ಸಾರಾಂಶ
ದ.ಕ. ಜಿಲ್ಲಾ ಕಾಂಗ್ರೆಸ್ ವತಿಯಿಂದ ಮಂಗಳವಾರ ನಗರದ ಮಿನಿ ವಿಧಾನಸೌಧದ ಎದುರು ಪ್ರತಿಭಟನೆ ನಡೆಯಿತು.
ಕನ್ನಡಪ್ರಭ ವಾರ್ತೆ ಮಂಗಳೂರು
ಎಐಸಿಸಿ ಮುಖಂಡ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ‘ಭಾರತ್ ಜೋಡೊ ನ್ಯಾಯ ಯಾತ್ರೆ’ಗೆ ಅಡ್ಡಿಪಡಿಸಿದ ಬಿಜೆಪಿ ಕಾರ್ಯಕರ್ತರ ಕೃತ್ಯವನ್ನು ಖಂಡಿಸಿ ದ.ಕ. ಜಿಲ್ಲಾ ಕಾಂಗ್ರೆಸ್ ವತಿಯಿಂದ ಮಂಗಳವಾರ ನಗರದ ಮಿನಿ ವಿಧಾನಸೌಧದ ಎದುರು ಪ್ರತಿಭಟನೆ ನಡೆಯಿತು.ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ ರಮಾನಾಥ ರೈ, ‘ಭಾರತ್ ಜೋಡೋ ನ್ಯಾಯ ಯಾತ್ರೆ’ಗೆ ಸಿಗುತ್ತಿರುವ ಅಭೂತಪೂರ್ವ ಜನಬೆಂಬಲದಿಂದ ಹತಾಶೆಗೊಂಡಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮ ಅವರು ಬಿಜೆಪಿ ಗೂಂಡಾಗಳ ಮೂಲಕ ತಡೆಯೊಡ್ಡಿದ್ದಾರೆ. ಕಾಂಗ್ರೆಸ್ನಲ್ಲಿದ್ದಾಗ ಎಲ್ಲವನ್ನೂ ಪಡೆದಿದ್ದ ಹಿಮಂತ ಬಿಸ್ವಾ ಶರ್ಮರ ಮೇಲೆ ನರೇಂದ್ರ ಮೋದಿಯು ‘ಇಡಿ’ ತನಿಖೆ ನಡೆಸಿತ್ತು. ತನ್ನ ಆ ಹಗರಣದಿಂದ ಪಾರಾಗಲು ಬಿಜೆಪಿ ಸೇರಿದ ಶರ್ಮ ಇದೀಗ ಕೇಂದ್ರ ನಾಯಕರನ್ನು ಮೆಚ್ಚಿಸಲು ಇಂತಹ ಕಾರ್ಯಕ್ಕೆ ಮುಂದಾಗಿರುವುದು ಖಂಡನೀಯ. ಬಿಜೆಪಿಗರ ಗೂಂಡಾಗಿರಿಗೆ ಧಿಕ್ಕಾರ ಎಂದರು.ಪಕ್ಷದ ಮುಖಂಡರಾದ ಲುಕ್ಮಾನ್ ಬಂಟ್ವಾಳ, ರಕ್ಷಿತ್ ಶಿವರಾಮ್, ಶಾಹುಲ್ ಹಮೀದ್ ಕೆ.ಕೆ., ಶಾಲೆಟ್ ಪಿಂಟೋ, ವಿಸ್ವಾಶ್ ಕುಮಾರ್ ದಾಸ್, ವಸಂತ್ ಬೆರ್ನಾಡ್, ಬೇಬಿ ಕುಂದರ್, ಆರ್ ಕೆ ಪೃಥ್ವಿರಾಜ್, ಮೋಹನ್ ಕೋಟ್ಯಾನ್, ಸುರೇಂದ್ರ ಕಂಬ್ಳಿ, ಜೆ. ಅಬ್ದುಲ್ ಸಲೀಂ, ಪ್ರವೀಣ್ಚಂದ್ರ ಆಳ್ವ, ಗಿರೀಶ್ ಆಳ್ವ, ಮಂಜುಳಾ ನಾಯಕ್, ಜೆಸಿಂತಾ ವಿಜಯ ಅಲ್ಫ್ರೆಡ್, ಪದ್ಮನಾಭ ನರಿಂಗಾನ, ಪ್ರಕಾಶ್ ಸಾಲಿಯಾನ್, ಸುಹಾನ್ ಆಳ್ವ, ಅಪ್ಪಿ, ಪುರುಷೋತ್ತಮ್ ಚಿತ್ರಾಪುರ, ಟಿ.ಕೆ.ಸುಧೀರ್, ದಿನೇಶ್ ಕುಂಪಲ ಮತ್ತಿತರರು ಇದ್ದರು.