ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಿ

| Published : Jun 13 2024, 12:50 AM IST

ಸಾರಾಂಶ

ಶ್ರೀರಂಗಪಟ್ಟಣದಲ್ಲಿ ನಡೆದ ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನಾಚರಣೆ ಜಾಥಾಕ್ಕೆ 3ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಟಿ.ಗೋಪಾಲಕೃಷ್ಣ ರೈ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣಮಕ್ಕಳನ್ನು ಬಾಲ ಕಾರ್ಮಿಕರನ್ನಾಗಿ ದುಡಿಯಲು ಬಳಸಿಕೊಳ್ಳದೆ ಒಳ್ಳೆಯ ಶಿಕ್ಷಣ ಕೊಡಿಸುವ ಮೂಲಕ ಉತ್ತಮ ಪ್ರಜೆಯನ್ನಾಗಿ ಮಾಡುವಂತೆ ಅಪರ ಹಿರಿಯ ಸಿವಿಲ್ ನ್ಯಾಯಾಧೀಶ ಎಚ್.ಮಹದೇವಪ್ಪ ಕರೆ ನೀಡಿದರು.

ಅಂಬೇಡ್ಕರ್ ವೃತ್ತದಲ್ಲಿ ವಿಶ್ವ ಬಾಲಕಾರ್ಮಿಕ ವಿರೋಧಿ ದಿನಾಚರಣೆ ಅಂಗವಾಗಿ ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘ ಸೇರಿದಂತೆ ಇತರ ವಿವಿಧ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಬಾಲಕಾರ್ಮಿಕ ವಿರೋಧಿ ದಿನಾಚರಣೆ ಜಾಥಾದಲ್ಲಿ ಮಾತನಾಡಿದರು.ಪೋಷಕರ ಅಥವಾ ಇನ್ನಿತರ ಸನ್ನಿವೇಶಗಳ ಬಡತನ ಹಾಗೂ ಅನಕ್ಷರತೆಗಳ ಕಾರಣದಿಂದ ಮಕ್ಕಳು ಬಾಲಕಾರ್ಮಿಕರಾಗಿ ದುಡಿಯಲು ಬರುತ್ತಾರೆ. ಅಂತಹವರನ್ನು ಗುರುತಿಸಿ, ಸಂಬಂಧಿಸಿದ ಇಲಾಖೆ ಮೂಲಕ ಅವರಿಗೆ ವಿದ್ಯಾಭ್ಯಾಸ ನೀಡಲು ಪೋಷಕರಿಗೆ ತಿಳಿ ಹೇಳಿ ಎಂದರು.ಬಾಲಕಾರ್ಮಿಕ ಅನಿಷ್ಠ ಪದ್ದತಿಯನ್ನು ತೊಲಗಿಸಲು ಎಲ್ಲರೂ ಸಹಕರಿಸಬೇಕು. ಯಾವುದೇ ಹೋಟೆಲ್, ಅಂಗಡಿ, ಇತರ ಸಂಸ್ಥೆಗಳಲ್ಲಿ 14 ವರ್ಷ ಕೆಳಗಿನವರು ದುಡಿಯಲು ಬಂದರೆ ಅವರಿಗೆ ತಿಳಿ ಹೇಳುವ ಮೂಲಕ ಅವರನ್ನು ಉತ್ತಮ ಪ್ರಜೆಗಳಾಗುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು. ಇದಕ್ಕೂ ಮುನ್ನ ನ್ಯಾಯಾಲಯದ ಆವರಣದಿಂದ ಜಾಥಾ ಮೆರವಣಿಗೆಗೆ 3ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧಿಶ ಗೋಪಾಲಕೃಷ್ಣ ರೈ.ಟಿ ಚಾಲನೆ ನೀಡಿ, ಪ್ರತಿಜ್ಞಾ ವಿಧಿ ಬೋಧಿಸಿದರು. ತಹಸೀಲ್ದಾರ್ ಪರುಶುರಾಮ್ ಸತ್ತಿಗೇರಿ ಅಧ್ಯಕ್ಷತೆ ವಹಿಸಿದ್ದರು.

ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶೆ ರೂಪ ಎಂ,ಡಿ, ಅಪರ ಸಿವಿಲ್ ನ್ಯಾಯಾಧೀಶ ಹನುಮಂತರಾಯಪ್ಪ ಬಿ.ಆರ್ ಕಾರ್ಯಕ್ರಮ ಕುರಿತು ಮಾತನಾಡಿದರು. ಹಿರಿಯ ವಕೀಲ ಸಿದ್ದೇಶ್ ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನಾಚರಣೆ ಕುರಿತು ಉಪನ್ಯಾಸ ನೀಡಿದರು. ಈ ವೇಳೆ ವಕೀಲರ ಸಂಘದ ಅಧ್ಯಕ್ಷ ಸತ್ಯನಾರಾಯಣ್, ಪ್ರಧಾನ ಕಾರ್ಯದರ್ಶಿ ಪವನ್‌ಗೌಡ, ತಾಪಂ ಇಒ ವೇಣು, ಬಿಇಒ ಮಹೇಶ್, ಕಾರ್ಮಿಕ ಇಲಾಖೆಯ ಹೇಮಚಂದ್ರ, ಪುರಸಭೆ ಮುಖ್ಯಾಧಿಕಾರಿ ರಾಜಣ್ಣ .ಎಂ, ವಕೀಲರ ಸಂಘದ ಉಪಾಧ್ಯಕ್ಷ ಮಂಜುನಾಥ್, ಖಜಾಂಚಿ ವಿನಯ್, ತಾಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿ ವರ್ಗ ಸೇರಿದಂತೆ ಶಾಲಾ ವಿದ್ಯಾರ್ಥಿಗಳು ಮೆರವಣಿಗೆ ನಡೆಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.