ವಿಶ್ವದ ವಿವಿಧ ದೇಶಗಳ ಕೋಟ್ಯಂತರ ಜನತೆಗೆ ಉಚಿತ ಚಿಕಿತ್ಸೆ ನೀಡಿದ ಆರೋಗ್ಯ ಸೇವಾ ಸಂಸ್ಥೆಯ ಗೋಕರ್ಣ ಶಾಖೆ ಸೋಮವಾರ ಎಂಜಿ ಕಾಟೇಜ್‌ನಲ್ಲಿ ನಡೆದ ಸಮಾರಂಭದಲ್ಲಿ ವಿಧ್ಯುಕ್ತವಾಗಿ ಉದ್ಘಾಟನೆಗೊಂಡಿತು.

ನಿರಂಜನ್ ದೇಶಪಾಂಡೆ, ಚಂದನ್ ಶಂಕರ್ ಭಾಗಿ

ಕನ್ನಡಪ್ರಭ ವಾರ್ತೆ ಕಾರವಾರ

ವಿಶ್ವದ ವಿವಿಧ ದೇಶಗಳ ಕೋಟ್ಯಂತರ ಜನತೆಗೆ ಉಚಿತ ಚಿಕಿತ್ಸೆ ನೀಡಿದ ಆರೋಗ್ಯ ಸೇವಾ ಸಂಸ್ಥೆಯ ಗೋಕರ್ಣ ಶಾಖೆ ಸೋಮವಾರ ಎಂಜಿ ಕಾಟೇಜ್‌ನಲ್ಲಿ ನಡೆದ ಸಮಾರಂಭದಲ್ಲಿ ವಿಧ್ಯುಕ್ತವಾಗಿ ಉದ್ಘಾಟನೆಗೊಂಡಿತು.

ನಟ, ನಿರೂಪಕ ನಿರಂಜನ ದೇಶಪಾಂಡೆ ಮಾತನಾಡಿ, ಆರೋಗ್ಯ ಸೇವೆ ಉದ್ದೇಶ ತುಂಬಾ ಖುಷಿ ನೀಡಿದೆ. ಸಮಾಜಕ್ಕೆ ಏನನ್ನಾದರೂ ಕೊಡಬೇಕಾದದ್ದು ನಮ್ಮ ಕರ್ತವ್ಯ. ಆರೋಗ್ಯ ಸೇವಾ ವಿಶ್ವಾದ್ಯಂತ ಉಚಿತ ಸೇವೆ ನೀಡುತ್ತಿದೆ. ಇದರಲ್ಲಿ ಯಾವುದೇ ಲಾಭ ಇಲ್ಲ. ಕೇವಲ ಸೇವೆ ಮಾತ್ರ. ಗೋಕರ್ಣ ಹಾಗೂ ಸುತ್ತಮುತ್ತಲಿನ ಜನತೆಗೆ ಆರೋಗ್ಯ ಸೇವೆ ಅತ್ಯಗತ್ಯವಾಗಿದೆ. ಎಲ್ಲರೂ ಇವರೊಂದಿಗೆ ಕೈಜೋಡಿಸಿ. ಇಲ್ಲಿನ ಜನರಿಗೆ ಉತ್ತಮ ಆರೋಗ್ಯ ಸೇವೆ ಸಿಗುವಂತಾಗಲಿ ಎಂದು ಆಶಿಸಿದರು.

ಆರೋಗ್ಯ ಸೇವಾದ ಸಂಸ್ಥಾಪಕ, ನಿರ್ದೇಶಕ, ಡಾ. ದಯಾಪ್ರಸಾದ ಕುಲಕರ್ಣಿ, ನನ್ನ ಹುಟ್ಟೂರಾದ ಗೋಕರ್ಣದಲ್ಲಿ ಉಚಿತ ಆರೋಗ್ಯ ಸೇವೆ ನೀಡುವ ಉದ್ದೇಶದಿಂದ ಇಲ್ಲಿ ಶಾಖೆ ತೆರೆಯಲಾಗಿದೆ. ನಮ್ಮ ಸೇವೆಗೆ ಸ್ಥಳೀಯರ ಸಹಕಾರ ಮುಖ್ಯವಾಗಿದೆ. ಕರಾವಳಿ ಹಾಗೂ ಮಲೆನಾಡು ಪರಿಸರ ಸೂಕ್ಷ್ಮವಾಗಿದೆ. ಗೋಕರ್ಣದಲ್ಲಿ ಪ್ರವಾಸೋದ್ಯಮ ಭಾರಿ ಬೆಳವಣಿಗೆಯಾಗಿದೆ. ಅದರೆ ಇಲ್ಲಿನ ಪರಿಸರಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಇದಕ್ಕೆ ನಿಮ್ಮೆಲ್ಲರ ಸಹಕಾರ ಬೇಕು. ನಮ್ಮೊಂದಿಗೆ ಕೈಜೋಡಿಸಿ ಎಂದು ವಿನಂತಿಸಿದರು.

