- ಸಾಣೇಹಳ್ಳಿ ಶ್ರೀ ಸಲಹೆಯಂತೆ ಮಾದಾರ ಚನ್ನಯ್ಯ ಶ್ರೀ ಜೊತೆ ಚರ್ಚೆ, ಗೊಂದಲ ಸುಖಾಂತ್ಯ: ವೀರಭದ್ರಪ್ಪ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಚಿತ್ರದುರ್ಗದ ಶ್ರೀ ಮಾದಾರ ಚನ್ನಯ್ಯ ಗುರುಪೀಠದ ಶಾಖಾ ಮಠವನ್ನು ದಾವಣಗೆರೆ, ಹರಿಹರ ಅಥವಾ ಕೊಂಡಜ್ಜಿಯಲ್ಲಿ ವಿಶಾಲ ಜಾಗದಲ್ಲಿ ನಿರ್ಮಿಸಲು ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ ಹಸಿರು ನಿ‍ಶಾನೆ ತೋರಿದ್ದಾರೆ. ಆ.15ಕ್ಕೆ ಶಾಖಾಮಠ ಸ್ಥಾಪನೆಗೆ ಭೂಮಿಪೂಜೆ ನೆರವೇರಲಿದೆ ಎಂದು ಜಿಲ್ಲಾ ಮಾದಿಗ ಸಮಾಜದ ಅಧ್ಯಕ್ಷ ಬಿ.ಎಚ್.ವೀರಭದ್ರಪ್ಪ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾದಿಗ ಮಹಾಸಂಸ್ಥಾನ ಪೀಠ ಸ್ಥಾಪನೆ ಬಗ್ಗೆ ನಾವೆಲ್ಲ ನಿರ್ಧರಿಸಿದ್ದೆವು. ಆದರೆ, ಸಾಣೇಹಳ್ಳಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ರಾಜ್ಯದಲ್ಲಿ ಮಾದಿಗ ಸಮುದಾಯ ದೊಡ್ಡದಿದೆ. ಹಿರಿಯೂರು ಆದಿಜಾಂಬವ ಪೀಠ, ಚಿತ್ರದುರ್ಗದ ಶ್ರೀ ಮಾದಾರ ಚನ್ನಯ್ಯ ಗುರುಪೀಠ ಸಮಾಜದ ಕಣ್ಣಿದ್ದಂತಿವೆ. ಪ್ರತ್ಯೇಕ ಪೀಠವು ಗೊಂದಲಕ್ಕೆ ಕಾರಣವಾಗುತ್ತದೆ. ನೀವು ಮಾದಾರ ಚನ್ನಯ್ಯ ಸ್ವಾಮೀಜಿ ಭೇಟಿ ಮಾಡುವಂತೆ ಹೇಳಿಕಳಿಸಿದ್ದರು ಎಂದರು.

ಫೆ.19ರಂದು ಚಿತ್ರದುರ್ಗದಲ್ಲಿ ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ ಅವರನ್ನು ಭೇಟಿ ಮಾಡಿದೆವು. ಆಗ ಸುಧೀರ್ಘವಾಗಿ ಚರ್ಚಿಸಿ, ಎಲ್ಲ ಗೊಂದಲಗಳೂ ತಿಳಿಯಾದವು. ಅಂತಿಮವಾಗಿ ಮಾದಾರ ಚನ್ನಯ್ಯ ಪೀಠದ ಶಾಖಾ ಮಠವನ್ನು ದಾವಣಗೆರೆ ಅಥವಾ ಹರಿಹರದಲ್ಲಿ ಸ್ಥಾಪಿಸಲು ಹಾಗೂ ಸಣ್ಣಪುಟ್ಟ ಜಾಗದ ಬದಲು ವಿಶಾಲ ಜಾಗದಲ್ಲಿ ಶಾಖಾ ಮಠ ಸ್ಥಾಪಿಸುವಂತೆ ಸೂಚಿಸಿದರು.


ಮೂಲ ಮಠದ ಪರಂಪರೆ, ಸಂಪ್ರದಾಯ, ನಿಯಮಾವಳಿಗೆ ಧಕ್ಕೆ ಆಗದಂತೆ ಶಾಖಾ ಮಠ ಸ್ಥಾಪಿಸಲು ಸಮಾಜದ ಹಿರಿಯರು ಸಚಿವರೊಂದಿಗೆ ಚರ್ಚಿಸಿ, ಮುಂದಿನ ಪ್ರಕ್ರಿಯೆ ಕೈಗೊಳ್ಳಿ ಅಂತಾ ಸೂಚನೆ ನೀಡಿದ್ದಾರೆ. ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ ಸೂಚನೆಯಂತೆ ಹಿರಿಯೂರು ಆದಿಜಾಂಬವ ಪೀಠದ ಶ್ರೀಗಳನ್ನೂ ಭೇಟಿ ಮಾಡುತ್ತೇವೆ. ದಾವಣಗೆರೆ ಜಿಲ್ಲೆಯ ಎಲ್ಲ ಮಾದಿಗ ಸಮುದಾಯದ ನಾಯಕರು, ಮುಖಂಡರು, ಯುವಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ದಾವಣಗೆರೆ ಜಿಲ್ಲಾ ಕೇಂದ್ರದ ಬಳಿ ಅಥವಾ ಹರಿಹರದ ತುಂಗಭದ್ರಾ ನದಿ ತಟ ಅಥವಾ ಕೊಂಡಜ್ಜಿಯ ಪ್ರಶಾಂತ ವಾತಾವರಣದಲ್ಲಿ ಶಾಖಾ ಮಠವನ್ನು ಎಲ್ಲರೂ ಸೇರಿ, ಸೌಹಾರ್ದದಿಂದ ಕಟ್ಟಲು ಮುಂದಾಗಿದ್ದೇವೆ. ಇದರಿಂದ ಈವರೆಗೆ ಉಂಟಾಗಿದ್ದ ಪೀಠ ಸ್ಥಾಪಿಸುವ ಗೊಂದಲಕ್ಕೂ ತೆರೆ ಎಳೆದಂತಾಗಿದೆ ಎಂದು ಬಿ.ಎಚ್.ವೀರಭದ್ರಪ್ಪ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಹಾಸಭಾ ಉಪಾಧ್ಯಕ್ಷ ಎಲ್.ಎಂ. ಹನುಮಂತಪ್ಪ, ಎಚ್.ಮಲ್ಲೇಶ, ಸಿ.ಬಸವರಾಜ, ಪ್ರಧಾನ ಕಾರ್ಯದರ್ಶಿ ಹೆಗ್ಗೆರೆ ರಂಗಪ್ಪ, ಖಜಾಂಚಿ ಎಸ್.ಮಲ್ಲಿಕಾರ್ಜುನ, ಬೇವಿನಹಳ್ಳಿ ಎ.ಕೆ. ಶಿವರಾಂ, ದೇವೇಂದ್ರಪ್ಪ ಹರಿಹರ, ಶಂಕರ, ಶಿರಮಗೊಂಡನಹಳ್ಳಿ ಎನ್‌.ನಿಂಗರಾಜ, ಕೊಪ್ಪಳ ಮಂಜುನಾಥ, ದುರುಗೇಶ ಇತರರು ಇದ್ದರು.

- - -

-20ಕೆಡಿವಿಜಿ6: ದಾವಣಗೆರೆಯಲ್ಲಿ ಶುಕ್ರವಾರ ಜಿಲ್ಲಾ ಮಾದಿಗ ಸಮಾಜ ಅಧ್ಯಕ್ಷ ಬಿ.ಎಚ್. ವೀರಭದ್ರಪ್ಪ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.