ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ರಾಷ್ಟ್ರವ್ಯಾಪಿ ಗಮನ ಸೆಳೆದಿರುವ ಚಿತ್ರದುರ್ಗದ ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆಗೆ ವೇದಿಕೆ ಸಜ್ಜಾಗುತ್ತಿದೆ. ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ವತಿಯಿಂದ ಪ್ರತಿ ವರ್ಷ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುವ ಹಿಂದೂ ಮಹಾಗಣಪತಿ ಮಹೋತ್ಸವಕ್ಕೆ ಕೋಟೆ ನಾಡು ಈ ಬಾರಿಯೂ ತನ್ನನ್ನು ತೆರೆದುಕೊಳ್ಳುತ್ತಿದೆ.ಬುಧವಾರ ನಗರದ ಶ್ರೀ ಮುರುಘಾ ರಾಜೇಂದ್ರ ಕ್ರೀಡಾಂಗಣದಲ್ಲಿ ಗೋಪೂಜೆ ಹಾಗೂ ಧ್ವಜಪೂಜೆ ನೆರವೇರಿಸುವ ಮೂಲಕ ಮೂರ್ತಿ ಪ್ರತಿಷ್ಠಾಪನಾ ಪೀಠ ಸಜ್ಜು ಮಾಡಲು ಅಧೀಕೃತ ಚಾಲನೆ ನೀಡಲಾಯಿತು.ಕಳೆದ 18 ವರ್ಷಗಳಿಂದ ಚಿತ್ರದುರ್ಗದಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ವತಿಯಿಂದ ಹಿಂದೂ ಮಹಾ ಗಣಪತಿಯನ್ನು ಸ್ಥಾಪನೆ ಮಾಡಿ ಪೂಜೆ ಹಾಗೂ ಶೋಭಾಯಾತ್ರೆ ನಡೆಸಲಾಗುತ್ತಿರುವ ಪರಂಪರೆ ಈ ಬಾರಿಯೂ ಮುಂದುವರಿದಂತಾಗಿದೆ.
ಹಿಂದೂ ಮಹಾಗಣಪತಿ ಮಹೋತ್ಸವ ಯಶಸ್ಸಿಗೆ ಹಲವು ಬಗೆಯ ಸಮಿತಿ ರಚಿಸಿ ಮುನ್ನಡೆಯಲಾಗುತ್ತಿದೆ. ಸೆಪ್ಟೆಂಬರ್ 14ರಂದು ಗಣೇಶ ಮೂರ್ತಿಯ ಪ್ರತಿಷ್ಠಾಪನೆ ಹಾಗೂ ಅಕ್ಟೋಬರ್ 3 ರಂದು ವೈಭವದ ಶೋಭಾಯಾತ್ರೆ ನಡೆಯಲಿದೆ. ಸೆಪ್ಟೆಂಬರ್ 9 ಅಥವಾ 13 ಸಮಯ ಮತ್ತು ನಕ್ಷತ್ರವನ್ನು ಆಧರಿಸಿ ಹಿಂದೂ ಮಹಾ ಗಣಪತಿಯ ಪುರಪ್ರವೇಶ ಕಾರ್ಯಕ್ರಮವನ್ನು ಅಂತಿಮಗೊಳಿಸಲಾಗುವುದು. ಸೆಪ್ಟೆಂಬರ್ 14 ರ ಬೆಳಿಗ್ಗೆ 9.18 ರಿಂದ 10.45ರ ಶುಭ ಮುಹೂರ್ತದಲ್ಲಿ ಗಣೇಶ ಮೂರ್ತಿಯ ಪ್ರತಿಷ್ಠಾಪನೆ ನೆರವೇರಲಿದೆ. ಅಕ್ಟೋಬರ್ 3 ರಂದು ವಿಜೃಂಭಣೆಯ ಶೋಭಾಯಾತ್ರೆ ಮತ್ತು ವಿಸರ್ಜನಾ ಕಾರ್ಯಕ್ರಮ ನಡೆಯಲಿದೆ.ಬುಧವಾರ ಬೆಳಿಗ್ಗೆ ಮುರುಘಾ ರಾಜೇಂದ್ರ ಕ್ರೀಡಾಂಗಣದಲ್ಲಿ ಗೋಪೂಜೆ ಹಾಗೂ ಧ್ವಜಪೂಜೆಯನ್ನು ನೆರೆದಿದ್ದ ಸಾವಿರಾರು ಭಕ್ತಾಧಿಗಳ ವಿವಿಧ ಮಠಾಧೀಶರು, ಚುನಾಯಿತ ಪ್ರತಿನಿಧಿಗಳ ಸಮ್ಮುಖದಲ್ಲಿ ನಡೆಸಲಾಯಿತು. ಈ ಸಂದರ್ಭದಲ್ಲಿ ಮಾದಾರ ಗುರುಪೀಠದ ಬಸವ ಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಭಗೀರಥ ಪೀಠದ ಪುರುಷೋತ್ತಮಾನಂದ ಶ್ರೀಗಳು, ಯಾದವ ಗುರುಪೀಠದ ಶ್ರೀ ಕೃಷ್ಣಯಾದವಾನಂದ ಶ್ರೀಗಳು, ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳು, ಹೊಸದುರ್ಗದ ಶ್ರೀ ಶಾಂತವೀರ ಶ್ರೀಗಳು, ಸರ್ದಾರ ಸೇವಾಲಾಲ್ ಶ್ರೀಗಳು, ಸಂಸದ ಗೋವಿಂದ ಎಂ. ಕಾರಜೋಳ, ಮಾಜಿ ಶಾಸಕರಾದ ಜಿ.ಎಚ್. ತಿಪ್ಪಾರೆಡ್ಡಿ ಎಸ್.ಕೆ ಬಸವರಾಜನ್ ಜಿ.ಪಂ.ಮಾಜಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್, ಮುಖಂಡರಾದ ಡಾ. ಸಿದ್ದಾರ್ಥ ಗುಂಡಾರ್ಪಿ, ಹಿಂದೂ ಮಹಾಗಣಪತಿ ಉತ್ಸವ ಸಮಿತಿಯ ಅಧ್ಯಕ್ಷ ಸುಧೀರ್ ಜಿ. ಪ್ರಧಾನ ಕಾರ್ಯದರ್ಶಿ ಚನ್ನಕೇಶವ್, ಗೌರವಾಧ್ಯಕ್ಷ ಷಡಕ್ಷರಪ್ಪ, ವಿಶ್ವ ಹಿಂದೂ ಪರಿಷತ್ನ ಪ್ರಾಂತ ಸತ್ಸಂಗ ಪ್ರಮುಖ್ ಚಂದ್ರಶೇಖರ್, ವಿಶ್ವ ಹಿಂದೂ ಪರಿಷತ್ನ ಪ್ರಾಂತ ಉಪಾಧ್ಯಕ್ಷ ಡಾ ಮಂಜುನಾಥ್, ರೇಖಾ, ನಗರಸಭೆಯ ಮಾಜಿ ಸದಸ್ಯ ಸುರೇಶ್, ನಾಗರಾಜ್, ವೆಂಕಟೇಶ್ ಯಾದವ್, ಬದರಿನಾಥ್, ಕೊಲ್ಲಿಲಕ್ಷ್ಮೀ, ಪ್ರಶಾಂತ್, ಶರಣ್ ಕುಮಾರ್, ಶ್ರೇಣಿಕ್ ಬಸಮ್ಮ, ನಾಗರಾಜ್ ಬೇದ್ರೇ ಉಪಸ್ಥಿತರಿದ್ದರು.