ಕಮಲ್ ಹೇಳಿಕೆ ತಪ್ಪಲ್ಲ: ನಟ ಕಿಶೋರ್‌

| N/A | Published : Jun 01 2025, 02:00 AM IST / Updated: Jun 01 2025, 06:33 AM IST

ಸಾರಾಂಶ

‘ಕನ್ನಡ ಹುಟ್ಟಿದ್ದು ತಮಿಳು ಭಾಷೆಯಿಂದ’ ಎಂಬ ತಮಿಳು ನಟ ಕಮಲ್‌ ಹಾಸನ್‌ ಹೇಳಿಕೆಗೆ ರಾಜ್ಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿರುವ ಬೆನ್ನಲ್ಲೇ ಬಹುಭಾಷಾ ನಟ ಕಿಶೋರ್ ಅವರು ಕಮಲ್‌ ಹಾಸನ್‌ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

 ಮೈಸೂರು : ‘ಕನ್ನಡ ಹುಟ್ಟಿದ್ದು ತಮಿಳು ಭಾಷೆಯಿಂದ’ ಎಂಬ ತಮಿಳು ನಟ ಕಮಲ್‌ ಹಾಸನ್‌ ಹೇಳಿಕೆಗೆ ರಾಜ್ಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿರುವ ಬೆನ್ನಲ್ಲೇ ಬಹುಭಾಷಾ ನಟ ಕಿಶೋರ್ ಅವರು ಕಮಲ್‌ ಹಾಸನ್‌ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗಾರರ ಜೊತೆ ಅವರು ಮಾತನಾಡಿ, ‘ನಟ ಕಮಲ್‌ ಹಾಸನ್ ಅವರ ಹೇಳಿಕೆಯನ್ನು ಅಷ್ಟೊಂದು ಭಾವುಕವಾಗಿ ನೋಡುವ ಅವಶ್ಯಕತೆ ಇಲ್ಲ. ಭಾಷಾ ಉಗಮದ ನಿಖರ ಮಾಹಿತಿ ಇಲ್ಲ ಎಂದಾದಲ್ಲಿ ಅವರ ಹೇಳಿಕೆ ಅವಮಾನವಲ್ಲ. ತಮಿಳಿಂದ ಕನ್ನಡ ಬಂದಿದೆ ಎಂದಾದರೆ ಸರಿ, ತಪ್ಪೇನಿಲ್ಲ’ ಎಂದರು.

‘ನನ್ನ ತಾಯಿಯ ಹೊಟ್ಟೆಯಿಂದ ನಾನು ಹುಟ್ಟಿ ಬಂದೆ ಎಂದರೆ ನನಗೆ ಹಾಗೂ ನನ್ನ ತಾಯಿಗೆ ಅದು ಅವಮಾನವಲ್ಲ. ಅದನ್ನು ಅವಹೇಳನಕಾರಿ ಎಂದು ಯಾಕೆ ಅಂದುಕೊಳ್ಳಬೇಕು? ತುಂಬಾ ತಿಳಿದಂತಹ ಮನುಷ್ಯ ಏನೋ ಹೇಳಿದ್ದಾರೆ ಎಂದರೆ ಅದಕ್ಕೊಂದು ತರ್ಕ ಇರುತ್ತದೆ. ಅದಕ್ಕೆ ಏನೋ ಒಂದು ಅರ್ಥ ಇರಬೇಕು. ಅದನ್ನು ಪ್ರಶ್ನೆ ಮಾಡಿ, ಏನು ಎಂಬುದನ್ನು ತಿಳಿದುಕೊಳ್ಳಬೇಕು. ಅವರ ಹೇಳಿಕೆಯಿಂದ ಯಾರಿಗೂ ಅವಮಾನವಾಗಿಲ್ಲ’ ಎಂದು ಹೇಳಿದರು.

ಎಲ್ಲಾ ಭಾಷೆಗಳು ಎಲ್ಲಿಂದಲೋ ಹುಟ್ಟಿ ಬಂದಿರುತ್ತವೆ. ಹಾಗಂತ ಒಂದು ಭಾಷೆ ಮೇಲು, ಇನ್ನೊಂದು ಭಾಷೆ ಕೀಳು ಎಂಬುದಿಲ್ಲ. ಕನ್ನಡ ಎಲ್ಲಿಂದಲೋ ಹುಟ್ಟಿ ಬಂದಿದೆ, ಹಾಗೆಯೇ ತಮಿಳು ಸಹ ಎಲ್ಲಿಂದಲೂ ಹುಟ್ಟಿ ಬಂದಿದೆ. ಇಂತಹ ವಿಷಯದಲ್ಲಿ ಜನರನ್ನು ಭಾವುಕವಾಗಿ ರೊಚ್ಚಿಗೆಬ್ಬಿಸಬಾರದು ಎಂದು ಅವರು ಸಲಹೆ ನೀಡಿದರು.

