ಶ್ರೀರಂಗಪಟ್ಟಣ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಂದ ಸಂಗ್ರಹಿಸಿದ್ದ ಹಣ ದುರುಪಯೋಗ ಸಂಬಂಧ 4 ಮಂದಿ ಸಿಬ್ಬಂದಿಯನ್ನು ಮುಖ್ಯ ವೈದ್ಯಾಧಿಕಾರಿ ಶ್ರೀಧರ್ ಅಮಾನತ್ತುಗೊಳಿಸಿದ್ದಾರೆ. ಆಸ್ಪತ್ರೆಯಲ್ಲಿನ ಹಣ ದುರುಪಯೋಗ, ರೋಗಿಗಳ ನಿರ್ಲಕ್ಷ್ಯ ಸಂಬಂಧಿಸಿದಂತೆ ಜೆಡಿಎಸ್ ಮುಖಂಡರು ಹಾಗೂ ಸಾರ್ವಜನಿಕರು ಸಾಕ್ಷ್ಯ ಸಹಿತ ಮುಖ್ಯ ವೈದ್ಯಾಧಿಕಾರಿಗಳನ್ನು ತರಾಟೆ ತೆಗೆದುಕೊಂಡು ತಪ್ಪಿತಸ್ಥ ಸಿಬ್ಬಂದಿಯನ್ನು ಅಮಾನತ್ತುಗೊಳಿಸಿ ಸೂಕ್ತ ತನಿಖೆ ನಡೆಸುವಂತೆ ಒತ್ತಾಯಿಸಿದ್ದರು. ಈ ವಿಷಯವಾಗಿ ಕನ್ನಡಪ್ರಭ ಪತ್ರಿಕೆ ವರದಿ ಮಾಡಿತ್ತು. ಎಚ್ಚೆತ್ತ ಮುಖ್ಯ ವೈದ್ಯಾಧಿಕಾರಿಗಳು ಸಿಬ್ಬಂದಿ ಸುಮಾ, ಅಶ್ವಿನಿ, ಅನುಷ ಹಾಗೂ ಮಾನಸ ಎಂಬ ನಾಲ್ಕು ಮಂದಿಯನ್ನು ಅಮಾನತ್ತು ಮಾಡಿದ್ದಾರೆ. ಮುಖ್ಯ ವೈದ್ಯಾಧಿಕಾರಿ ಶ್ರೀಧರ್ ಪ್ರತಿಕ್ರಿಯಿಸಿ, ಇದೀಗ ಅಮಾನತ್ತುಗೊಂಡಿರುವ ನಾಲ್ಕು ಮಂದಿ ಸಿಬ್ಬಂದಿಯನ್ನು ಆರೋಗ್ಯ ರಕ್ಷಾ ಸಮಿತಿ ವತಿಯಿಂದ ನೇಮಿಸಿಕೊಳ್ಳಲಾಗಿತ್ತು. ಅವರನ್ನು ಆಸ್ಪತ್ರೆಗೆ ಬರುವ ರೋಗಿಗಳಿಂದ ಕ್ಷ-ಕಿರಣ, ಸ್ಕ್ಯಾನಿಂಗ್, ರಕ್ತ ಪರೀಕ್ಷೆ ಸೇರಿದಂತೆ ಇತರೆ ಪರೀಕ್ಷೆಗಳಿಗಾಗಿ ಹಣ ಪಡೆದು ರಸೀದಿ ನೀಡಲು ನೇಮಿಸಲಾಗಿತ್ತು. ಆದರೆ, ಅವರು ರೋಗಿಗಳಿಂದ ಪಡೆದ ಹಣ ಹಾಗೂ ಬ್ಯಾಂಕ್ ಖಾತೆಗೆ ಜಮೆ ಮಾಡಿರುವ ಹಣ ವ್ಯತ್ಯಾಸ ಆಗಿರುವುದು ಕಂಡು ಬಂದಿರುವುದರಿಂದ ಅಮಾನತ್ತು ಮಾಡಲಾಗಿದೆ. ಜೊತೆಗೆ ಸೂಕ್ತ ತನಿಖೆ ನಡೆಸಿ, ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ.