ಸಾರಾಂಶ
ಶಿರಹಟ್ಟಿ: ಗೌರಿಗಣೇಶ ಹಾಗೂ ಈದ್ ಮಿಲಾದ್ ಹಬ್ಬವನ್ನು ಶಾಂತಿಯುತ ಹಾಗೂ ಪರಿಸರಕ್ಕೆ ಹಾನಿಯಾಗದಂತೆ ಆಚರಿಸುವಂತೆ ಶಿರಹಟ್ಟಿ ಪೊಲೀಸ್ ಠಾಣೆ ಸಿಪಿಐ ನಾಗರಾಜ ಮಾಡಳ್ಳಿ ಕರೆ ನೀಡಿದರು. ಗುರುವಾರ ಸಂಜೆ ಪಟ್ಟಣದ ತಾಲೂಕು ಪಂಚಾಯತ ಸಾಮರ್ಥ್ಯ ಸೌಧದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಗೌರಿಗಣೇಶ ಹಾಗೂ ಈದ್ ಮಿಲಾದ್ ಹಬ್ಬ ಆಚರಣೆ ಮಾಡುವ ಪ್ರಯುಕ್ತ ಜರುಗಿದ ಶಾಂತಿ ಸಭೆಯಲ್ಲಿ ಮಾತನಾಡಿದರು. ಹಬ್ಬದ ಆಚರಣೆಯಲ್ಲಿ ಕೆಲವರು ವೈಯಕ್ತಿಕ ದ್ವೇಷದಿಂದ ಗಲಾಟೆ ಮಾಡುತ್ತಾರೆ. ಇದು ಆಗಬಾರದು. ಶಾಂತಯುತವಾಗಿ ಆಚರಿಸಬೇಕು. ಗಣೇಶ ವಿಸರ್ಜನೆ ವೇಳೆ ಸಾಂಪ್ರದಾಯಿಕ ಮಜಲುಗಳ ಮೂಲಕ ವಿಸರ್ಜನೆ ಮಾಡಬೇಕು ಎಂದರು. ಕಾನೂನಿಗಿಂತ ಯಾರೂ ದೊಡ್ಡವರಿಲ್ಲ. ಅಹಿತಕರ ಘಟನೆಗಳು ನಡೆಯದಂತೆ ಜಾಗೃತಿ ವಹಿಸಬೇಕು. ಎಲ್ಲರೂ ಹೆಸ್ಕಾಂ, ಅಗ್ನಿಶಾಮಕ, ಪಪಂ ಹಾಗೂ ಪೊಲೀಸ್ ಇಲಾಖೆಯಿಂದ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಪರವಾನಗಿ ಪಡೆಯಬೇಕು ಎಂದರು. ಗೌರಿ ಗಣೇಶನ ಮೂರ್ತಿ ಪ್ರತಿಷ್ಠಾಪನೆ ಮಾಡುವ ಸಂಘ ಸಂಸ್ಥೆಗಳು ಮುಂಜಾಗೃತಾ ಕ್ರಮ ಕೈಗೊಳ್ಳಬೇಕು. ಗಣೇಶ ಹಬ್ಬವನ್ನು ಶಾಂತಿ-ಶಿಸ್ತಿನಿಂದ ಆಚರಿಸಬೇಕು. ಕಾನೂನು ಉಲ್ಲಂಘಿಸಿದರೆ ಸರ್ಕಾರ ಹಾಗೂ ಮೇಲಾಧಿಕಾರಿಗಳ ನಿರ್ದೇಶನದಂತೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು. ಪ್ರತಿ ಹಬ್ಬದ ಹಿಂದೆ ಪೌರಾಣಿಕ, ಐತಿಹಾಸಿಕ ಹಿನ್ನೆಲೆ ಇರುತ್ತದೆ. ಹಬ್ಬಗಳನ್ನು ಸೌಹಾರ್ದತೆಯಿಂದ ಆಚರಿಸಬೇಕು. ಇನ್ನೊಬ್ಬರ ಭಾವನೆಗಳಿಗೆ ಧಕ್ಕೆ ತರುವುದಾಗಲಿ ಅವಹೇಳನ ಮಾಡುವುದಾಗಲಿ ಮಾಡುವಂತಿಲ್ಲ. ಶಾಂತಿ ಸುವ್ಯವಸ್ಥೆ ಕದಡುವ ಕೆಲಸ ಮಾಡಬಾರದು. ಪರಿಸರ ಸ್ನೇಹಿಯಾಗಿ ಶಾಂತಿಯುತವಾಗಿ ಆಚರಿಸಲು ಪ್ರತಿಯೊಬ್ಬರೂ ಸಹಕರಿಸಬೇಕು. ಗಣೇಶ ಪ್ರತಿಷ್ಠಾಪನೆಯ ಪೆಂಡಾಲುಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ ಕಡ್ಡಾಯವಾಗಿದ್ದು, ಮಂಡಳಿಯ ಸದಸ್ಯರು ಕಾರ್ಯಕರ್ತರ ಹೆಸರು ಹಾಗೂ ಪೋನ್ ನಂಬರ್ಗಳನ್ನು ಪೊಲೀಸ್ ಠಾಣೆಗೆ ನೀಡಬೇಕು ಎಂದು ಸಲಹೆ ಮಾಡಿದರು. ಗಣೇಶ ಹಬ್ಬದಲ್ಲಿ ಪರಿಸರ ಸ್ನೇಹಿ ಗಣೇಶನನ್ನು ಕೂರಿಸಬೇಕು. ಕನಿಷ್ಠ ಶಬ್ದದ ಧ್ವನಿ ವರ್ಧಕಗಳನ್ನು ಬಳಸಿ. ಕಡಿಮೆ ವಿದ್ಯುತ್ ಬಳಕೆ ಮಾಡಿದರೆ ಉತ್ತಮ. ಹೊಸ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ, ಟ್ರಾಫಿಕ್ ತೊಂದರೆ ಮಾಡಬೇಡಿ. ಹಬ್ಬಗಳು ವಿಶ್ವಾಸ, ಬಾಂಧವ್ಯ ಪ್ರೀತಿಯನ್ನು ಕೆಡಿಸುವ ರೀತಿಯಲ್ಲಿ ನಡೆಯಬಾರದು. ಹಬ್ಬಗಳ ಆಚರಣೆ ಉತ್ಸವಕ್ಕೆ ಕಾರಣವಾಗಬೇಕು ಎಂದು ಹೇಳಿದರು.ಹಬ್ಬದಲ್ಲಿ ಯಾವುದೇ ರೀತಿಯ ಡಿಜೆ ಹಚ್ಚಲು ಅವಕಾಶ ಇರುವುದಿಲ್ಲ. ಮೆರವಣಿಗೆಯಲ್ಲಿ ಕಲಾವಿದರನ್ನು ಕರೆಸಿ ವಿಜೃಂಭಣೆಯಿಂದ ಹಬ್ಬ ಆಚರಿಸಲು ಸೂಚನೆ ನೀಡಿದರು. ಕಾರ್ಯಕ್ರಮದ ಬಗ್ಗೆ ಮತ್ತು ಪಾಲ್ಗೊಳ್ಳಲಿರುವ ಅತಿಥಿ ಮಹೋದಯರ ಬಗ್ಗೆ ಮಾಹಿತಿ ನೀಡಬೇಕು. ಗಣೇಶ ವಿಸರ್ಜನೆ ಮೆರವಣಿಗೆ ಮಾರ್ಗದ ವಿವರ ನೀಡಬೇಕು. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿರುವಂತೆ ಮಣ್ಣಿನಿಂದ ಮಾಡಿದ ಬಣ್ಣರಹಿತ ಪರಿಸರಸ್ನೇಹಿ ಮೂರ್ತಿಗಳನ್ನು ಮಾತ್ರ ಪ್ರತಿಷ್ಠಾಪಿಸಬೇಕು. ವಿಸರ್ಜನೆಗೆ ಮೊದಲು ಅಲಂಕಾರಿಕ ವಸ್ತುಗಳನ್ನು ತೆಗೆಯಬೇಕು ಎಂದು ಸೂಚನೆ ನೀಡಿದರು. ಕಾನೂನು ಸುವ್ಯವಸ್ಥೆಗೆ ಅಡೆತಡೆ ಆಗದಂತೆ ಹಬ್ಬ ಆಚರಣೆಗೆ ಮುಂದಾಗಬೇಕು. ಕಾನೂನು ಪರಿಮಿತಿಯಲ್ಲಿ ಯಾರಭಾವನೆಗಳಿಗೂ ಧಕ್ಕೆಯಾಗದಂತೆ ಹಬ್ಬ ಆಚರಣೆಗೆ ಮುಂದಾಗಬೇಕು. ಡಿಜೆ ಹಚ್ಚುವ ನೆಪದಲ್ಲಿ ಮತ್ತು ಅದರ ಖುಷಿಯಲ್ಲಿ ಕಾನೂನುಬಾಹಿರ ಚಟುವಟಿಕೆ ನಡೆಯಬಾರದು ಎಂದು ಸೂಚನೆ ನೀಡಿದರು.
ಕ್ರೈಂ ಪಿಎಸ್ಐ ಶೇಖರ ಕಡಬಿನ, ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಹೊನ್ನಪ್ಪ ಶಿರಹಟ್ಟಿ, ಪರಮೇಶ ಪರಬ, ಅಸರಹತ ಢಾಲಾಯತ, ಶವಕತಲಿ ಮನಿಯಾರ, ಅಕಬರ ಯಾದಗಿರಿ, ವಿಠಲ ಬಿಢವೆ, ಸಂತೋಷ ತೋಡೇಕಾರ ಹಾಗೂ ಗಣೇಶ ಕಮೀಟಿ ಸದಸ್ಯರು ಮತ್ತು ಅಂಜುಮನ್ ಕಮಿಟಿ ಅಧ್ಯಕ್ಷರು, ಸದಸ್ಯರು, ಪೊಲೀಸ್ ಇಲಾಖೆ ಸಿಬ್ಬಂದಿ ಇದ್ದರು.