ಒಂದು ವೇಳೆ, ತಮಿಳಿನಿಂದ ಕನ್ನಡ ಬಂದಿದೆ ಎಂದಾದರೆ, ಅದು ಸರಿ. ಅದರಲ್ಲಿ ತಪ್ಪೇನಿಲ್ಲ. ಭಾಷೆಗಳ ಬಗ್ಗೆ ಬಹಳಷ್ಟು ಥಿಯರಿಗಳಿವೆ. ಕೆಲವು ಭಾಷೆ ಎಲ್ಲಿಂದ ಬಂತು ಎಂಬ ಬಗ್ಗೆ ನಿಖರವಾದ ಮಾಹಿತಿ ಸಿಕ್ಕಿಲ್ಲ. ಈ ಬಗ್ಗೆ ಇನ್ನೂ ಸಂಶೋಧನೆಗಳು ನಡೆಯುತ್ತಲೇ ಇವೆ. ಒಂದು ಭಾಷೆಯಿಂದ ಇನ್ನೊಂದು ಭಾಷೆ ಬಂದಿದೆ ಎಂದು ಹೇಳಿದರೆ ಅದನ್ನು ಅವಮಾನ ಎಂದು ಯಾಕೆ ಭಾವಿಸಬೇಕು ಎಂದು ಅವರು ಪ್ರಶ್ನಿಸಿದರು.

‘ಕಮಲ್ ಹಾಸನ್ ಹೇಳಿರೋದು ಸಹ ಒಂದು ಥಿಯರಿ (ಸಿದ್ದಾಂತ) ಇರಬಹುದು. ಅವರ ಥಿಯರಿ ಏನು ಎಂಬುದನ್ನು ತಿಳಿದುಕೊಳ್ಳೋಣ. ನನ್ನ ಅಭಿಪ್ರಾಯದಲ್ಲಿ ಅವರ ಹೇಳಿಕೆ ಅವಮಾನಕರವಲ್ಲ’ ಎಂದು ಅವರು ಅಭಿಪ್ರಾಯಪಟ್ಟರು.

‘ಈಗಾಗಲೇ ನಮ್ಮಲ್ಲಿ ಭಾಷೆ, ಜಾತಿ, ಧರ್ಮ ಎಲ್ಲವನ್ನೂ ಬಂಡವಾಳ ಮಾಡಿಕೊಂಡು ರಾಜಕೀಯ ಮಾಡಿಕೊಂಡಿದ್ದಾರೆ. ಭಾಷೆಯನ್ನು ಭಾವುಕತೆಯಿಂದ ನೋಡಬಾರದು. ಭಾಷೆಯನ್ನು ಭಾಷೆಯಾಗಿ ನೋಡಬೇಕು‘ ಎಂದರು.

