ಕನ್ನಡಪ್ರಭ ವಾರ್ತೆ ಸಿದ್ದಾಪುರ

ಆನಂದಪುರ ಸಮೀಪದ ಕೌರಿಕಾಡು ಎಸ್ಟೇಟ್‌ನ ಕಾಫಿ ತೋಟದಲ್ಲಿ ಹೆಣ್ಣಾನೆಯೊಂದು ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ಭಾನುವಾರ ಬೆಳಕಿಗೆ ಬಂದಿದೆ.

ಮೃತ ಹೆಣ್ಣಾನೆ ಪಕ್ಕದಲ್ಲೇ ಅದರ ಮರಿ ಆನೆ ಜಾಗ ಬಿಟ್ಟು ಕದಲದೆ ಸೊಂಡಿಲಿನಿಂದ ತಾಯಿಯ ಮೃತದೇಹವನ್ನು ಸ್ಪರ್ಶಿಸುತ್ತಾ, ಚೀರಾಡುತ್ತಾ ಮೂಕರೋಧನೆ ಅನುಭವಿಸುತ್ತಿದ್ದ ದೃಶ್ಯ ಸ್ಥಳೀಯರ ಮನಕಲಕುತಿತ್ತು.

ಆನೆ ಸಾವಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಗುಂಡೇಟಿನಿಂದ ಅಥವಾ ಅನಾರೋಗ್ಯದಿಂದ ಸತ್ತಿದೆಯೇ ಎಂಬ ಬಗ್ಗೆ ಸಾರ್ವಜನಿಕ ವಲಯದಲ್ಲಿ ಅನುಮಾನ ವ್ಯಕ್ತವಾಗಿದ್ದು, ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕವಷ್ಟೇ ಸಾವಿನ ನಿಖರ ಕಾರಣ ತಿಳಿಯಲಿದೆ.

ಮರಿ ಆನೆಯ ಚೀರಾಟ ಕೇಳಿ ಸ್ಥಳಕ್ಕೆ ತೆರಳಿದ ಸಾರ್ವಜನಿಕರಿಗೆ ಹೆಣ್ಣಾನೆ ಮೃತಪಟ್ಟಿರುವುದು ಹಾಗೂ ಅದರ ಪಕ್ಕದಲ್ಲೇ ಮರಿ ಆನೆ ಆತಂಕದಿಂದ ಚೀರಾಡುತ್ತಿರುವುದು ಕಂಡುಬಂದಿದೆ. ಕೂಡಲೇ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.


ಅರಣ್ಯ ಇಲಾಖೆ ಮರಣೋತ್ತರ ಪರೀಕ್ಷೆಗೆ ಕ್ರಮ ಕೈಗೊಂಡಿದ್ದು, ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿದುಬಂದಿದೆ.