ಜಾನಪದ ನಮ್ಮ ಇವತ್ತಿನ ಜೀವನಕ್ಕೆ ಅತ್ಯವಶ್ಯಕ: ಕೆ. ಯುವರಾಜ್

| Published : Oct 06 2025, 01:00 AM IST

ಸಾರಾಂಶ

ಜಾನಪದ ಇವತ್ತಿನ ಜೀವನಕ್ಕೆ ಅತ್ಯಂತ ಅವಶ್ಯಕವಾಗಿದೆ. ಜನಪದದ ಜೀವನ ಪ್ರೀತಿ ನನ್ನ ಎದೆಯಲ್ಲಿ ತುಂಬಿದೆ. ಜನಪದ ಹಾಡುವಾಗ ಅದನ್ನು ಮನಸ್ಸುತುಂಬಿ ಹಾಡಿದಾಗ ಸಿಗುವ ಆನಂದವೇ ಬೇರೆ ಎಂದು ಗಾಯಕ ಕೆ. ಯುವರಾಜ್ ಬಣ್ಣಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಜಾನಪದ ಇವತ್ತಿನ ಜೀವನಕ್ಕೆ ಅತ್ಯಂತ ಅವಶ್ಯಕವಾಗಿದೆ. ಜನಪದದ ಜೀವನ ಪ್ರೀತಿ ನನ್ನ ಎದೆಯಲ್ಲಿ ತುಂಬಿದೆ. ಜನಪದ ಹಾಡುವಾಗ ಅದನ್ನು ಮನಸ್ಸುತುಂಬಿ ಹಾಡಿದಾಗ ಸಿಗುವ ಆನಂದವೇ ಬೇರೆ ಎಂದು ಗಾಯಕ ಕೆ. ಯುವರಾಜ್ ಬಣ್ಣಿಸಿದರು.

ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಸಮಿತಿ ನೇತೃತ್ವದಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಜಾನಪದ ಹಾಡುಗಳ ವೃಂದಗಾಯನ ಮತ್ತು ಒಗಟು ಹೇಳುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜನಪದ ಹಾಡುಗಳನ್ನು ಒಬ್ಬರಿಗಿಂತ ವೃಂದದಲ್ಲಿ ಹಾಡುವ ಮಜವೇ ಬೇರೆ. ವೃಂದಗಾನ ಜನಪದ ಶಕ್ತಿ. ಮಕ್ಕಳಿಗೆ ಜನಪದ ಹಾಡು ಕಲಿಸಿದರೆ ಅದು ನಮ್ಮ ಸಂಸ್ಕೃತಿಯನ್ನು ಭಿತ್ತಿದಂತೆ ಆಗುತ್ತದೆ ಎಂದು ವಿವರಿಸಿದರು.

ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಅಧ್ಯಕ್ಷ ಡಿ.ಮಂಜುನಾಥ ಮಾತನಾಡಿ, ಪ್ರತಿ ವರ್ಷವೂ ದಸರಾ ಸಂದರ್ಭದಲ್ಲಿ ಜನಪದ ವೃಂದಗಾಯನ ಸ್ಪರ್ಧೆ ನಡೆಸುತ್ತಿದ್ದೇವೆ. ಮುಖ್ಯ ಉದ್ದೇಶ ಜನಪದ ಹಾಡುಗಳು ಎಲ್ಲರೆದೆಯಲ್ಲಿ ಬಿತ್ತುವ ಪ್ರಯತ್ನ ಮಾಡುತ್ತಿದ್ದೇವೆ. ನಮ್ಮ ನಾಡಿನ ಜನಪದ ಸಂಭ್ರಮವನ್ನು ಜಗತ್ತಿಗೆ ಪರಿಚಯಿಸಿದವರು ನಾಡೋಜ ಡಾ. ಎಚ್. ಎಲ್. ನಾಗೇಗೌಡ ಅವರು. ಅವರ ಪರಿಶ್ರಮದ ಫಲ ಕರ್ನಾಟಕ ಜಾನಪದ ಪರಿಷತ್ತು. ಅದರ ನಿರಂತರ ಪ್ರಯತ್ನದ ಫಲದಿಂದಾಗಿ ಯುನೆಸ್ಕೋ ಮಾನ್ಯತೆ ಪಡೆದಿದೆ. ನಮ್ಮ ಜನಪದ ಕಲೆ ಉಳಿಸಲು ಎಲ್ಲರೂ ಸಹಕಾರ ನೀಡಲು ಕೋರಿದರು.

ಮುಖ್ಯ ಅತಿಥಿಗಳಾಗಿದ್ದ ಶರಾವತಿ ಮಹಿಳಾ ಮಂಡಳಿ ಅಧ್ಯಕ್ಷ ಕೆ.ಎಸ್.ಶಶಿಕಲಾ ಅವರು ಜನಪದ ಕಲೆಯನ್ನು ಹಳ್ಳಿಯಿಂದ ನಗರಗಳವರೆಗೆ ಉಳಿಸಿ ಬೆಳಸುವಲ್ಲಿ ನಿರಂತರ ಪ್ರಯತ್ನ ನಡೆಯುತ್ತಿದೆ. ಅವರ ಪ್ರಯತ್ನಕ್ಕೆ ಎಲ್ಲರೂ ಕೈಜೋಡಿಸಲು ಮನವಿ ಮಾಡಿದರು.

ಒಟ್ಟು ಹದಿನೇಳು ತಂಡಗಳು ನೋಂದಾಯಿಸಿದ್ದವು. ತೀರ್ಪುಗಾರರಾಗಿ ನಳಿನಾಕ್ಷಿ, ಲಕ್ಷ್ಮೀ ಮಹೇಶ್, ಎಂ. ನವೀನ್ ಕುಮಾರ್ ನಿರ್ವಹಿಸಿದರು.

ಆಚಾರ್ಯ ತುಳುಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜು ವಿದ್ಯಾರ್ಥಿಗಳ ತಂಡಕ್ಕೆ ಮೊದಲ ಬಹುಮಾನ, ಆರ್ಯ ವೈಶ್ಯ ವನಿತೆಯರ ತಂಡ ಎರಡನೇ, ಸುಶೀಲಾ ಮತ್ತು ತಂಡ ತೃತೀಯ ಬಹುಮಾನ ಪಡೆದರು. ವಿಜೇತರಿಗೆ ನಗದು ಪುರಸ್ಕಾರ ಮತ್ತು ಭಾಗವಹಿಸಿದ ಎಲ್ಲರಿಗೂ ಅಭಿನಂದನಾ ಪತ್ರ ನೀಡಲಾಯಿತು.

ಕೆ. ಎಸ್. ಮಂಜಪ್ಪ ಜನಪದ ಗೀತೆ ಹಾಡಿದರು. ಆರ್. ಎಚ್. ಗಿರೀಶ್ ಸ್ವಾಗತಿಸಿದರು. ಕಜಾಪ ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ ಹಿಳ್ಳೋಡಿ ನಿರೂಪಿಸಿದರು.