ಸಾರಾಂಶ
ಖಾಜು ಸಿಂಗೆಗೋಳ
ಕನ್ನಡಪ್ರಭ ವಾರ್ತೆ ಇಂಡಿವಿಜಯಪುರ ಜಿಲ್ಲೆಯಲ್ಲಿಯೇ ಅತಿ ಕಡಿಮೆ ಅರಣ್ಯ ಪ್ರದೇಶ ಹೊಂದಿರುವ ಇಂಡಿ, ಚಡಚಣ ತಾಲ್ಲೂಕಿನಲ್ಲಿ ಹಸಿರೀಕರಣ ಹೆಚ್ಚಳಕ್ಕೆ ಅರಣ್ಯ ಇಲಾಖೆ ಮುಂದಾಗಿದೆ. ಅಲ್ಲದೇ, ಅದಕ್ಕಾಗಿ ಆಯ್ದ ಸ್ಥಳಗಳಲ್ಲಿ 45 ಸಾವಿರ ಸಂಖ್ಯೆಯಲ್ಲಿ ವಿವಿಧ ಜಾತಿಯ ಸಸಿಗಳನ್ನು ನೆಡಲು ಸಿದ್ಧತೆ ಮಾಡಿಕೊಂಡಿದೆ. ತಾಲೂಕುಗಳಲ್ಲಿ ಐದಾರು ವರ್ಷಗಳ ಹಿಂದೆ ಕೇವಲ ಶೇ.0.17 ಅರಣ್ಯ ಪ್ರದೇಶವನ್ನು ಹೊಂದಿದ್ದ ಇಂಡಿ ತಾಲೂಕು ಪ್ರಸ್ತುತ ಶೇ.2 ರಷ್ಟು ಅರಣ್ಯ ಪ್ರದೇಶವನ್ನು ಹೊಂದಿದ್ದು, ಸ್ವಲ್ಪಮಟ್ಟಿಗೆ ಸಮಾಧಾನ ನೀಡಿದೆ. ಈ ಹಿನ್ನಲೆಯಲ್ಲಿ ಪ್ರಸಕ್ತ ವರ್ಷ 45 ಸಾವಿರ ಸಸಿಗಳನ್ನು ನೆಟ್ಟು ಅರಣ್ಯ ಪ್ರದೇಶವನ್ನು ಇನ್ನಷ್ಟು ಅಭಿವೃದ್ಧಿಗೊಳಿಸಲು ಅರಣ್ಯ ಇಲಾಖೆ ಸಿದ್ಧವಾಗಿದೆ.ಸಾಮಾಜಿಕ ಅರಣ್ಯ ವಲಯದ ಬಬಲಾದ ನರ್ಸರಿ ಸಸಿಗಳನ್ನು ಬೆಳೆಸಲಾಗಿದೆ. ಸಾಮಾಜಿಕ ಅರಣ್ಯ ವಲಯದ ಅಧಿಕಾರಿಗಳು ಅರಣ್ಯ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ಅರಣ್ಯ ಹೆಚ್ಚಳದ ಗುರಿ ಹೊಂದಿದ್ದಾರೆ. ಇಂಡಿ ಹಾಗೂ ಚಡಚಣ ಪಟ್ಟಣಗಳು ಸೇರಿದಂತೆ, ನಿಂಬಾಳ, ಲಚ್ಯಾಣ, ಹಂಜಗಿ, ತಡವಲಗಾ, ಝಳಕಿ, ಅಂಜುಟಗಿ, ಭತಗುಣಕಿ, ಅಹಿರಸಂಗ, ಅಗರಖೇಡ, ನಾದ, ಜಿಗಜಿಣಗಿ, ರೇವತಗಾಂವ, ಉಮರಜ, ಬರಡೋಲ, ಗೋಡಿಹಾಳ, ಸಾವಳಸಂಗ, ಶಿರಾಡೋಣ, ಹಾಲಳ್ಳಿ, ಸಾತಲಗಾಂವ ಪಿಐ, ಕೆರೂರ, ಲೋಣಿ ಬಿಕೆ ಮುಂತಾದ ಗ್ರಾಮಗಳ ರಸ್ತೆ ಬದಿ, ಸ್ಮಶಾನ, ಶಾಲಾ ಕಾಲೇಜುಗಳ ಆವರಣ, ದೇವಸ್ಥಾನಗಳು, ಗೋಮಾಳ, ಸರ್ಕಾರಿ ಜಾಗಗಳು ಹೀಗೆ ಮತ್ತಿತರ ಸ್ಥಳಗಳಲ್ಲಿ ಸಸಿ ನೆಡಲು ಯೋಜಿಸಲಾಗಿದೆ ಎಂದು ಸಾಮಾಜಿಕ ವಲಯ ಅರಣ್ಯಾಧಿಕಾರಿ ಮಂಜುನಾಥ ಧುಳೆ ತಿಳಿಸಿದ್ದಾರೆ.ಅಲ್ಲದೇ, ಜಮೀನು ಬದುಗಳಲ್ಲಿ ನೆಡಲು ರೈತರಿಗೆ ರಿಯಾಯಿತಿ ದರದಲ್ಲಿ 13 ಸಾವಿರ ಸಸಿಗಳನ್ನು ಮಾರಾಟ ಮಾಡಲಾಗುವುದು ಎಂದು ಉಪ ವಲಯ ಅರಣ್ಯಾಧಿಕಾರಿ ಲಕ್ಷ್ಮಣ ನಾದ ಮಾಹಿತಿ ನೀಡಿದರು. ಸಾಮಾಜಿಕ ಅರಣ್ಯ ವಲಯಗಳಲ್ಲಿ ಸಸಿಗಳನ್ನು ವಿವಿಧೆಡೆ ನೆಡಲು ತಪಸಿ, ಹೊಂಗೆ, ಬೇವು, ಅರಳಿ, ಆಲ, ಗೋಣಿ, ಹುಣಸೆ, ಬೇವು, ಅಲೆಸ್ಟೋನಿಯಾ, ಸಂಕೇಶ್ವರ, ಕದಂಬ, ಇಲಾಚಿ ಹುಣಸೆ, ಬಸವನಪಾದ, ಬಸರಿ, ಪತ್ರಿ ಮುಂತಾದ ವಿವಿಧ ಜಾತಿಯ ಸಸಿಗಳನ್ನು ನೆಡಲು ಯೋಜಿಸಲಾಗಿದೆ. ಅಲ್ದೇ, ರೈತರಿಗೆ ನಿಂಬೆ, ಬಾರಿ, ಸೀತಾಫಲ ಸಸಿಗಳು, ₹ 3ಗೆ ಒಂದರಂತೆ, ದೊಡ್ಡ ಪ್ರಮಾಣದ ಸಸಿಗಳಾದ ಸಿಮಾರುಬಾ, ಬೇವು, ಸೀತಾಫಲ, ಹೊಂಗೆ ಸಸಿಗಳು ₹ 6 ಗೆ ಒಂದರಂತೆ ವಿತರಿಸಲು ಸಾಮಾಜಿಕ ವಲಯ ಅರಣ್ಯ ಇಲಾಖೆ ಮುಂದಾಗಿದೆ.------
ಕೋಟ್ರಸ್ತೆ ಬದಿ ನೆಡು ತೋಪುಗಳಲ್ಲಿ ಮುಂದಿನ ವಾರದಿಂದ ಸಸಿ ನೆಡುವ ಕಾರ್ಯ ಕೈಗೊಳ್ಳಲು ಉದ್ದೇಶಿಸಲಾಗಿದೆ. ಸಸಿಗಳನ್ನು ಬೆಳೆಸಲು ಶ್ರಮ ವಹಿಸಿ, ಸಸಿ ನೆಡುವವರೆಗೆ ಅರಣ್ಯ ಇಲಾಖೆಯ ಉಪ ವಲಯ ಅರಣ್ಯಾಧಿಕಾರಿ ಲಕ್ಷ್ಮಣ ನಾದ, ಉಪ ವಲಯ ಅರಣ್ಯಾಧಿಕಾರಿ ಆರ್.ಎಚ್.ಜಮಾದಾರ, ಗಸ್ತು ವನಪಾಲಕ ನಾಗೇಶ ಬಿರಾದಾರ ಹಾಗೂ ಸಿಬ್ಬಂದಿ ಶ್ರಮಿಸುತ್ತಿದ್ದಾರೆ. ಈ ಬಾರಿ ಇಂಡಿ, ಚಡಚಣ ತಾಲೂಕು ಸೇರಿ 45 ಸಾವಿರ ಸಸಿಗಳನ್ನು ನೆಡುವ ಹಾಗೂ ವಿತರಿಸುವ ಕಾರ್ಯ ಹಮ್ಮಿಕೊಳ್ಳಲಾಗಿದೆ.ಮಂಜುನಾಥ ಧುಳೆ, ವಲಯ ಅರಣ್ಯಾಧಿಕಾರಿ------ಕೋಟ್2021 ಹಾಗೂ 2022ರಲ್ಲಿ ಸಾವಳಸಂಗ ಅರಣ್ಯ ಪ್ರದೇಶಕ್ಕೆ ಸಿದ್ದೇಶ್ವರ ಶ್ರೀಗಳು ಭೇಟಿ ನೀಡಿದ್ದರಿಂದ ಆ ಪ್ರದೇಶವನ್ನು ಹಸರಿಕರಣಗೊಳಿಸುವ ಕೆಲಸ ಇಮ್ಮಡಿಗೊಂಡಿದೆ. ಜನರಲ್ಲಿ ಸಸಿ ಬೆಳೆಸುವ ಮನೋಭಾವ ಬೆಳೆದಿದೆ. ಗ್ರಾಮಗಳ ರಸ್ತೆ ಬದಿ, ಸ್ಮಶಾನ, ಶಾಲಾ ಕಾಲೇಜುಗಳ ಆವರಣ, ದೇವಸ್ಥಾನಗಳು, ಗೋಮಾಳ, ಸರ್ಕಾರಿ ಜಾಗಗಳು ಹೀಗೆ ಮತ್ತಿತರ ಸ್ಥಳಗಳಲ್ಲಿ ಸಸಿ ನೆಡಲು ಯೋಜಿಸಲಾಗಿದೆ.ಧನರಾಜ ಮುಜಗೊಂಡ, ವನಪಾಲಕ