ಶಿಗ್ಗಾಂವಿ: ತಾಲೂಕಿನ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಹಗರಣ, ಆಡಳಿತ ದುರುಪಯೋಗಳ ಕುರಿತು ಕ್ರಮ ಕೈಗೊಳ್ಳಬೇಕು ಎಂದು ರಾಜ್ಯಪಾಲರಿಗೆ ಶಿಗ್ಗಾಂವಿಯ ಗಾನಯೋಗಿ ಪಂಡಿತ ಪುಟ್ಟರಾಜರ ಗವಾಯಿಗಳವರ ಕಲಾ ಸಂಸ್ಥೆಯ ಪದಾಧಿಕಾರಿಗಳು ತಹಸೀಲ್ದಾರ್ ಮೂಲಕ ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ.
ತಾಲೂಕಿನ ಗೊಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ತನ್ನ ಮೂಲ ಜನಪದ ಉದ್ದೇಶ ಬಿಟ್ಟು ಇತರೆ ಜನಪದಕ್ಕೆ ಸಂಬಂಧ ಪಡದ ಕೋರ್ಸ್ಗಳನ್ನು ಆರಂಭಿಸಿ ಅನೇಕ ಪರೀಕ್ಷಾ ಹಗರಣ, ಅಕ್ರಮ ನೇಮಕಾತಿ, ಆಡಳಿತ ವಿರೋದಿ, ಸಿಬ್ಬಂದಿ ತಾರತಮ್ಯದಲ್ಲಿ ಮುಳಗಿಹೋಗಿದೆ, ಜನಪದ ಸಂಸ್ಕೃತಿ ಉಳಿಸುವ ಉದ್ದೇಶ ಬಿಟ್ಟು ಅವಾಚ್ಯ ಪದಗಳ ನಿಂದನೆ, ಅತ್ಯಾಚಾರದಂತ ಪ್ರಕರಣಗಳು ಅನೇಕ ಬಾರಿ ಸುದ್ದಿ ಮಾಧ್ಯಮಗಳಲ್ಲಿ ಬಿತ್ತರವಾಗಿದೆ.ಈ ಪರಿಸರದ ಕಲೆ, ಕಲಾವಿದರ ಬಳಗದಲ್ಲಿ ಬೇಸರ ತರಿಸಿದೆ, ಮೂಲ ಜನಪದದ ಅಧ್ಯಯನ ಮಾಡಿದ ಪದವೀಧರರಿಗೆ ಯಾವುದೇ ಉದ್ಯೋಗ ಭರವಸೆಯಂತಹ ಚಿಂತನೆಯನ್ನೆ ಮಾಡದ ಸಿಂಡಿಕೇಟ್ ಸಮಿತಿ, ಕುಲಪತಿ ತಮ್ಮ ಸರ್ಕಾರಿ ವೇತನ, ಭತ್ಯೆ ಪಡೆಯುವುದರಲ್ಲಿ ಕಾಲಹರಣ ಮಾಡಿದ್ದಾರೆ. ಸರ್ಕಾರ ವಿಶ್ವವಿದ್ಯಾಲಯ ಕಟ್ಟಿದ ಆಶೋತ್ತರಗಳನ್ನು ಗಾಳಿಗೆ ತೂರಲಾಗಿದೆ.
ಈ ಎಲ್ಲ ವಿಷಯಗಳ ಬಗ್ಗೆ ತಾವು ಒಂದು ಸಮಿತಿಯನ್ನು ರಚನೆ ಮಾಡಿ ಕೂಲಂಕಶವಾಗಿ ಸಮಗ್ರ ತನಿಖೆ ಮಾಡಿ ತಮ್ಮ ಮಾರ್ಗದರ್ಶನದಲ್ಲಿ ಮುಂದಿನ ದಿನಗಳಲ್ಲಿ ವಿಶ್ವವಿದ್ಯಾಲಯ ತನ್ನ ಘನತೆ ಗೌರವ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡುವಂತಾಗಲಿ ಎಂದು ಮನವಿ ಮಾಡಿ ಆಗ್ರಹಿಸಿಕೊಂಡಿದ್ದಾರೆ.ಈ ಸಂದರ್ಭದಲ್ಲಿ ಗಾನಯೋಗಿ ಪಂಡಿತ ಪುಟ್ಟರಾಜ ಗವಾಯಿಗಳ ಸಂಸ್ಥೆಯ ಅಧ್ಯಕ್ಷ ಫಕ್ಕೀರಪ್ಪ ರಾ. ಕೊಂಡಾಯಿ, ಗೌರವಾಧ್ಯಕ್ಷ ಕೊಟ್ರಪ್ಪ ಕೊಟ್ರಪ್ಪನವರ, ಉಪಾಧ್ಯಕ್ಷ ವಿರೂಪಾಕ್ಷಪ್ಪ ಎಸ್. ಐಗಾಡೆ, ಕಾರ್ಯದರ್ಶಿ ಶಿವಾನಂದ ಮ. ಹೊಸಮನಿ, ಧರೆಪ್ಪಗೌಡ ಪಾಟೀಲ, ಬಸವರಾಜ, ಶಂಕರ ಕೃ, ಅರ್ಕಸಾಲಿ, ಶೇಖಪ್ಪ ಜೋಳದ, ಚಂದ್ರಶೇಖರ ಕಮಡೊಳ್ಳಿ, ಚಿನ್ನಪ್ಪ ಕುಂದಗೋಳ, ರಮೇಶ ಸಾತಣ್ಣವರ, ಅಶೋಕ ರಾ. ಕುರುಬರ, ಬಿ. ಎಚ್. ಚಲವಾದಿ, ಎಸ್. ಬಿ. ಅಯ್ಯಣ್ಣವರ, ಶಶಿಧರ ಹೊಣ್ಣನವರ, ಸಂತೋಷ ಪಾಟೀಲ, ಕರೆಪ್ಪ ಕಟ್ಟಿಮನಿ, ಬಸವರಾಜ ಗೊಬ್ಬಿ ಸೇರಿದಂತೆ ಹವಾರು ಕಲಾವಿದರು ಮನವಿ ಸಲ್ಲಿಸಿದರು.