ಕನ್ನಡಪ್ರಭ ವಾರ್ತೆ, ಬೀದರ್‌

ತೋಟದ ಬೆಳೆಯಲ್ಲಿ ರಹಸ್ಯವಾಗಿ ಬೆಳೆಸಲಾಗಿದ್ದ ಬೃಹತ್‌ ಗಾಂಜಾ ಜಾಲದ ಮೇಲೆ ಔರಾದ್‌ (ಬಿ) ಠಾಣೆಯ ಪೊಲೀಸರು ಮಿಂಚಿನ ದಾಳಿ ನಡೆಸಿ, ಸುಮಾರು 30,21,500 ರೂಪಾಯಿ ಮೌಲ್ಯದ 60.43ಕೆಜಿಯ 100 ಹಸಿ ಗಾಂಜಾ ಗಿಡಗಳನ್ನು ಜಪ್ತಿ ಮಾಡಿ ಘಟನೆಗೆ ಸಂಬಂಧಿಸಿದಂತೆ ಆರೋಪಿಯೋರ್ವನನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆಗಿಳಿದ ಔರಾದ್‌ (ಬಿ) ಪೊಲೀಸ್‌ ಠಾಣೆಯ ಪಿಎಸ್‌ಐ ವಸೀಮ್‌ ಪಟೇಲ್‌, ಪಿಎಸ್‌ಐ ರೇಣುಕಾ ಹಾಗೂ ಸಿಬ್ಬಂದಿಗಳ ತಂಡ, ತಹಶೀಲ್ದಾರ್‌ ಕಚೇರಿಯ ಪಂಚರ ಸಮಕ್ಷಮದಲ್ಲಿ ಖಂಡಿಕೇರಿ ಗ್ರಾಮದ ಶಿವಾರದ ಸರ್ವೆ ನಂಬರ್ ಹೊಲದ ಮೇಲೆ ದಾಳಿ ನಡೆಸಿ ಬೆಳೆಗಳ ನಡುವೆ ಅಕ್ರಮವಾಗಿ ಬೆಳೆಸಲಾಗಿದ್ದ ಸಣ್ಣ ಹಾಗೂ ದೊಡ್ಡ ಗಾತ್ರದ ಗಾಂಜಾ ಗಿಡಗಳನ್ನು ಕಿತ್ತು ಮುಟ್ಟುಗೋಲು ಹಾಕಿಕೊಂಡಿದ್ದಾರೆ.

ಘಟನೆ ಕುರಿತು ಔರಾದ್‌ (ಬಿ) ಪೊಲೀಸ್‌ ಠಾಣೆಯಲ್ಲಿ ಎನ್‌ಡಿಪಿಎಸ್‌ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಯಶಸ್ವಿ ಕಾರ್ಯಾಚರಣೆ ನಡೆಸಿದ ಇಡೀ ತಂಡದ ಕಾರ್ಯವೈಖರಿಯನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರದೀಪ ಗುಂಟಿ ಅಭಿನಂದಿಸಿದ್ದಾರೆ.

ಭವಿಷ್ಯವನ್ನು ಹಾಳುಮಾಡಿಕೊಳ್ಳದಿರಿ:


ಅಕ್ರಮ ಮಾದಕ ವಸ್ತುಗಳ ಮಾರಾಟ, ಬೆಳೆ ಹಾಗೂ ಸರಬರಾಜು ವಿರುದ್ಧ ಖಡಕ್‌ ಎಚ್ಚರಿಕೆ ನೀಡಿರುವ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರದೀಪ ಗುಂಟಿ ಅವರು, ಸಾರ್ವಜನಿಕರು ಇಂತಹ ಚಟುವಟಿಕೆಗಳಲ್ಲಿ ತೊಡಗಿ ತಮ್ಮ ಭವಿಷ್ಯವನ್ನು ಹಾಳುಮಾಡಿಕೊಳ್ಳಬಾರದು, ಬೀದರ್‌ ಜಿಲ್ಲೆಯನ್ನು ಸಂಪೂರ್ಣವಾಗಿ ''''''''''''''''ನಶಾ ಮುಕ್ತ ಜಿಲ್ಲೆ''''''''''''''''ಯನ್ನಾಗಿಸಲು ಶ್ರಮಿಸೋಣ ಎಂದು ಮನವಿ ಮಾಡಿದ್ದಾರೆ.