ಸಾರಾಂಶ
ಕನ್ನಡಪ್ರಭ ವಾರ್ತೆ, ಬೀದರ್
ವ್ಯವಸ್ಥೆಯನ್ನು ಸರಿಪಡಿಸುವುದು ಪ್ರತಿಯೊಬ್ಬರ ಜವಾಬ್ದಾರಿ. ಅನ್ಯಾಯ ದೌರ್ಜನ್ಯ ಆಗಿರುವ ಸಂದರ್ಭದಲ್ಲಿ ಕಾನೂನು ಸೇವೆಗಳ ಪ್ರಾಧಿಕಾರ ಸಂಪರ್ಕಿಸಿದರೆ ಪ್ರಾಧಿಕಾರ ವಕೀಲರನ್ನು ಒದಗಿಸಿ ನ್ಯಾಯಾಂಗದ ಖರ್ಚನ್ನು ಕೂಡ ಭರಿಸುತ್ತದೆ. ಇದನ್ನು ಬಳಸಿಕೊಂಡು ಅನ್ಯಾಯ ಅತ್ಯಾಚಾರ ಆಗದಂತೆ ನಿಗಾ ವಹಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಪ್ರಕಾಶ ಬನಸೋಡೆ ನುಡಿದರು.ಅವರು ಮೊರಾರ್ಜಿ ದೇಸಾಯಿ ವಸತಿ ಶಾಲೆ ಬಗದಲ್ನಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಶಾಲಾ ಶಿಕ್ಷಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಮಕ್ಕಳ ದಿನಾಚರಣೆ ಮತ್ತು ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬಾಲ್ಯ ವಿವಾಹ ಸೇರಿದಂತೆ ಅನೇಕ ಅನಾಚಾರಗಳನ್ನು ತಡೆಗಟ್ಟಲು ನಾವೆಲ್ಲಾ ಬದ್ಧರಾಗಿರಬೇಕು. ಕಾನೂನು ಎಲ್ಲಾ ರೀತಿಯ ರಕ್ಷಣೆಯ ಅವಕಾಶಗಳನ್ನು ಪ್ರತಿಯೊಬ್ಬರಿಗೂ ಒದಗಿಸಿಕೊಟ್ಟಿದೆ. ಅಭಯ ಹಸ್ತ ನೀಡುವ ಮೂಲಕ ಅಬಲರಿಗೆ ಬಲ ನೀಡುವ ಕೆಲಸ ನ್ಯಾಯಾಲಯ ವ್ಯವಸ್ಥೆ ಮಾಡುತ್ತದೆ. ಇದರ ಸದುಪಯೋಗಪಡಿಸಿ ಕೊಂಡು ಯಾರೂ ನ್ಯಾಯ ವಂಚಿತರಾಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಟಿ.ಆರ್.ದೊಡ್ಡೆ, ವಿದ್ಯಾರ್ಥಿಗಳು ಈ ರಾಷ್ಟ್ರದ ನಿಜವಾದ ಆಸ್ತಿ. ಮಕ್ಕಳ ಸರ್ವಾಂಗೀಣ ವಿಕಾಸವಾದಾಗ ಮಾತ್ರ ರಾಷ್ಟ್ರ ಪ್ರಗತಿಯಾಗುತ್ತದೆ. ಹೀಗಾಗಿ ಮಕ್ಕಳು ತಮ್ಮ ಪ್ರತಿಭೆ ವಿಕಸಿತವಾಗಲು ಪೂರ್ಣ ಪ್ರಮಾಣದಲ್ಲಿ ಶ್ರಮಿಸಬೇಕು. ಈ ನಿಟ್ಟಿನಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಬಗದಲ್ ಮಗುವಿನ ಸರ್ವಾಂಗೀಣ ಅಭಿವೃದ್ಧಿಗೆ ಬದ್ಧವಾಗಿ ಶ್ರಮಿಸುತ್ತಿದೆ ಎಂದು ನುಡಿದರು.ಕಾರ್ಯಕ್ರಮ ಉದ್ದೇಶಿಸಿ ಹಿರಿಯ ವಕೀಲರಾದ ಬಿ.ಎಸ್. ಪಾಟೀಲ್, ಕಾನೂನು ಅಭಿಯೋಜಕರಾದ ಶಿವರಾಜ ಪಾಟೀಲ್ ಮಾತನಾಡಿದರು. ಪ್ರಾಚಾರ್ಯ ಚನ್ನಬಸವ ಹೇಡೆ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಪ್ರಕಾಶ ಬನಸೋಡೆ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಸಂಘದಿಂದ ನೀಡಲಾದ ಡಿಜಿಟಲ್ ಸ್ಮಾರ್ಟ್ಬೋರ್ಡ್ ಉದ್ಘಾಟಿಸಿದರು ಹಾಗೂ ವಿದ್ಯಾರ್ಥಿ ಸಂಸತ್ ಸದಸ್ಯರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಶಿಕ್ಷಣ ಸಂಯೋಜಕರಾದ ಸಂಜೀವ ಮಾನೂರೆ, ಮೇಟಿ, ಸುರೇಖಾ ಹಾಗೂ ಶಾಲಾ ಸಿಬ್ಬಂದಿಗಳಾದ ಮುದಾಸಿರ್ ಅಲಿ, ಸುವರ್ಣಾ ಬಸವರಾಜ , ಸವಿತಾ ಮಾಶೆಟ್ಟಿ, ವೈಭವಿ, ಶ್ರೀದೇವಿ ಸಾಲಿಮಠ, ತ್ರೀವೇಣಿ ಮಠಪತಿ, ಅಶೋಕ್ ರಾಠೋಡ, ಮಾಣಿಕಸಾಗರ, ಶ್ರಾವಂತಿ ಅಂಬೆಸಂಗೆ, ವಸಂತ ರಾಠೋಡ ಭಾಗವಹಿಸಿದ್ದರು.