ಗದಗ: ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ಗುರುವಾರ ತ್ಯಾಗ, ಬಲಿದಾನದ ಸಂಕೇತವಾಗಿರುವ ಬಕ್ರೀದ್ ಹಬ್ಬವನ್ನು ಮುಸಲ್ಮಾನರು ಶ್ರದ್ಧಾ ಭಕ್ತಿಯಿಂದ ಆಚರಿಸಿದರು.ಇಲ್ಲಿಯ ಹಿರೇಮಸೂತಿಯಿಂದ ಬಜಾರ ರಸ್ತೆಯ ಮೂಲಕ ಮೆರವಣಿಗೆ ಮೂಲಕ ತೆರಳಿದ ಮುಸಲ್ಮಾನರು ಹಾತಲಗೇರಿ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ಸೇರಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಪ್ರಾರ್ಥನೆ ನೇತೃತ್ವ ವಹಿಸಿದ್ದ ಹಾಪೀಸ್ ಸಲೀಂ ಅವರು ವಿಧಿ ವಿಧಾನಗಳೊಂದಿಗೆ ಪ್ರಾರ್ಥನೆ ನಡೆಸಿಕೊಟ್ಟರು. ಈ ವೇಳೆ ಮಾತನಾಡಿದ ಅವರು, ತ್ಯಾಗ, ಬಲಿದಾನ ಸಂಕೇತವಾದ ಬಕ್ರೀದ್ ಹಬ್ಬವು ಮುಸಲ್ಮಾನರಿಗೆ ಮಹತ್ವದ ಆಚರಣೆಯಾಗಿದೆ. ಆದ್ದರಿಂದ ತಮ್ಮಲ್ಲಿರುವ ಹಣ, ಸಂಪತ್ತು ಮತ್ತು ವಸ್ತುಗಳನ್ನು ಬಡವರಿಗೆ ದಾನ ಮಾಡುವ ಮೂಲಕ ದಾನ, ಧರ್ಮದ ಹಾದಿಯಲ್ಲಿ ನಡೆದುಕೊಳ್ಳಬೇಕು ಎಂದರು.

ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡು ಶೃದ್ಧೆಯಿಂದ ಬಕ್ರೀದ್ ಆಚರಿಸಿದರು. ಇದೇ ಸಂದರ್ಭದಲ್ಲಿ ಮುಸ್ಲಿಮ್ ಜಮಾತ್(ಆಡಳಿತ)ಅಂಜುಮನ್ ಏ ಇಸ್ಲಾಮ್ ಕಮಿಟಿ ಆಶ್ರಯದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದ ಮುಸಲ್ಮಾನ ಸಮುದಾಯದ ವಿದ್ಯಾರ್ಥಿಗಳಾದ ರಿಯಾಜ್ ಕದಡಿ, ರಾಜಾಭಕ್ಷಿ ಮಾಲ್ದಾರ, ಮಿರಾಜಖಾನ್ ಮಸೂತಿಮನಿ, ಜಂದಿಸಾಬ ಗುಂಗಳಕರ್ ಅವರನ್ನು ಸನ್ಮಾನಿಸಲಾಯಿತು. ಕಮಿಟಿಯ ಅಧ್ಯಕ್ಷರು, ಉಪಾಧ್ಯಕ್ಷರು, ಪದಾಧಿಕಾರಿಗಳು ಇದ್ದರು.

ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ


ರೋಣ: ತ್ಯಾಗ, ಬಲಿದಾನ ಸಂಕೇತವಾದ ಬಕ್ರೀದ್ ಹಬ್ಬದ ನಿಮಿತ್ತ ಮುಸ್ಲಿಮರು ಪಟ್ಟಣದ ಶಿವಪೇಟಿ 6ನೇ ಕ್ರಾಸ್ ಮಸೀದಿ, ಪೋತದಾರ ರಾಜನಕಟ್ಟೆ ಬಳಿ ಮಸೀದಿ, ಬಸ್ ನಿಲ್ದಾಣ ಸಮೀಪದ ಮಸೀದಿ, ಮುದೇನಗುಡಿ ರಸ್ತೆಯಲ್ಲಿನ‌ ಮಸೀದಿ ಸೇರಿದಂತೆ ವಿವಿಧ ಮಸೀದಿಗಳಲ್ಲಿ ಗುರುವಾರ ಸಾಮೂಹಿಕ‌ ಪ್ರಾರ್ಥನೆ ಸಲ್ಲಿಸಿದರು.ಪ್ರತಿವರ್ಷ ಪಟ್ಟಣದ ಅಂಜುಮನ್ ಪ್ರೌಢಶಾಲೆ ಆವರಣದಲ್ಲಿ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸುತ್ತಾ ಬಂದಿದ್ದರು. ಆದರೆ ಕಳೆರಡು ದಿನದಿಂದ ಸುರಿದ ಮಳೆಯಿಂದ ಶಾಲಾ ಆವರಣದಲ್ಲಿ ನೀರು ನಿಂತಿದ್ದರಿಂದ ಈ ಬಾರಿ ಆಯಾ ಮಸೀದಿಗಳಲ್ಲಿಯೇ ಪ್ರಾರ್ಥನೆ ಸಲ್ಲಿಸಲಾಯಿತು.ಈದ್ ಕುತಬಾ ಪ್ರವಚನವನ್ನು ಕರ್ನಾಟಕ ಜಮಾತ್ ಇಸ್ಲಾಂಹಿ ಹಿಂದ್ ರಾಜ್ಯ ಸಹ ಕಾರ್ಯದರ್ಶಿ ರಿಯಾಜ ಅಹ್ಮದ ಇಟಗಿ, ಅಬ್ದುಲ್‌ ಬಸೀರ ತರಪದಾರ ನೀಡಿದರು.ಪ್ರಾರ್ಥನೆಯಲ್ಲಿ ಬಾಷಾಸಾಬ ಇಟಗಿ, ಯೂಸೂಫ ಇಟಗಿ, ಫೈಜ ಅಹ್ಮದ ಕಲಾದಗಿ, ಇನಾಯತ್ ತರಪದಾರ, ಅಬೂಬಕರ ತರಪದಾರ, ಹಸನಸಾಬ ತಹಶೀಲ್ದಾರ, ಎ.ಬಿ. ಅತ್ತಿಗೇರಿ, ಇಬ್ರಾಹಿಂಸಾಬ ಕರ್ನಾಚಿ, ಮಹಬೂಬ ಬಿಲ್ಲುಖಾನ್, ರಸೀದ ದಳವಾಯಿ ಮುಂತಾದವರು ಪಾಲ್ಗೊಂಡಿದ್ದರು.