ಕನ್ನಡಪ್ರಭವಾರ್ತೆ ಸೋಮವಾರಪೇಟೆ

ತಾಲೂಕಿನ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಜೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ 9ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಎಸ್‌ವೈಎಸ್ ಸಾಂತ್ವಾನ ಸಮಿತಿಯ ಉಪಾಧ್ಯಕ್ಷ ಶಾಫಿ ಸಅದಿ ಅಧ್ಯಕ್ಷತೆಯಲ್ಲಿ ವಿಚಾರಗೋಷ್ಠಿ ನಡೆಯಿತು.ಯಡೂರು ಬಿಟಿಸಿಜಿ ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಬಿ.ಡಿ.ಹರ್ಷ ‘ಗ್ರಾಮೀಣ ಜನರ ಜಾನಪದ ಹಿನ್ನೆಲೆಯ ಸುಗ್ಗಿ ಹಬ್ಬಗಳು’ ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದರು. ಇಂದಿಗೂ ಗ್ರಾಮೀಣ ಭಾಗಗಳಲ್ಲಿ ಸಡಗರ ಸಂಭ್ರಮದಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಸುಗ್ಗಿ ಹಬ್ಬವನ್ನು ಕೇವಲ ಹಸಿರು ಧಾನ್ಯಗಳ ಕೃತಜ್ಞತೆಗಾಗಿ ಆಚರಿಸುವ ಹಬ್ಬ ಮಾತ್ರ ಅಲ್ಲ. ಹಳ್ಳಿಗಳ ಸಾಮಾಜಿಕ, ಸಾಂಸೃತಿಕ ಬದುಕಿನ ವಿಶಿಷ್ಟತೆ ಎಂದು ಬಣ್ಣಿಸಿದರು. ಹಬ್ಬದ ನೃತ್ಯಗಳು, ಧಾರ್ಮಿಕ ಆಚರಣೆ, ಕಟ್ಟುನಿಟ್ಟು ಎಲ್ಲವೂ ಗ್ರಾಮೀಣ ಜನರ ಬದುಕಿನ ಅಂಗವಾಗಿದೆ ಎಂದು ಹೇಳಿದರು. ತಾಲೂಕಿನಲ್ಲಿ ಪ್ರವಾಸೋದ್ಯಮ ಬೆಳವಣಿಗೆ ಬಗ್ಗೆ ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ಮಿಲನಾ ಭರತ್ ಉಪನ್ಯಾಸ ನೀಡಿದರು. ತಾಲೂಕಿನ ದೊಡ್ಡಮಳ್ತೆಯಲ್ಲಿ ಶಿಲಾಯುಗ ಮಾನವನ ಕುರುಹುಗಳನ್ನು ಕಾಣಬಹುದು. ಉತ್ತರ ಕನ್ನಡದ ಬನವಾಸಿಯ ಹಾನಗಲ್‌ನ ಕದಂಬರ ಶಾಖೆ ಸೋಮವಾರಪೇಟೆಯಲ್ಲೂ ಇತ್ತು ಎಂಬುದಕ್ಕೆ ಹಾನಗಲ್ಲು ಗ್ರಾಮ ಸಾಕ್ಷಿಯಾಗಿದೆ. ಜೈನರ ವಾಸದ ಕುರುಹುಗಳು ಹಾಗೂ ವೀರಗಲ್ಲುಗಳು ಇತಿಹಾಸ ಸಾರುತ್ತವೆ. ಮುಳ್ಳೂರು, ಕಲ್ಕಂದೂರು ಜೈನ ಬಸದಿಗಳು ಇತಿಹಾಸದ ಅಧ್ಯಯನಕ್ಕೆ ಸೂಕ್ತವಾಗಿದೆ. ಪರಿಸರಕ್ಕೆ ಪೂರಕ ಪ್ರಾವಾಸೋದ್ಯಮ ಬೆಳವಣಿಗೆಯಾಗಬೇಕು. ಪ್ರವಾಸಿ ತಾಣಗಳನ್ನು ಗುರುತಿಸಿ ಎಲ್ಲೆಡೆ ಸೂಕ್ತ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡುವ ಕೆಲಸ ಸರ್ಕಾರಗಳಿಂದಾಗಬೇಕು ಎಂದರು. ಇರುವ ಸ್ಥಳಗಳನ್ನು ಬಳಸಿಕೊಂಡು ಆಧ್ಯಾತ್ಮಿಕ ತಾಣ, ಕೃಷಿ ಪ್ರವಾಸೋದ್ಯಮವನ್ನಾಗಿ ಮಾಡಬೇಕು ಎಂದರು.ರೈತಾಪಿ ವರ್ಗದವರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಹೂವಯ್ಯ ಅವರು ವಿಷಯ ಮಂಡಿಸಿದರು. ಇಂದು ರೈತರು ಕೃಷಿ ಭೂಮಿಯಿಂದ ಒಕ್ಕೆಲಬ್ಬಿಸುವ ಹೆದರಿಕೆಯಲ್ಲಿಯೇ ಜೀವನ ಸಾಗಿಸಬೇಕಾಗಿದೆ. ಕಸ್ತೂರಿ ರಂಗನ್ ವರದಿ ಪರಿಣಾಮ ರೈತರನ್ನು ಕಾಡುತ್ತಿದೆ. ಸುಂದರ ಕೊಡಗಿನ ಫಲವತ್ತಾದ ಭೂಮಿಯಲ್ಲಿ ಬೆಳೆಯುತ್ತಿರುವ ಕಾಫಿ, ಕರಿಮೆಣಸು, ಏಲಕ್ಕಿ ಬೆಳೆಗಳಿಂದ ಸರ್ಕಾರಕ್ಕೆ ರೂ. 12 ಸಾವಿರ ಕೋಟಿ ರಾಜಧನ ಹೋಗುತ್ತಿದೆ. ಆದರೆ, ರೈತರಿಗೆ ಬೇಕಾದ ಸೌಲಭ್ಯಗಳನ್ನು ಒದಗಿಸುತ್ತಿಲ್ಲ. 2 ತಿಂಗಳಿಗೆ ವಿದ್ಯುತ್ ಬಳಸಿಕೊಳ್ಳಲು ಅವಕಾಶ ನೀಡುತ್ತಿಲ್ಲ. ತಂಬಾಕು ಬೆಳೆಗೆ ಉಚಿತ ವಿದ್ಯುತ್ ನೀಡುವ ಸರ್ಕಾರ, ಕೊಡಗಿನ ಕಾಫಿ ಕೃಷಿಗೆ ವಿದ್ಯುತ್ ನೀಡುತ್ತಿಲ್ಲ ಎಂದ ಅವರು ವನ್ಯಪ್ರಾಣಿಗಳ ಹಾವಳಿಯಿಂದ ರೈತರು ಕಂಗಾಲಾಗಿದ್ದಾರೆ. ವನ್ಯಪ್ರಾಣಿ ದಾಳಿಗೆ ಒಳಗಾದ ಕುಟುಂಬಕ್ಕೆ ಪರಿಹಾರದೊಂದಿಗೆ ಸರ್ಕಾರಿ ಉದ್ಯೋಗ ನೀಡಬೇಕು ಎಂದರು.ವೇದಿಕೆಯಲ್ಲಿ ರೈತ ಮುಖಂಡ ಕೀಜನ ಎಂ. ಲಕ್ಷ್ಮಣ ಇದ್ದರು.