ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಜಿಲ್ಲೆಯ ಇಳಕಲ್ಲ ತಾಲೂಕಿನ ಬಲಕುಂದಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಗೇಟ್ ಬಿದ್ದು ಶಾಲಾ ಮಕ್ಕಳು ಗಾಯಗೊಂಡ ಪ್ರಕರಣದಲ್ಲಿ ನಯನಾಕುಮಾರಿ ಎಂಬ ಶಾಲಾ ಬಾಲಕಿಗೆ ತೀವ್ರ ಗಾಯವಾಗಿದ್ದು, ಬಾಗಲಕೋಟೆಯ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಮೂರನೇ ತರಗತಿಯಲ್ಲಿ ಓದುತ್ತಿದ್ದ ಬಾಲಕಿ ಮೇಲೆ ಗೇಟ್ ಬಿದ್ದು, ತೀವ್ರವಾಗಿ ಗಾಯಗೊಂಡ ವಿದ್ಯಾರ್ಥಿನಿ ನಯನಾಕುಮಾರಿ ಅವರನ್ನು ಮೊದಲು ಇಳಕಲ್ಲ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬಾಗಲಕೋಟೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಘಟನೆಯಲ್ಲಿ ಮೂವರು ಮಕ್ಕಳು ಸೇರಿದಂತೆ ಓರ್ವ ಶಾಲಾ ಆಯಾಳಿಗೂ ಗಾಯವಾಗಿದೆ.

ನಯನಾಕುಮಾರಿಗೆ ಮಾತ್ರ ಹೆಚ್ಚಿನ ಗಾಯವಾಗಿದ್ದು ಆಸ್ಪತ್ರೆಗೆ ಭೇಟಿ ನೀಡಿದ ಇಲಕಲ್ ಬಿಇಒ ಜಾಸ್ಮಿನ್ ಕಿಲ್ಲೇದಾರ್ ಅವರು ವಿದ್ಯಾರ್ಥಿನಿಯ ಆರೋಗ್ಯ ವಿಚಾರಿಸಿದರು. ಉತ್ತರಪ್ರದೇಶದಿಂದ ಬಲಕುಂದಿಗೆ ಬಂದು ನೆಲೆಸಿರುವ ನಯನಾಕುಮಾರಿ ಪಾಲಕರು ಟೈಲ್ಸ್ ಫ್ಯಾಕ್ಟರಿಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ.