನಿಂದಿಸಿಲ್ಲ. ಆದರೆ ಸಂಸದರಾಗಿ ಜಿಗಜಿಣಗಿಯವರೇ ಆರ್‌ಎಸ್‌ಎಸ್‌ ಡೇಂಜರ್‌.... ಎಂದು ನಿಂದಿಸಿದ್ದಾರೆ. ಜಿಲ್ಲೆಯಲ್ಲಿ ಯಾವುದೇ ಸಮುದಾಯದರೂ ನಮ್ಮನ್ನು ಅಸ್ಪೃಶ್ಯರಂತೆ ಕಾಣದೆ ಸಮನಾಗಿ ಕಾಣುತ್ತಿದ್ದರೂ ಜಿಗಜಿಣಗಿಯವರು ಉದ್ದೇಶಪೂರ್ವಕವಾಗಿ ತಮ್ಮನ್ನು ತಾವೇ ಅಸ್ಪೃಶ್ಯರು ಎಂದುಕೊಳ್ಳುತ್ತಿದ್ದಾರೆ ಎಂದರು.

ಮುಖಂಡ ಚಂದ್ರಶೇಖರ ಕೊಡಬಾಗಿ ಮಾತನಾಡಿ, ಸಂಸದ ಜಿಗಜಿಣಗಿಯವರು ನೂರಾರು ವರ್ಷದಿಂದ ಅನ್ಯಾಯಕ್ಕೊಳಗಾದ ಜನರ ಪ್ರತಿನಿಧಿಯಾಗಿರುವ ಇವರು ತಮಗೆ ತಾವೇ ಅಸ್ಪೃಶ್ಯರು ಎಂದುಕೊಂಡಿದ್ದಾರೆ. ಇವರು ದಲಿತರೂ ಅಲ್ಲ, ಹಿಂದೂಗಳೂ ಅಲ್ಲ. ಜಿಗಜಿಣಗಿ ಪೂರ್ವಾಪರ ನೋಡಿದರೆ ಆತ ದಲಿತನಲ್ಲ ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಆರೋಪಿಸಿದರು.


ಸುದ್ದಿಗೋಷ್ಠಿಯಲ್ಲಿ ವಿಡಿಎ ಅಧ್ಯಕ್ಷ ಡಾ.ಗಂಗಾಧರ ಸಂಬಣ್ಣಿ, ಮಹಮ್ಮದರಫೀಕ್ ಟಪಾಲ, ವಸಂತ ಹೊನಮೊಡೆ, ಹರೀಶ ಕವಲಗಿ, ಸಂತೋಷ ಇದ್ದರು.