ನಟ, ಲೇಖಕ ಚಂದನ್ ಶಂಕರ್, ಗೋಕರ್ಣ ಭೂಸ್ವರ್ಗವೇ ಹೌದು. ಇಲ್ಲಿನ ಜನತೆ ಆರೋಗ್ಯಪೂರ್ಣರಾಗಿರಬೇಕು ಎನ್ನುವುದು ಆರೋಗ್ಯ ಸೇವಾದ ಉದ್ದೇಶ‌. ಡಾ. ದಯಾಪ್ರಸಾದ ಕುಲಕರ್ಣಿ ಬಡವರು, ಸಮಾಜದ ಕಟ್ಟಕಡೆಯ ಜನರಿಗೂ ಉಚಿತವಾಗಿ ಆರೋಗ್ಯ ಸೇವೆ ನೀಡುತ್ತಿದ್ದಾರೆ. ಜನತೆ ಇದರ ಸಂಪೂರ್ಣ ಪ್ರಯೋಜನ ಪಡೆಯುವಂತೆ ತಿಳಿಸಿದರು.

ನಿವೃತ್ತ ಜಿಲ್ಲಾ ಆಯುಷ್ ಅಧಿಕಾರಿ ಡಾ. ಸಾವಿತ್ರಿ, ಆರೋಗ್ಯ ಸೇವಾ ಅತ್ಯುತ್ತಮ ಕಾರ್ಯ ಮಾಡುತ್ತಿದೆ. ನಮ್ಮ ಸಹಕಾರ ಎಂದಿಗೂ ಇರಲಿದೆ ಎಂದು ತಿಳಿಸಿದರು.

ಕಾರ್ಯಕ್ರಮ ವೇದಘೋಷದೊಂದಿಗೆ ಆರಂಭವಾಯಿತು. ಶ್ರೀವಿದ್ಯಾ ಹರೀಶ್ ವಂದಿಸಿದರು. ಗಾನ ಮೂರ್ತಿ ಕಾರ್ಯಕ್ರಮ ನಿರ್ವಹಿಸಿದರು.

ಸಭಾ ಕಾರ್ಯಕ್ರಮದ ಬಳಿಕ ಕಂಸವಧೆ ಯಕ್ಷಗಾನ ಪ್ರದರ್ಶನ ನಡೆಯಿತು. ಎಂಜಿ ಕಾಟೇಜ್‌ನ ರಮೇಶ ಪಂಡಿತ್ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಸಂಘಟಿಸಿದ್ದರು.ಪ್ರಶಂಸೆ

ಆರೋಗ್ಯ ಸೇವಾ ಗೋಕರ್ಣ ಶಾಖೆ ಉದ್ಘಾಟನಾ ಸಮಾರಂಭದಲ್ಲಿ ಗೋಕರ್ಣದ ಜನತೆ ಅಷ್ಟೇ ಅಲ್ಲ, ಕೆಲ ವಿದೇಶೀಯರೂ ಆಸಕ್ತಿಯಿಂದ ಕಾರ್ಯಕ್ರಮ ಮುಗಿಯುವ ತನಕ ಕುಳಿತಿದ್ದು, ಡಾ. ದಯಾಪ್ರಸಾದ್ ಕುಲಕರ್ಣಿ ಅವರ ಸೇವಾ ಮನೋಭಾವನೆಯನ್ನು ಪ್ರಶಂಸಿಸಿದರು.