ಗ್ಯಾರಂಟಿ ಯೋಜನೆಗಳು ಸಂಪೂರ್ಣ ಅನುಷ್ಠಾನಗೊಂಡಿವೆ

| Published : Sep 07 2024, 01:34 AM IST / Updated: Sep 07 2024, 01:35 AM IST

ಸಾರಾಂಶ

ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳು ತಾಲೂಕಿನಲ್ಲಿ 54 ಸಾವಿರ ಮಂದಿ ಇದ್ದು, ಈ ಪೈಕಿ 51 ಸಾವಿರಮಂದಿಗೆ ಪ್ರತಿ ತಿಂಗಳು 2 ಸಾವಿರ ರು. ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಆಗಿದೆ. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ 5 ಗ್ಯಾರಂಟಿ ಯೋಜನೆಗಳು ತಾಲೂಕಿನಲ್ಲಿ ಶೇ.97ರಷ್ಟು ಅನುಷ್ಠಾನಗೊಂಡಿರುವುದು ಸಂತಸದ ಸಂಗತಿಯಾಗಿದೆ ಎಂದು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಪಿ.ಶ್ರೀಧರ್‌ ಗೌಡ ಮೆಚ್ಚುಗೆ ವ್ಯಕ್ತಪಡಿಸಿದರು. ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಗ್ಯಾರಂಟಿ ಯೋಜನೆ ಅನುಷ್ಠಾನ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಕುರಿತು ಸಮಿತಿ ಸದಸ್ಯರು ಜನ ಸಾಮಾನ್ಯರಲ್ಲಿ ಅರಿವು ಮೂಡಿಸಿ ಶೇ.100ರಷ್ಟು ಗುರಿ ಸಾಧಿಸಲು ಕಾರ್ಯಕ್ರಮ ರೂಪಿಸಬೇಕೆಂದು ಅವರು ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ ಅರಕಲಗೂಡು

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ 5 ಗ್ಯಾರಂಟಿ ಯೋಜನೆಗಳು ತಾಲೂಕಿನಲ್ಲಿ ಶೇ.97ರಷ್ಟು ಅನುಷ್ಠಾನಗೊಂಡಿರುವುದು ಸಂತಸದ ಸಂಗತಿಯಾಗಿದೆ ಎಂದು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಪಿ.ಶ್ರೀಧರ್‌ ಗೌಡ ಮೆಚ್ಚುಗೆ ವ್ಯಕ್ತಪಡಿಸಿದರು.

ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಗ್ಯಾರಂಟಿ ಯೋಜನೆ ಅನುಷ್ಠಾನ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಕುರಿತು ಸಮಿತಿ ಸದಸ್ಯರು ಜನ ಸಾಮಾನ್ಯರಲ್ಲಿ ಅರಿವು ಮೂಡಿಸಿ ಶೇ.100ರಷ್ಟು ಗುರಿ ಸಾಧಿಸಲು ಕಾರ್ಯಕ್ರಮ ರೂಪಿಸಬೇಕೆಂದು ಅವರು ಸಲಹೆ ನೀಡಿದರು.

ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳು ತಾಲೂಕಿನಲ್ಲಿ 54 ಸಾವಿರ ಮಂದಿ ಇದ್ದು, ಈ ಪೈಕಿ 51 ಸಾವಿರಮಂದಿಗೆ ಪ್ರತಿ ತಿಂಗಳು 2 ಸಾವಿರ ರು. ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಆಗಿದೆ. ಬಾಕಿ 2300 ಮಂದಿ ಇದ್ದು, ಇದನ್ನು ಒಂದು ತಿಂಗಳೊಳಗೆ ಬಗೆಹರಿಸಿ ಶೇ.100ರಷ್ಟು ಗುರಿಸಾಧಿಸುವ ಭರವಸೆಯನ್ನು ಸಿಡಿಪಿಒ ಅಧಿಕಾರಿ ವೆಂಕಟೇಶ್ ಅವರು ಸಭೆಗೆ ನೀಡಿದರು.

ತಿಂಗಳಿಗೆ ಅಂದಾಜು 10ಕೋಟಿಯಂತೆ ಇದುವರೆಗೂ ಒಟ್ಟು 113ಕೋಟಿ ರು. ಹಣ ಗೃಹ ಲಕ್ಷ್ಮಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಆಗಿದೆ ಎಂದು ವಿವರವನ್ನು ಸಭೆಗೆ ನೀಡಿದರು. ಅದೇ ರೀತಿ ತಾಲೂಕಿನಲ್ಲಿ ಒಟ್ಟು 55 ಸಾವಿರಮಂದಿ ಮನೆ ಬಳಕೆಯ ವಿದ್ಯುತ್ ಸಂಪರ್ಕವನ್ನು ಹೊಂದಿದ್ದು, ಈ ಪೈಕಿ 54ಸಾವಿರ ಮಂದಿಗೆ ಗೃಹಜ್ಯೋತಿ ಪ್ರಯೋಜನ ಸಿಕ್ಕಿದೆ. ಶೇ.99ರಷ್ಟು ಗುರಿಹೊಂದಲಾಗಿದೆ. ಬಾಕಿ 618 ಮಂದಿ ದಾಖಲೆಗಳನ್ನು ಸರಿಪಡಿಸಿಕೊಂಡರೇ ನಿಗದಿತ ಅವಧಿಯಲ್ಲಿ ಗುರಿಸಾಧಿಸಬಹುದಾಗಿದೆ ಎಂದು ಎಂಜಿನಿಯರ್‌ಗಳಾದ ಶ್ರೀನಿವಾಸ್, ಚಿನ್ನಸ್ವಾಮಿ ಸಭೆಯಲ್ಲಿ ಭರವಸೆ ನೀಡಿದರು.

