ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ಭಾರತದ ಸಾಂಪ್ರದಾಯಿಕ ಕ್ರೀಡೆಯಾಗಿರುವ ಖೋಖೋ ಪಂದ್ಯವೂ ಏಕಾಗ್ರತೆ, ದೇಹಕ್ಕೆ ಉತ್ತಮ ವ್ಯಾಯಾಮ ಹಾಗೂ ಸಮಯಚಿತ್ತ ಕಾಪಾಡಿಕೊಳ್ಳಲು ಉಪಯುಕ್ತವಾಗಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ಸಂಸದ ಶ್ರೇಯಸ್ ಎಂ ಪಟೇಲ್ ಅಭಿಪ್ರಾಯ ವ್ಯಕ್ತಪಡಿಸಿದರು.ತಾಲೂಕು ಮಾವಿನಕೆರೆಯ ಪ್ರಧಾನಮಂತ್ರಿ ಜವಹರಲಾಲ್ ನವೋದಯ ವಿದ್ಯಾಲಯದ ಆವರಣದಲ್ಲಿ ಆಯೋಜಿಸಿರುವ 34ನೇ ರಾಷ್ಟ್ರೀಯ ಖೋ ಖೋ ಟೂರ್ನಿ ಉದ್ಘಾಟಿಸಿ ಮಾತನಾಡಿದರು. ಹಾಸನ ಜಿಲ್ಲೆಯ ನವೋದಯ ವಿದ್ಯಾಲಯದಲ್ಲಿ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟ ನಡೆಸಲು ಅವಕಾಶ ದೊರೆತಿರುವುದು ಸಂತಸ ತಂದಿದೆ, ಕ್ರೀಡಾಕೂಟ ಯಶಸ್ವಿಯಾಗಲಿ ಎಂದು ಹಾರೈಸಿದರು. ಎಲ್ಲ ರಾಜ್ಯದಿಂದಲೂ ಪ್ರತಿಭಾವಂತ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದಾರೆ ಮತ್ತು ರಾಷ್ಟ್ರೀಯ ಚಾಂಪಿಯನ್ ಆಗುವುದು ಸುಲಭವಲ್ಲ, ಅದಕ್ಕೆ ಸರಿಯಾದ ತರಬೇತಿ ಹಾಗೂ ಕ್ರೀಡೆಯ ಮೇಲೆ ಆಸಕ್ತಿ ಇರಬೇಕು ಎಂದು ತಿಳಿಸಿ, ಇಂದಿನ ಯುವ ಜನತೆ ಮುಂದಿನ ನಾಯಕರು ಆದ್ದರಿಂದ ಶಿಸ್ತಿನಿಂದ ಕ್ರೀಡಾಕೂಟದಲ್ಲಿ ಭಾಗವಹಿಸಿ ಎಂದರು. ಕ್ರೀಡೆಯಲ್ಲಿ ಭಾಗವಹಿಸುವ ಎಲ್ಲ ವಿದ್ಯಾರ್ಥಿಗಳು ಕ್ರೀಡೆಯನ್ನು ಗೌರವಿಸಿ, ದೃಢ ನಿರ್ಧಾರದಿಂದ ಕ್ರೀಡೆಯಲ್ಲಿ ಭಾಗವಹಿಸಿ, ಎಂದಿಗೂ ಕ್ರೀಡೆಯ ಮೇಲಿನ ಆಸಕ್ತಿ ಕಳೆದುಕೊಳ್ಳಬೇಡಿ ಎಂದು ಸಲಹೆ ನೀಡಿದರು. ನವೋದಯ ಶಾಲೆಯಲ್ಲಿ ಓದುತ್ತಿರುವ ಎಲ್ಲ ವಿದ್ಯಾರ್ಥಿಗಳು ಅವರದ್ದೇ ಆದ ಸಾಧನೆ ಮಾಡಿದ್ದಾರೆ ಎಂದು ತಿಳಿಸಿದರು.
₹ 4.5 ಕೋಟಿ ಅನುದಾನ ಬಿಡುಗಡೆಕೇಂದ್ರ ಸರ್ಕಾರಕ್ಕೆ ಮಾವಿನಕೆರೆ ನವೋದಯ ವಿದ್ಯಾಲಯದ ಅಭಿವೃದ್ಧಿಗಾಗಿ ಅನುದಾನ ಬಿಡುಗಡೆಗೆ ಮನವಿ ಮಾಡಲಾಗಿತ್ತು. 4.5 ಕೋಟಿ ರು. ಅನುದಾನ ಬಿಡುಗಡೆ ಮಾಡಿದೆ. ಈ ನಿಟ್ಟಿನಲ್ಲಿ ಸರ್ಕಾರಕ್ಕೆ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದರು. 6ನೇ ತರಗತಿ ಪ್ರವೇಶಕ್ಕೆ ಪ್ರತಿವರ್ಷ ನಡೆಸುವ ಪರೀಕ್ಷೆಯಲ್ಲಿ ಯಶಸ್ಸು ಗಳಿಸಲು ಪೂರ್ವ ತಯಾರಿ ನಡೆಸಿ, ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ನವೋದಯ ಶಾಲೆಯಲ್ಲಿ ಪ್ರವೇಶ ಪಡೆದುಕೊಂಡು ಉಚಿತ ಶಿಕ್ಷಣ ಪಡೆಯಿರಿ ಎಂದು ಜಿಲ್ಲೆಯ ವಿದ್ಯಾರ್ಥಿಗಳಿಗೆ ತಿಳಿಸಿದರು.
ವಿವಿಧ ರಾಜ್ಯಗಳ ೮೦೦ ಕ್ರೀಡಾಪಟುಗಳು ಭಾಗಿ: ತಾಲೂಕು ಮಾವಿನಕೆರೆಯ ಪ್ರಧಾನ ಮಂತ್ರಿ ಜವಹರಲಾಲ್ ನವೋದಯ ವಿದ್ಯಾಲಯದ ಆವರಣದಲ್ಲಿ ಆಯೋಜಿಸಿರುವ ೩೪ನೇ ರಾಷ್ಟ್ರೀಯ ಖೋ ಖೋ ಕ್ರೀಡಾಕೂಟದಲ್ಲಿ ಅಹಮದಾಬಾದ್, ಬೋಪಾಲ್, ಭುವನೇಶ್ವರ್, ಚಂಡಿಗಡ, ಹೈದರಾಬಾದ್, ಜೈಪುರ, ಲಕ್ನೋ, ಪಾಟ್ನಾ, ಪುಣೆ ಹಾಗೂ ಶಿಲಾಂಗ್ ರಾಜ್ಯದ ನವೋದಯ ವಿದ್ಯಾಲಯದ 800 ಕ್ರೀಡಾಪಟುಗಳು ಭಾಗವಹಿಸಿದ್ದಾರೆ.
ಪ್ರಾಂಶುಪಾಲ ಎನ್. ಜನಾರ್ಧನ್, ಹೈದರಾಬಾದ್ ಭಾಗದ ಸಹಾಯಕ ಆಯುಕ್ತ ಚಕ್ರವರ್ತಿ, ಮಹಾನಗರ ಪಾಲಿಕೆ ಎಂಜಿನಿಯರ್ ಕವಿತಾ, ಶಿಕ್ಷಕರಾದ ಪ್ರವೀಣ್ ಕುಮಾರ್, ಲಕ್ಷ್ಮಣ್, ಮಂಗಳಾ, ಇತರರು
ಉಪಸ್ಥಿತರಿದ್ದರು.