ಕಿಶೋರ್ ಸಮರ್ಥನೆ

- ಕಮಲ್ ಹೇಳಿಕೆಯನ್ನು ಭಾವುಕತೆಯಿಂದ ನೋಡಬೇಡಿ

- ಅವರು ಹೇಳಿರೋದರ ಹಿಂದೆ ಒಂದು ಥಿಯರಿ ಇರಬಹುದು

- ಅವರ ಥಿಯರಿ ಏನು ಎಂಬುದನ್ನು ತಿಳಿಯಲು ಯತ್ನಿಸೋಣ

- ಕೆಲವರು ಭಾಷೆ, ಜಾತಿಯನ್ನು ಬಂಡವಾಳ ಮಾಡಿಕೊಂಡಿದ್ದಾರೆ

- ಕಮಲ್‌ ಹೇಳಿಕೆಯಿಂದ ಯಾರಿಗೂ ಅವಮಾನವಾಗಿಲ್ಲ

ಕಮಲ್‌ ಹೇಳಿಕೆ ಸಮರ್ಥಿಸಲ್ಲ,  ಕನ್ನಡವೇ ನನ್ನ ಆದ್ಯತೆ: ಶಿವಣ್ಣ

 ಬೆಂಗಳೂರು : ಕನ್ನಡ ಹುಟ್ಟಿದ್ದು ತಮಿಳಿಂದ ಎಂದು ತಮ್ಮೆದುರೇ ಹೇಳಿದ್ದ ನಟ ಕಮಲ ಹಾಸನ್‌ ವಿವಾದಾತ್ಮಕ ಹೇಳಿಕೆಯ ಬಗ್ಗೆ ಶಿವರಾಜ ಕುಮಾರ್‌ ಕೊನೆಗೂ ಮೌನ ಮುರಿದಿದ್ದಾರೆ. ‘ಅಂದು ಕಮಲ್‌ ಅವರ ಮಾತು ಸರಿಯಾಗಿ ಕೇಳಿಸದ ಕಾರಣ ಆ ವೇದಿಕೆಯಲ್ಲಿ ಪ್ರತಿಕ್ರಿಯೆ ನೀಡಲಾಗಿರಲಿಲ್ಲ. ಹಾಗೆಂದ ಮಾತ್ರಕ್ಕೆ ನಾನು ಕಮಲ್‌ ಅವರನ್ನು ಸಮರ್ಥನೆ ಮಾಡುತ್ತಿಲ್ಲ, ಕನ್ನಡವೇ ನನ್ನ ಮೊದಲ ಆದ್ಯತೆ’ ಎನ್ನುವ ಮೂಲಕ ಕನ್ನಡಿಗರ ಬೆಂಬಲಕ್ಕೆ ನಿಂತಿದ್ದಾರೆ.

ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಅಣ್ಣಾವ್ರ ಕುಟುಂಬದಿಂದ ಬಂದವನು ನಾನು, ನನ್ನ ಕನ್ನಡ ಪ್ರೇಮದ ಬಗ್ಗೆ ಸ್ಪಷ್ಟನೆ ಕೊಡಬೇಕಿಲ್ಲ’ ಎಂದು ಪ್ರತಿಕ್ರಿಯಿಸಿದ್ದಾರೆ.

‘ಕಮಲ ಹಾಸನ್‌ ಯಾಕೆ ಆ ರೀತಿ ಮಾತನಾಡಿದರು ಅನ್ನುವುದರ ಬಗ್ಗೆ ಅವರನ್ನೇ ಕೇಳಬೇಕು. ಆದರೆ ನಾನು ಯಾವತ್ತೂ ಮಾತೃಭಾಷೆಯ ಪರವಾಗಿ ನಿಲ್ಲುವವನು. ರಾಜ್ಯದ ಜನತೆಗೆ ನಾನೇನು ಅನ್ನುವುದು ಗೊತ್ತು, ಅವರು ಇದನ್ನು ಅರ್ಥ ಮಾಡಿಕೊಳ್ಳುತ್ತಾರೆ. ಎಲ್ಲಾ ಭಾಷೆಗಳ ಬಗ್ಗೆಯೂ ನನಗೆ ಗೌರವ ಇದೆ. ಆದರೆ ಮಾತೃಭಾಷೆ ಕನ್ನಡಕ್ಕೆ ಯಾವತ್ತೂ ಮೊದಲ ಆದ್ಯತೆ ನೀಡುತ್ತೇನೆ.

 ಆ ಬಗ್ಗೆ ಅನುಮಾನ ಬೇಡ. ಕನ್ನಡಕ್ಕೆ ನನ್ನ ಜೀವವನ್ನೇ ಬೇಕೆಂದರೂ ನೀಡುತ್ತೇನೆ. ನಾಡು ನುಡಿಯ ಹಿತಕ್ಕೆ ಧಕ್ಕೆಯಾಗುವ ಸಂಗತಿ ನಡೆದಾಗ ಮೊದಲು ನನ್ನ ನೆಲದ ಪರವಾಗಿ ದನಿ ಎತ್ತುವವನು ನಾನು. ಕನ್ನಡಿಗರಿಗೆ ನಾನೇನು ಅನ್ನುವುದು ಗೊತ್ತು’ ಎಂದವರು ಹೇಳಿದ್ದಾರೆ.‘ಕನ್ನಡಾಭಿಮಾನ ಏನು ಅನ್ನುವುದು ನನಗೂ ಗೊತ್ತಿದೆ. ಅಣ್ಣಾವ್ರ ಕನ್ನಡ ಅಭಿಮಾನ ನಿಮಗೆಲ್ಲರಿಗೂ ಗೊತ್ತೇ ಇದೆ. ನನ್ನ ಬಗ್ಗೆ ಕೇಳಿಬಂದ ಆರೋಪಗಳ ಬಗ್ಗೆ ತಲೆಕೆಡಿಸಿಕೊಳ್ಳಲ್ಲ’ ಎಂದೂ ಶಿವರಾಜ್‌ ಕುಮಾರ್‌ ಹೇಳಿದ್ದಾರೆ.

Read more Articles on