ತಾಲೂಕಿನಲ್ಲಿ 53 ಸಾವಿರ ಅನ್ನಭಾಗ್ಯ ಫಲಾನುಭವಿಗಳಿದ್ದು, 50 ಸಾವಿರದ 320 ಮಂದಿಗೆ ಯೋಜನೆಯ ಲಾಭದೊರೆಯುತ್ತಿದೆ. ಬಾಕಿ 3 ಸಾವಿರ ಮಂದಿಯ ದಾಖಲೆಗಳಲ್ಲಿ ಲೋಪ ಕಂಡುಬಂದಿದ್ದು, ಇದನ್ನು ಸಹ ಈ ತಿಂಗಳ ಅಂತ್ಯದೊಳಗೆ ಬಗೆಹರಿಸಲಾಗುವುದು ಎಂದು ಆಹಾರ ಇಲಾಖೆ ಅಧಿಕಾರಿ ಮಂಜು ಅವರು ಸಭೆಗೆ ಮಾಹಿತಿ ನೀಡಿದರು. ಇದುವರೆಗೂ 2 ಕೋಟಿ 28 ಲಕ್ಷದ 81 ಸಾವಿರ ರು. ಹಣ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಸಂದಾಯ ಆಗಿದೆ ಎಂದು ತಿಳಿಸಿದರು.

ಶಕ್ತಿ ಯೋಜನೆಯ ಪ್ರಯೋಜನವನ್ನು ಅರಕಲಗೂಡು ಘಟದಲ್ಲಿ 69 ಲಕ್ಷ ಮಂದಿ ಫಲಾನುಭವಿಗಳು ಪಡೆದುಕೊಂಡಿದ್ದಾರೆ. ಮಾಸಿಕ 1 ಕೋಟಿ 61ಲಕ್ಷ ರು. ಹಣ ನಿಗದಿಯಾಗಿದೆ. ಒಟ್ಟು 29 ಕೋಟಿ ರು. ಹಣ ನಿಗದಿಯಾಗಿದೆ. ಅದೇ ರೀತಿ ರಾಮನಾಥಪುರ ಘಟಕದಿಂದ 71 ಲಕ್ಷಮಂದಿ ಪ್ರಯಾಣ ಮಾಡಿದ್ದಾರೆ. ಮಾಸಿಕ 2 ಕೋಟಿಯಂತೆ ಒಟ್ಟು 2 ಕೋಟಿ ರು. ಆಗಿದೆ ಎಂದು ಘಟಕ ವ್ಯವಸ್ಥಾಪಕ ಹನುಮಂತಪ್ಪ ಸಭೆಗೆ ಮಾಹಿತಿ ನೀಡಿದರು.

ಯುವನಿಧಿ ಯೋಜನೆಯ ಪಯೋಜನ ನಮ್ಮ ತಾಲೂಕಿನ ಫಲಾನುಭವಿಗಳಿಗೆ ನಿರೀಕ್ಷಿತ ಮಟ್ಟದಲ್ಲಿ ಸಿಕ್ಕಿಲ್ಲ. ಕೇವಲ 119 ಮಂದಿ ಫಲಾನುಭವಿಗಳ ಮಾಹಿತಿಯನ್ನು ಸಭೆಗೆ ಅಧಿಕಾರಿ ನೀಡಿದ್ದಾರೆ. ಇನ್ನೂ ನೂರಾರು ಮಂದಿ ತಾಂತ್ರಿಕ ಶಿಕ್ಷಣ, ಪದವೀಧರರು ಇದ್ದು, ಇವರಿಗೆ ಸೌಕರ್ಯ ಸಿಗುವ ನಿಟ್ಟಿನಲ್ಲಿ ಸಮಿತಿ ಸದಸ್ಯರು ಕೈಜೋಡಿಸಲಾಗುವುದು. ಅಲ್ಲದೆ ಗ್ಯಾರಂಟಿ ಯೋಜನೆಗಳ ಶೇ.100ರಷ್ಟು ಅನುಷ್ಠಾನಕ್ಕೆ ಸಮಿತಿ ಸದಸ್ಯರು, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಒಟ್ಟಿಗೆ ಸೇರಿ ಕಾರ್ಯಕ್ರಮ ರೂಪಿಸಿ ಗುರಿಸಾಧಿಸುವ ನಿಟ್ಟಿನಲ್ಲಿ ಮುಂದಾಗೋಣ ಎಂದು ಶ್ರೀಧರ್‌ಗೌಡ ಸಭೆಯಲ್ಲಿ ಭರವಸೆ ನೀಡಿದರು. ಅಲ್ಲದೆ ಪ್ರತಿ ತಿಂಗಳಿಗೊಮ್ಮೆ ಸಮಿತಿ ಸಭೆಯನ್ನು ಕರೆದು ಪ್ರಗತಿ ಕುರಿತು ಚರ್ಚೆ ನಡೆಸೋಣ ಎಂದು ತಿಳಿಸಿದರು.

ಸಭೆಯಲ್ಲಿ ತಾಪಂ ಇಒ ಪ್ರಕಾಶ್,ಗ್ರೇಡ್-ತಹಸೀಲ್ದಾರ್‌, ಮಲ್ಲಿಕಾರ್ಜುನ್, ಸಮಿತಿ ಸದಸ್ಯರು ಉಪಸ್ಥಿತರಿದ್ದರು.